ಎಲ್ಲೆಡೆ ನಿಂತ ನೀರು; ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನತೆ
Team Udayavani, Aug 4, 2019, 5:00 AM IST
ಸುರತ್ಕಲ್: ಮನಪಾದ ಉಪವಲಯ ಸುರತ್ಕಲ್ ವ್ಯಾಪ್ತಿಯ ಮೀನಕಳಿಯ, ಸದಾಶಿವ ನಗರ ಸಹಿತ ವಿವಿಧೆಡೆ ತೋಡು, ತಗ್ಗು ಪ್ರದೇಶದಲ್ಲಿ ಮಳೆ ನೀರು, ಕೊಳಚೆ ನೀರಿನ ಸಂಗ್ರಹ ವಾಗಿದ್ದು, ಸೊಳ್ಳೆ ಉತ್ಪತ್ತಿ ತಾಣವಾಗಿದೆ.
ಕ್ರಮ ವಿಳಂಬ
ಡೆಂಗ್ಯೂ ಕುರಿತು ಮುಂಜಾಗ್ರತಾ ಕ್ರಮದ ಅಂಗವಾಗಿ ಸಾರ್ವಜನಿಕರು ತಮ್ಮ ತಮ್ಮ ವ್ಯಾಪ್ತಿಗಳಲ್ಲಿ ಸ್ವಚ್ಛತೆಯಿಲ್ಲ ಎಂಬ ದೂರುಗಳನ್ನು ನೀಡಿದರೂ ಪಾಲಿಕೆ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ತೊಟ್ಟೆಗಳನ್ನು ಎಸೆಯಲಾಗುತ್ತಿದೆ. ತಡಂಬೈಲ್, ಕುಳಾಯಿ, ಕಾಟಿಪಳ್ಳ ಸಹಿತ ವಿವಿಧೆಡೆ ರಸ್ತೆ ಬದಿ ಕಸ ಕಂಡು ಬರುತ್ತಿದೆ.
ಜಿಲ್ಲಾಡಳಿತ ಸ್ವಚ್ಛತೆ ಕಾಪಾಡಿ ಎಂದು ಹೇಳುತ್ತಿದೆ. ಆದರೆ ಮನೆ ಸುತ್ತಮುತ್ತ ಬೃಹತ್ ಪ್ರಮಾಣದಲ್ಲಿ ನೀರು ನಿಂತರೆ ಏನು ಕ್ರಮ ಕೈಗೊಳ್ಳುವುದು. ಅದನ್ನು ಸ್ವತ್ಛಗೊಳಿಸುವುದು ಸ್ವಲ್ಪ ಕಷ್ಟ. ಈ ಬಗ್ಗೆ ಪಾಲಿಕೆಯೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರಾದ ರಾಮ್ ಅವರ ಅಭಿಪ್ರಾಯ.
ಮಳೆ ನೀರು ಹರಿಯುವ ಯೋಜನೆಯೇ ಅವೈಜ್ಞಾನಿಕ
ಬೈಕಂಪಾಡಿ ಬಳಿ ಸಮುದ್ರಕ್ಕೆ ಮಳೆ ನೀರು ಹರಿಯುವ ವ್ಯವಸ್ಥೆಯೇ ಅವೈಜ್ಞಾನಿಕವಾಗಿದೆ. ತೋಡಿದ್ದರೂ ಮಳೆ ನೀರು ಹರಿಯುವುದಿಲ್ಲ. ಇನ್ನು ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆದ ಬಳಿಕ ಮಳೆ ನೀರು ಎರಡೂ ಕಡೆ ನಿಂತು ಪಾಚಿ ಹಿಡಿಯಲಾರಂಭಿಸಿದೆ.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸುರತ್ಕಲ್ನ ಸದಾಶಿವ ನಗರ 1ನೇ ಅಡ್ಡರಸ್ತೆಯಲ್ಲಿ ಮಳೆನೀರು ಹರಿದು ಸಮುದ್ರ ಸೇರಲು 15 ವರ್ಷಗಳ ಹಿಂದೆ ನಿರ್ಮಾಣಗೊಂಡ ರಾಜ ಕಾಲುವೆಯನ್ನು ಕಳೆದ ವರ್ಷ ಪಾಲಿಕೆಯ ವತಿಯಿಂದ ದುರಸ್ತಿಗೊಳಿಸಲಾಗಿದ್ದು, ಈ ಪುನರ್ ನಿರ್ಮಾಣ ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿದೆ. ದುರಸ್ತಿಯ ಬಳಿಕ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ, ನಿಂತನೀರು ಹಸುರುಬಣ್ಣಕ್ಕೆ ತಿರುಗಿದ್ದು, ದುರ್ನಾತ ಬೀರಿ ಸೊಳ್ಳೆ ಉತ್ಪಾದನೆಯ ಕೇಂದ್ರವಾಗಿದೆ. ಇದೀಗ ಮಳೆಯೂ ಆಗ್ಗಾಗ್ಗೆ ಬಂದು ರಸ್ತೆ ಬದಿ, ತೋಡು, ಹಳ್ಳದಲ್ಲಿ ನೀರು ನಿಂತ ಕಾರಣ ಎಲ್ಲಿ ಡೆಂಗ್ಯೂ ಆವರಿಸಿಕೊಳ್ಳುವುದೋ ಎಂಬ ಆತಂಕದಲ್ಲಿದ್ದಾರೆ ಸ್ಥಳೀಯರು.
ಸ್ವಚ್ಛತೆ ಕಾಪಾಡುವ ಜವಾಬ್ದಾರಿ ವಹಿಸಿ
ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಲಾರ್ವ ನಿರ್ಮೂಲನಕ್ಕೆ ಸಮಾರೋಪಾದಿಯಲ್ಲಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರೂ ತಮ್ಮ ಮನೆಯ ಸುತ್ತ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು.
- ಮಧು, ಅಧಿಕಾರಿ, ಪರಿಸರ ವಿಭಾಗ, ಪಾಲಿಕೆ