ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧ : ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ
Team Udayavani, Jul 7, 2020, 11:29 AM IST
ಉಳ್ಳಾಲ: ಮಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳ ಸರಕಾರ ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧಿಸಿದ ಕಾರಣ ಪಾಸ್ ಹಿಡಿದು ದಿನನಿತ್ಯ ಕೆಲಸಕ್ಕೆ ಬರುತ್ತಿದ್ದವರನ್ನು ಕೇರಳ ಪೊಲೀಸರು ತಲಪಾಡಿಯಲ್ಲಿ ತಡೆಹಿಡಿದಿರುವುದು ಗೊಂದಲಕ್ಕೆ ಕಾರಣವಾಗಿದೆ.100 ಕ್ಕೂ ಅಧಿಕ ಮಂದಿ ಸ್ಥಳದಲ್ಲಿ ಜಮಾಯಿಸಿ ಪೊಲೀಸರ ಜತೆಗೆ ವಾಗ್ವಾದ ನಡೆಸಿದ್ದು, ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣ ಆಗಿದೆ.
ಜು.11 ರ ಅವಧಿವರೆಗೆ ದ.ಕ ಜಿಲ್ಲಾಡಳಿತ ನೀಡಿರುವ ಪಾಸ್ ಇದೆ. ಅಷ್ಟು ಸಮಯ ಬಿಡಬೇಕು ಎಂದು ಮಂಗಳೂರಿಗೆ ಬರುವ ಮಂದಿ ಕೇರಳ ಪೊಲೀಸರನ್ನು ಒತ್ತಾಯಿಸಿದ್ದಾರೆ. ಆದರೆ ಮಂಗಳೂರು ಬಂದ ಐದು ಮಂದಿಯಲ್ಲಿ ಕೋವಿಡ್ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ಸರಕಾರದ ಕಠಿಣ ಆದೇಶ ಇರುವುದರಿಂದ ಮಂಗಳೂರಿಗೆ ಹೋದಲ್ಲಿ ಅಲ್ಲಿಯೇ ಉಳಿದುಕೊಳ್ಳಿ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಇದರಿಂದ ಪೊಲೀಸರ ಹಾಗೂ ಜನರ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣ ಆಗಿದೆ. ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.