ಮಲ್ಪೆ ಮೀನುಗಾರಿಕೆ ಬಂದರಿನ ದಕ್ಕೆ: ನೀರಿಗೆ ‘ತ್ಯಾಜ್ಯದ ಸುರಿಮಳೆ’
Team Udayavani, Apr 27, 2022, 12:36 PM IST
ಮಲ್ಪೆ: ಮೀನುಗಾರರ ಅನ್ನದ ಬಟ್ಟಲೆಂದೇ ಪರಿಗಣಿಸಲಾದ ಮಲ್ಪೆ ಮೀನುಗಾರಿಕೆ ಬಂದರಿನ ದಕ್ಕೆಯ ನೀರಿನಲ್ಲಿ ರಾಶಿ ರಾಶಿ ಕಸ ಕಂಡು ಬರುತ್ತಿರುವುದು ಪ್ರಜ್ಞಾವಂತ ಮೀನುಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಜನರು ತ್ಯಾಜ್ಯವನ್ನು ನೀರಿಗೆ ಎಸೆಯುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಈ ತ್ಯಾಜ್ಯಗಳು ಹೊಳೆಯ ಮೂಲಕ ಹರಿದು ಸಮುದ್ರ ಸೇರುತ್ತಿದ್ದು, ಅಲೆಗಳೊಂದಿಗೆ ಮತ್ತೆ ಕಡಲತೀರವನ್ನು ಸೇರುತ್ತದೆ. ಕೆಲವೊಂದು ಸಂಘ ಸಂಸ್ಥೆಗಳು ಆಗಾಗ ಶ್ರಮದಾನದ ಮೂಲಕ ಸ್ವಚ್ಛತ ಕಾರ್ಯವನ್ನು ನಡೆಸುತ್ತಿದ್ದಾರೆ.
ಸ್ಥಳೀಯ ಆಡಳಿತ ಅಲ್ಲಿಲ್ಲಿ ಕಸ ಎಸೆಯು ವುದರ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ಮನೆ ಕಸವನ್ನು ತಮ್ಮ ವಾಹನಗಳಿಗೆ ನೀಡಬೇಕೆಂದು ನಿಯಮವನ್ನು ರೂಪಿಸಿದೆ. ಕೆಲವೊಂದು ಕಡೆ ಬ್ಲ್ಯಾಕ್ಸ್ಪಾಟ್ ಏರಿಯಾ ಗುರುತಿಸಿ, ಅಲ್ಲಿ ಕಸ ಹಾಕದಂತೆ ಗಾರ್ಡನ್ ನಿರ್ಮಿಸಿದೆ. ಮನೆ ಮನೆಗೆ ಬರುವ ಕಸದ ಗಾಡಿಗೆ ಕಸ ಕೊಡದ ಇವರು ಕಸವನ್ನು ನೇರವಾಗಿ ಬಂದರಿನ ತಂದು ಕದ್ದು ಮುಚ್ಚಿ ಸುರಿಯುತ್ತಾರೆ ಎಂದು ಮೀನುಗಾರರು ಆರೋಪಿಸುತ್ತಾರೆ.
ಮೀನು ಉತ್ಕೃಷ್ಟ ಗುಣಮಟ್ಟದ ಆಹಾರವೆಂದು ಪರಿಗಣಿಸಲಾಗಿದೆ. ಸಮುದ್ರದಿಂದ ಹಿಡಿದ ಮೀನು ಹಾಳಗದಂತೆ ಮೀನುಗಾರಿಕೆ ಬಂದರು ಅಥವಾ ಇಳಿದಾಣದಲ್ಲಿ ಶುಚಿತ್ವ ಕಾಪಾಡುವುದು ಅತ್ಯವಶ್ಯಕ. ಹಿಡಿದ ಮೀನಿಗೆ ಉತ್ತಮ ಬೆಲೆ ಬರಲು ಮೀನಿನ ತಾಜಾತನ ಜತೆಗೆ ತ್ಯಾಜ್ಯ ನಿರ್ಮೂಲನೆ, ಪ್ರಾಂಗಣ ಶುಚಿತ್ವವನ್ನು ಮಾಡಬೇಕಾಗಿದೆ. ನೀರಿನಲ್ಲಿ ಕೊಳೆಯುತ್ತಿರುವ ತ್ಯಾಜ್ಯಗಳು ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತದೆ.
ಕಟ್ಟುನಿಟ್ಟಿನ ಕ್ರಮ
ಈ ಹಿಂದೆ ಇಲ್ಲಿನ ಅಂಗಡಿ ಮುಂಗಟ್ಟುಗಳ ತ್ಯಾಜ್ಯವನ್ನು ಅಲಲ್ಲಿ ಸುರಿಯುತ್ತಿರುವುದು ಕಂಡು ಬಂದಿದ್ದು, ಇಲಾಖೆ ಸಹಕಾರದಿಂದ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದೀಗ ಜನರು ಇಲ್ಲಿಗೆ ತಂದು ಎಸೆಯುತ್ತಿರುವುದು ಅಕ್ಷಮ್ಯ ಅಪರಾಧ. ಮುಂದೆ ಅಂತವರು ಕಂಡು ಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಸಂಬಂಧಪಟ್ಟ ಇಲಾಖಾ ಸಹಕಾರವನ್ನು ಪಡೆದುಕೊಳ್ಳಲಾಗುತ್ತದೆ. -ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ
ಸೂಕ್ತ ಕ್ರಮ ಕೈಗೊಳ್ಳಲಿ
ತ್ಯಾಜ್ಯಗಳು ನೀರಿನಲ್ಲಿ ಕೊಳೆತು ದುರ್ನಾತ ಬೀರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯುವುದಕ್ಕಾಗಿ ಕ್ರಮ ಕೈಗೊಳ್ಳುತ್ತಿದ್ದಂತೆ ಇದೀಗ ತ್ಯಾಜ್ಯರಾಶಿಗಳು ಅಲ್ಲಲ್ಲಿ ಪ್ರತ್ಯಕ್ಷಗೊಂಡಿದೆ. ಇಂತವರ ವಿರುದ್ಧ ಇಲಾಖಾಧಿಕಾರಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು. -ಶಶಿಧರ್, ಸ್ಥಳೀಯ ಮೀನುಗಾರ