ಕೋವಿಡ್ ಪ್ರಕರಣ ; ತಪಾಸಣೆಯಲ್ಲಿ ಹೆಚ್ಚುತ್ತಿದೆ ಪಾಸಿಟಿವ್-ನೆಗೆಟಿವ್ ಗೊಂದಲ!
ವ್ಯಾಪಕವಾಗಿ ಹರಡುತ್ತಿರುವ ಕೋವಿಡ್; ಪರೀಕ್ಷಾ ವರದಿಗಳಲ್ಲಿ ವಿಭಿನ್ನ ಫಲಿತಾಂಶ
Team Udayavani, Aug 3, 2020, 3:37 PM IST
ಸಾಂದರ್ಭಿಕ ಚಿತ್ರ
ಮಹಾನಗರ: ದ.ಕ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟಾಗ ಕೆಲವು ವ್ಯಕ್ತಿಗಳಿಗೆ ಒಂದು ಕಡೆ ಪಾಸಿಟಿವ್ ವರದಿ ಬಂದರೆ; ಇನ್ನೊಂದೆಡೆ ತಪಾಸಣೆ ನಡೆಸಿದಾಗ ನೆಗೆಟಿವ್ ಬರುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ವೈರಸ್ ಕಡಿಮೆಯಾದರೆ ಅಥವಾ ಗಂಟಲ ದ್ರವ ತೆಗೆಯುವುದರಲ್ಲಿ ವ್ಯತ್ಯಾಸವಾದರೆ ಮರುದಿನವೇ ನೆಗೆಟಿವ್ ಬರುವಂತಹ ಸನ್ನಿವೇಶಗಳೂ ಇರುತ್ತವೆ ಎನ್ನುವುದು ತಜ್ಞ ವೈದ್ಯರ ವಾದ.
ಜಿಲ್ಲೆಯಲ್ಲಿ ಗಂಜಿಮಠದ ವ್ಯಕ್ತಿ ಹಾಗೂ ಸುಳ್ಯದ ಉದ್ಯಮಿಯೋರ್ವರಿಗೆ ಮೊದಲ ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟು, ಮರುದಿನವೇ ಮಾಡಿದ ಎರಡನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಅಲ್ಲದೆ, ಈ ಇಬ್ಬರೂ ತಮ್ಮ ಎರಡೂ ಪರೀಕ್ಷೆಗಳನ್ನು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಮಾಡಿಸಿದ್ದರು. ಎರಡು ದಿನಗಳ ಅಂತರದಲ್ಲಿ ವಿಭಿನ್ನ ಫಲಿತಾಂಶ ಬಂದ ಕಾರಣದಿಂದ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಯ ಗುಣಮಟ್ಟದ ಬಗ್ಗೆಯೂ ಜನರು ಸಹಜವಾಗಿಯೇ ಅನುಮಾನಪಡುವಂತಾಗಿದೆ.
ಕೊರೊನಾ ಪತ್ತೆ ಪರೀಕ್ಷೆ ಪ್ರಯೋಗಾಲಯದ ತಜ್ಞ ವೈದ್ಯರ ಪ್ರಕಾರ, ಯಾವುದೇ ವ್ಯಕ್ತಿಯಲ್ಲಿ ಕೋವಿಡ್-19 ವೈರಾಣು 10 ದಿನಗಳ ಕಾಲ ಸಕ್ರಿಯ ವಾಗಿರುತ್ತದೆ. ಕೆಲವೊಮ್ಮೆ ಈ ವೈರಾಣು ದೇಹದೊಳಗೆ ಇರುವುದು ಗೊತ್ತಾಗದೆ, ಕೊನೆಯ ಹಂತದಲ್ಲಿ ರೋಗ ಲಕ್ಷಣ ಕಂಡು ಬರಬಹುದು. ಆಗ ಆಸ್ಪತ್ರೆಗೆ ಬಂದಾಗ ಆತನಿಗೆ ಕೊರೊನಾ ದೃಢಪಡುತ್ತದೆ. ಆದರೆ ಮರುದಿನ ದೇಹದಲ್ಲಿ ವೈರಸ್ ಕಡಿಮೆಯಾಗಿ ನೆಗೆಟಿವ್ ಬರುವ ಸಾಧ್ಯತೆಯೂ ಇರುತ್ತದೆ.
ಗಂಟಲದ್ರವ ತೆಗೆಯಲು ಕ್ರಮವಿದೆ
ಕೋವಿಡ್ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಪ್ರಸ್ತುತ 5 ಮೆಡಿಕಲ್ ಕಾಲೇಜು, ಒಂದು ಸರಕಾರಿ ವೆನ್ಲಾಕ್ ಆಸ್ಪತ್ರೆ ಸಹಿತ 6 ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಗಂಟಲ ದ್ರವ ಮಾದರಿ ತೆಗೆದು 24 ಗಂಟೆಗಳಲ್ಲಿ ಫಲಿತಾಂಶ ಬರುತ್ತದೆ. ಒಂದು ಆಸ್ಪತ್ರೆಯ ಪ್ರಯೋಗಾಲಯದಲ್ಲಿ ತೆಗೆದ ಗಂಟಲ ದ್ರವ ಮಾದರಿಯಲ್ಲಿ ಪಾಸಿಟಿವ್ ಬಂದ ಕಾರಣಕ್ಕಾಗಿ ಇನ್ನೊಂದೆಡೆ ಮತ್ತೆ ಗಂಟಲ ದ್ರವ ಮಾದರಿಯನ್ನು ಪ್ರತ್ಯೇಕವಾಗಿ ನೀಡಿ ಪರೀಕ್ಷೆಗೊಳಪಡಿಸುವವರಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇನ್ನೊಂದು ಪ್ರಯೋಗಾಲ ಯದಲ್ಲಿ ಲ್ಯಾಬ್ ಸಿಬಂದಿ ಕ್ರಮ ಪ್ರಕಾರ ಕಾರ್ಯ ನಿರ್ವಹಿಸದಿದ್ದಲ್ಲಿ ವರದಿ ನೆಗೆಟಿವ್ ಬರುವ ಸಾಧ್ಯತೆಯಿರುತ್ತದೆ.
ಈ ಬಗ್ಗೆ ಮೊದಲು ಕೊರೊನಾ ದೃಢಪಟ್ಟು, ಮರುದಿನದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದ ಸುಳ್ಯದ ಉದ್ಯಮಿ ಜತೆ ಮಾತನಾಡಿದಾಗ, “ನಾನು ದಾಖಲಾಗಿದ್ದ ಖಾಸಗಿ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದ್ದರಿಂದ ಅನುಮಾನ ಬಂದಿತ್ತು. ಅದಕ್ಕಾಗಿ ಅದೇ ಆಸ್ಪತ್ರೆಯ ಲ್ಯಾಬ್ನಲ್ಲಿ ಇನ್ನೊಮ್ಮೆ ಗಂಟಲದ್ರವ ಮಾದರಿಯನ್ನು ತೆಗೆದು ಬೇರೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಾಗ ನೆಗೆಟಿವ್ ಬಂದಿತ್ತು. ಎರಡು ಬಾರಿಯೂ ಗಂಟಲದ್ರವ ಮಾದರಿಯನ್ನು ತೆಗೆದ ಪ್ರಯೋಗಾಲಯದ ಸಿಬಂದಿ ಒಬ್ಬರೇ. ಹಾಗಾದರೆ, ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.’
ಆ್ಯಂಟಿಜೆನ್ ಟೆಸ್ಟ್ನಲ್ಲೂ ಇದೇ ಸಮಸ್ಯೆ
ಆರ್ಟಿಪಿಸಿಆರ್ ಪರೀಕ್ಷೆ ತುಂಬಾ ವೆಚ್ಚದಾಯಕ ವಾಗಿರುವುದರಿಂದ ಒಂದು ಪ್ರದೇಶದಲ್ಲಿ ನೂರಾರು ಮಂದಿಗೆ ರ್ಯಾಪಿಡ್ ಟೆಸ್ಟ್ ಮಾಡಲು ಆ್ಯಂಟಿಜೆನ್ ಟೆಸ್ಟ್ ಸಹಾಯಕ್ಕೆ ಬರುತ್ತದೆ. ಆದರೆ ಇದು ಅಂತಿಮ ಫಲಿತಾಂಶ ನೀಡುವುದಿಲ್ಲ. ಇದರಲ್ಲಿ ಪಾಸಿಟಿವ್ ಬಂದವರಿಗೆ ಕೊರೊನಾ ದೃಢವಾಗಿರುತ್ತದೆ. ಆದರೆ ರೋಗ ಲಕ್ಷಣಗಳಿದ್ದೂ ಆ್ಯಂಟಿಜೆನ್ ಟೆಸ್ಟ್ನಲ್ಲಿ ನೆಗೆಟಿವ್ ಬಂದಲ್ಲಿ ಅವರನ್ನು ಮತ್ತೆ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವೇಳೆ ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಇರುತ್ತದೆ. ರೋಗಿಗೆ ಆರ್ಟಿಪಿಸಿಆರ್ ಮತ್ತು ಆ್ಯಂಟಿಜೆನ್ ಟೆಸ್ಟ್ನ ವ್ಯತ್ಯಾಸ ಅರಿವಿಲ್ಲದಿರುವುದರಿಂದ ಆ್ಯಂಟಿಜೆನ್ನಲ್ಲಿ ನೆಗೆಟಿವ್ ಬಂದಿದ್ದು, ಆರ್ಟಿಪಿಸಿಆರ್ನಲ್ಲಿ ಪಾಸಿಟಿವ್ ಬಂದಿರುವುದರ ಬಗ್ಗೆ ಸಂಶಯಪಡುತ್ತಾರೆ ಎಂಬುದು ಆರೋಗ್ಯಾಧಿಕಾರಿಗಳು ಹೇಳುವ ಮಾತು.
ವೈದ್ಯರು ಮಾಹಿತಿ ನೀಡಿ
ಕೊರೊನಾ ಪರೀಕ್ಷೆಗೆ ಪ್ರತ್ಯೇಕವಾಗಿ ಎರಡು ಪ್ರಯೋಗಾಲಯಗಳಲ್ಲಿ ಗಂಟಲ ದ್ರವ ನೀಡುವುದರಿಂದ ಕೆಲವೊಮ್ಮೆ ವಿಭಿನ್ನ ಫಲಿತಾಂಶ ಬರುವ ಸಾಧ್ಯತೆಯಿರುತ್ತದೆ. ಇದು ಗಂಟಲದ್ರವ ಮಾದರಿ ತೆಗೆಯುವಲ್ಲಿ ಆಗುವ ದೋಷದಿಂದಲೂ ಆಗಿರಬಹುದು. ಪಾಸಿಟಿವ್ ಬಂದ ದ್ರವ ಮಾದರಿಯನ್ನು ಇನ್ನೊಮ್ಮೆ ಪರೀಕ್ಷೆಗೊಳಪಡಿಸಿದಾಗ ವಿಭಿನ್ನ ಫಲಿತಾಂಶ ಬಂದಲ್ಲಿ ಮಾತ್ರ ಅದು ಆ ಪ್ರಯೋಗಾಲಯದ ತಪ್ಪು ಎಂದಾಗುತ್ತದೆ. ವೈದ್ಯರು, ರೋಗಿಗಳಿಗೆ ಆ್ಯಂಟಿಜೆನ್ ಮತ್ತು ಆರ್ಟಿಪಿಸಿಆರ್ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು.
– ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್