ಕರಾವಳಿ: ಧಾರಾಕಾರ ಮಳೆ; ಮಹಿಳೆ ಸಾವು
Team Udayavani, Aug 6, 2020, 7:35 AM IST
ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಮಳೆ ಚುರುಕು ಗೊಂಡಿದ್ದು, ಅವಿಭಜಿತ ದ.ಕ. ಜಿಲ್ಲೆಯಾದ್ಯಂತ ಬುಧವಾರ ಧಾರಾಕಾರ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಹಾನಿ ಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಉಡುಪಿಯ ಅಂಬಾಗಿಲು ಪುತ್ತೂರು ಗ್ರಾಮ ಗುಲಾಬಿ (60) ಅವರು ಜು. 4ರಂದು ನಿಟ್ಟೂರು- ಹನುಮಂತ ನಗರದ ರಸ್ತೆಯಲ್ಲಿ ಕತ್ತಲಿನಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ, ಮಳೆ ನೀರಿನ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ.
ಮಂಗಳೂರು ಹಾಗೂ ಉಡುಪಿ ನಗರದಲ್ಲಿ ಬುಧವಾರ ಬೆಳಗ್ಗೆ ಯಿಂದಲೇ ಉತ್ತಮ ಮಳೆ ಆರಂಭವಾಗಿತ್ತು. ಸಂಜೆ ವೇಳೆ ಮತ್ತೆ ಮಳೆ ಬಿರುಸು ಪಡೆದಿತ್ತು. ಉಭಯ ಜಿಲ್ಲೆಗಳಲ್ಲಿ ಸುಮಾರು 84ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಬೆಳ್ತಂಗಡಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಮಲವಂತಿಗೆ ಗ್ರಾಮದ ದಿಡುಪೆಯ ಕಲೆºಟ್ಟಿನ ಕಿರು ಸೇತುವೆ ಸಂಪರ್ಕ ಕಡಿದು ಹೋಗಿದ್ದು ಅಪಾಯದಲ್ಲಿದೆ. ನೇತ್ರಾವತಿ, ಮೃತ್ಯುಂಜಯ ನದಿ ನೀರಿನ ಮಟ್ಟ
ಏರಿಕೆಯಾಗಿದೆ. ಬಂಟ್ವಾಳ ತಾಲೂಕಿ ನಲ್ಲಿ 13 ಮನೆಗಳಿಗೆ ಹಾನಿಯಾಗಿದೆ.
ಜಿಲ್ಲಾಧಿಕಾರಿಗಳಿಗೆ ಕರೆ
ಮಳೆಯಿಂದ ಸಂಭವಿಸಿರುವ ಹಾನಿ ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಂದ ಸಂಜೆ ದೂರ ವಾಣಿಯಲ್ಲಿ ಮಾಹಿತಿ ಪಡೆದರು. ಕಂದಾಯ ಸಚಿವ ಆರ್. ಅಶೋಕ್ ಅವರು ದ.ಕ. ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು.ಮಳೆಗಾಲ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದ್ದು, ತಾಲೂಕು ಮಟ್ಟದ ಅಧಿಕಾರಿಗಳ ಜತೆ ಈಗಾಗಲೇ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಮಳೆಗಾಲಕ್ಕೆ ಕೈಗೊಂಡ ಮುಂಜಾಗ್ರತೆ ಕುರಿತು ಅವರು ವಿವರ ನೀಡಿದರು.
ಕುಮಾರಧಾರಾ ಸ್ನಾನಘಟ್ಟ ಮುಳುಗಡೆ
ಸುಬ್ರಹ್ಮಣ್ಯ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಯಾಗುತ್ತಿದ್ದು, ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ನೂಜಿ ಬಾಳ್ತಿಲ ಬಳಿ ಕೃಷಿ ತೋಟಕ್ಕೆ ಹಾನಿ ಉಂಟಾಗಿದೆ.