ಮನೆ ಬೆಂಕಿಗೆ ಆಹುತಿ; 8 ಲಕ್ಷ ರೂ. ನಷ್ಟ
Team Udayavani, Mar 5, 2019, 7:20 AM IST
ಮಂಗಳೂರು: ನಗರದ ಜಪ್ಪುಪಟ್ಣದಲ್ಲಿ ರವಿವಾರ ತಡರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ಸಂತೋಷ್ ಅವರ ಹಂಚಿನ ಮನೆ ಸಂಪೂರ್ಣ ಸುಟ್ಟು ಹೋಗಿದೆ.
ಸಕಾಲದಲ್ಲಿ ಎಚ್ಚರವಾಗಿದ್ದರಿಂದ ಯಾರಿಗೂ ಅಪಾಯ ಸಂಭವಿಸಿಲ್ಲ. ಮನೆಯ ಛಾವಣಿ ಪಕ್ಕಾಸು, ರೀಪು, ಬಟ್ಟೆ ಬರೆ, ಫರ್ನಿಚರ್ ಇತ್ಯಾದಿ ಪೂರ್ತಿ ಬೆಂಕಿಗಾಹುತಿಯಾಗಿದ್ದು, ಸುಮಾರು 8 ಲಕ್ಷ ರೂ. ನಷ್ಟ ಸಂಭವಿಸಿದೆ. ಅಗ್ನಿ ಶಾಮಕ ದಳದ ಎರಡು ವಾಹನಗಳು ಸಕಾಲದಲ್ಲಿ ಬಂದು ಬೆಂಕಿ ನಂದಿಸಿದ ಕಾರಣ ಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿ ಹೋಗಿದೆ.
ಸಂತೋಷ್ ಮತ್ತು ಅವರ ಪತ್ನಿ ಹಾಗೂ ಮಗು ಮಲಗಿದ್ದು, ತಡ ರಾತ್ರಿ 12 ಗಂಟೆ ವೇಳೆಗೆ ಮನೆಯ ಮೂಲೆಯಲ್ಲಿ ಪಟ ಪಟ ಶಬ್ಧ ಕೇಳಿಸಿತ್ತು. ಕೂಡಲೇ ಎಚ್ಚತ್ತು ನೋಡಿದಾಗ ಮನೆಯ ಒಂದು ಭಾಗಕ್ಕೆ ಬೆಂಕಿ ತಗುಲಿರುವುದು ಕಂಡು ಬಂದಿತ್ತು. ಪಕ್ಕದ ಮನೆಯವರನ್ನು ಎಬ್ಬಿಸಿ ಪೊಲೀಸ್ ಮತ್ತು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಪಾಂಡೇಶ್ವರ ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದರು. ವಿದ್ಯುತ್ ಶಾರ್ಟ್ ಸಕೀìಟ್ನಿಂದ ಈ ಘಟನೆ ಸಂಭವಿಸಿರ ಬಹುದೆಂದು ಭಾವಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.