ಸ್ವಚ್ಛಗೊಳ್ಳುತ್ತಿದೆ ನಗರದ ಕದ್ರಿ ಪಾರ್ಕ್
Team Udayavani, Sep 12, 2022, 1:58 PM IST
ಮಹಾನಗರ: ಮಂಗಳೂರು ಅತೀ ದೊಡ್ಡ ಪಾರ್ಕ್ ಎನಿಸಿದ ಕದ್ರಿ ಪಾರ್ಕ್ ಸ್ವಚ್ಛತಾ ಕಾರ್ಯ ಸದ್ಯ ನಡೆಯುತ್ತಿದೆ.
ಪಾರ್ಕ್ನ ಒಳಭಾಗದಲ್ಲಿ ಬೆಳೆದಿರುವ ಹುಲ್ಲು ಕಟಾವು ಕೆಲಸ ಆರಂಭಗೊಂಡಿದೆ. ಇನ್ನು, ಪಾರ್ಕ್ನಲ್ಲಿರುವ ಹಳೆಯ ಕಾರಂಜಿ ಬಳಿಯೂ ಸ್ವಚ್ಛತೆ ಶುರುವಾಗಿದೆ. ಈ ಹಿಂದೆ ಪಾರ್ಕ್ ಒಳಭಾಗವು ಅವ್ಯವಸ್ಥೆಯಿಂದ ಕೂಡಿ ನಿರ್ವಹಣೆ ಮರೀಚಿಕೆಗೊಂಡಿತ್ತು. ಈ ನಿಟ್ಟಿನಲ್ಲಿ “ಸುದಿನ’ದಲ್ಲಿ ಸೆ. 7ರಂದು “ಕದ್ರಿ ಪಾರ್ಕ್ ಅಭಿವೃದ್ಧಿಗೆ ಮೀನ ಮೇಷ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು.
ಇದೀಗ ಮೊದಲನೇ ಹಂತವಾಗಿ ಪಾರ್ಕ್ ಸುತ್ತಲೂ ಸ್ವತ್ಛಗೊಳಿಸುವ ಕೆಲಸ ಆರಂಭಗೊಂಡಿದೆ. ಕೆಟ್ಟು ಹೋದ ಹೈಮಾಸ್ಟ್ ದೀಪ ದುರಸ್ತಿ ಪಾರ್ಕ್ನಲ್ಲಿರುವ ದೊಡ್ಡ ಹೈಮಾಸ್ಟ್ ದೀಪ ಕೆಲವು ದಿನಗಳಿಂದ ಕೆಟ್ಟು ಹೋಗಿದ್ದು, ಪಾರ್ಕ್ಗೆ ಆಗಮಿಸುವವರಿಗೆ ತೊಂದರೆ ಉಂಟಾಗಿದೆ. ಪಾರ್ಕ್ ಒಳಗಡೆ ಬಹುತೇಕ ಸೋಲಾರ್ ವಿದ್ಯುತ್ ದೀಪ ಇರುವ ಕಾರಣ ಮಳೆಗಾಲದಲ್ಲಿ ಕೆಲವೊಂದು ಉರಿಯುತ್ತಿಲ್ಲ.
ಈ ನಿಟ್ಟಿನಲ್ಲಿ ಹೈಮಾಸ್ಟ್ ದೀಪ ದುರಸ್ತಿ ಸದ್ಯದಲ್ಲೇ ನಡೆಯಲಿದೆ. ಸ್ಕೈಲಿಪ್ಟ್, ಕೆಟ್ಟು ಹೋದ ಆಟಿಕೆ ಚೈನ್ ಸಹಿತ ಆಟಿಕೆ ಉಪಕರಣಗಳನ್ನು ಸದ್ಯದಲ್ಲೇ ಬದಲಾಯಿಸಲಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.