ಈಜುಕೊಳವಾದ ನಿರ್ಮಾಣ ಹಂತದಲ್ಲಿನ ಮಾರ್ಕೆಟ್ ಪ್ರದೇಶ
Team Udayavani, Jul 9, 2020, 5:17 AM IST
ಸುರತ್ಕಲ್: ನಿರ್ಮಾಣ ಹಂತದಲ್ಲಿರುವ ಮಾರ್ಕೆಟ್ ಪ್ರದೇಶ ಭಾರೀ ಮಳೆಗೆ ಈಜುಕೊಳವಾಗಿ ಮಾರ್ಪಟ್ಟಿದೆ. ಸುರತ್ಕಲ್ನ ಎತ್ತರದ ಪ್ರದೇಶ ದಿಂದ ಮಳೆನೀರು ನೇರವಾಗಿ ಇಲ್ಲಿನ ತಳ ಅಂತಸ್ತಿಗೆ ಬಂದು ಸೇರುತ್ತಿದ್ದು, ಇದೀಗ ಸುಮಾರು ಎಂಟು ಅಡಿಗಳಷ್ಟು ನೀರು ನಿಂತಿದೆ. ಸುರತ್ಕಲ್ನ ವಿವಿಧ ಪ್ರದೇಶಗಳ ಚರಂಡಿ ನೀರನ್ನು ಮಳೆಗಾಲದಲ್ಲಿ ಒಟ್ಟಿಗೆ ಹರಿಯ ಬಿಡುತ್ತಿರುವುದರಿಂದ ಮಾರ್ಕೆಟ್ ಸುತ್ತಮುತ್ತ ಸ್ವತ್ಛತೆ ಸಮಸ್ಯೆ ಎದುರಾಗಲಿದೆ.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳು ವ್ಯಾಪಿಸಲು ಕಾರಣವಾಗಬಹುದು. ಮುಂಜಾಗ್ರತ ಕ್ರಮವಾಗಿ ಇಲ್ಲಿ ಮಳೆ ನೀರು ಹರಿಯದಂತೆ ವ್ಯವಸ್ಥೆ ಮಾಡದೆ ಈ ಸಮಸ್ಯೆ ಉಂಟಾಗಿದೆ.
ಮುಂಜಾಗ್ರತೆ ವಹಿಸಲಾಗಿದೆ
ನಿರ್ಮಾಣ ಹಂತದಲ್ಲಿರುವ ಹೊಸ ಮಾರ್ಕೆಟ್ನ ತಳ ಅಂತಸ್ತಿನಲ್ಲಿ ಮಳೆ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಸುತ್ತಲೂ ತಗಡು ಶೀಟ್ ಅಳವಡಿಸಿದ್ದೇವೆ. ಕಳೆದ ವರ್ಷ ಗುತ್ತಿಗೆದಾರರು ಕಾಮಗಾರಿ ನಡೆಯುವಾಗ ನೀರು ಖಾಲಿ ಮಾಡಿದ್ದರು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಂಡಿದ್ದು, ಪಾಲಿಕೆ ಎಚ್ಚರಿಕೆ ವಹಿಸಿದೆ. ಮಳೆಗಾಲ ಮುಗಿಯುವವರೆಗೆ ಮುಂಜಾಗ್ರತೆ ವಹಿಸಲಾಗುವುದು. ಬಳಿಕ ಪಂಪ್ ಅಳವಡಿಸಿ ನೀರು ಖಾಲಿ ಮಾಡುವ ಬಗ್ಗೆ ಕ್ರಮ ಜರಗಿಸಲಾಗುವುದು.
-ಸದಾಶಿವ ಮೂರ್ತಿ ಎಇಇ, ಸುರತ್ಕಲ್ ಉಪವಲಯ ಆಯುಕ್ತರು