ಕೇಂದ್ರದ ಮಾರ್ಗಸೂಚಿ ಆಧರಿಸಿ ಕಂಬಳ ಆಯೋಜನೆಗೆ ನಿರ್ಧಾರ
Team Udayavani, Nov 16, 2020, 11:15 AM IST
ಮಂಗಳೂರು: ಕೇಂದ್ರ ಸರಕಾರದ ಮುಂದಿನ ಮಾರ್ಗಸೂಚಿಯನ್ನು ಆಧರಿಸಿ ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಹೇಳಿದರು.
ನಗರದಲ್ಲಿ ರವಿವಾರ ನಡೆದ ಕಂಬಳ ಸಮಿತಿ ಮತ್ತು ಕಂಬಳ ವ್ಯವಸ್ಥಾಪಕರ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಡೆಸುವುದು ನಮ್ಮೆಲ್ಲರ ಆಸೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಅವರು ಪೂರಕವಾಗಿ ಸ್ಪಂದಿಸಿ ಮುಂದಿನ ಮಾರ್ಗಸೂಚಿಯನ್ನು ಅವಲೋಕಿಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಕಂಬಳಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಹೊಸ ಮಾರ್ಗಸೂಚಿ ಬಂದ ಕೂಡಲೇ ಸಮಿತಿಯು ಕಂಬಳ ಆಯೋಜನೆ ಬಗ್ಗೆ ನಿರ್ಧರಿಸಲಾಗುವುದು. ಪೂರ್ವ ತಯಾರಿ ಸೇರಿದಂತೆ ಇತರ ವಿಷಯ ಚರ್ಚಿಸಲು ಡಿಸೆಂಬರ್ ನಲ್ಲಿ ಸಮಿತಿಯು ಮತ್ತೂಮ್ಮೆ ಸಭೆ ಸೇರಲಿದೆ. ಜನವರಿಯಿಂದ ಕಂಬಳ ಆಯೋಜಿಸುವುದಾದರೆ ಸರ್ವರೂ ಸಹಕರಿಸಬೇಕು ಎಂದರು.
ಇದನ್ನೂ ಓದಿ:ಮನೆಗೆ ಮರಳುವ ಆಸೆಗೆ ಕೊರೊನಾ ತಣ್ಣೀರು! ನಿರಾಶ್ರಿತರ ಕೇಂದ್ರಗಳಲ್ಲಿ ನೂರಾರು ಮಂದಿ ಬಾಕಿ
ಕಂಬಳ ಸಮಿತಿಯ ಉಪಾಧ್ಯಕ್ಷ ತಿರುವೈಲುಗುತ್ತು ನವೀನ್ ಆಳ್ವ, ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಸುರೇಶ್ ಪೂಜಾರಿ, ಮಾಜಿ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕಂಬಳ ಕೋಣಗಳ ಯಜಮಾನರು, ವ್ಯವಸ್ಥಾಪಕರಾದ ಎರ್ಮಾಳು ರೋಹಿತ್ ಹೆಗ್ಡೆ, ಬೃಜೇಶ್ ಚೌಟ, ವಿಶಾಲ್ ಕೆ. ಪೂಜಾರಿ ಬೋಳೂರು, ಚಂದ್ರಹಾಸ ಶೆಟ್ಟಿ, ರಕ್ಷಿತ್, ರಾಮಚಂದ್ರ ನಾಯಕ್ ಮೂಲ್ಕಿ, ಕಂಬಳ ಕೋಣಗಳ ಯಜಮಾನ ಮುಚ್ಚಾರು ಕಲ್ಕುಡ ಲೋಕೇಶ್ ಶೆಟ್ಟಿ, ಮಾಂಕಾಳಿಪಡ್ಪು ಸೀತಾರಾಮ್ ಶೆಟ್ಟಿ ಉಪಸ್ಥಿತರಿದ್ದರು