“ಕೃಷಿ ಆಧಾರಿತ ಉದ್ಯಮ ವಲಯ ಸ್ಥಾಪನೆ ಗುರಿ’
ನಗರ ಪಂಚಾಯತ್ ಚುನಾವಣೆ: ಸುಳ್ಯಕ್ಕೆ ನಳಿನ್ ಭೇಟಿ, ಕಾರ್ಯಕರ್ತರೊಂದಿಗೆ ಸಮಾಲೋಚನೆ
Team Udayavani, May 28, 2019, 6:00 AM IST
ಸುಳ್ಯ: ಉದ್ಯೋಗ ಸೃಷ್ಟಿಯನ್ನು ಗುರಿಯಾಗಿಸಿ ಸುಳ್ಯದಲ್ಲಿ ಕೃಷಿ ಆಧಾರಿತ ಉದ್ಯಮ ವಲಯ ಸ್ಥಾಪನೆ ನಿಟ್ಟಿನಲ್ಲಿ ಮುಂದಿನ 5 ವರ್ಷಗಳಲ್ಲಿ ಆದ್ಯತೆ ನೀಡು ವುದಾಗಿ ಸಂಸದ ನಳಿನ್ಕುಮಾರ್ ಕಟೀಲು ಅವರು ಹೇಳಿದರು.
ಮೂರನೇ ಬಾರಿ ಸಂಸದರಾಗಿ ಆಯ್ಕೆ ಯಾದ ಬಳಿಕ ಸುಳ್ಯಕ್ಕೆ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಮಾಣಿ ಮೈಸೂರು ರಸ್ತೆಯ ಅಭಿವೃದ್ಧಿ, ಅರಂತೋಡು- ಮರ್ಕಂಜ- ಮಡಪ್ಪಾಡಿ- ಸುಬ್ರಹ್ಮಣ್ಯ ರಸ್ತೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕಾಞಂಗಾಡ್- ಕಾಣಿಯೂರು ರೈಲ್ವೇ ಮಾರ್ಗ ಅನುಷ್ಠಾನಕ್ಕೆ ಸಂಬಂಧಿಸಿ ಸರ್ವೆ ಕಾರ್ಯಕ್ಕೆ ರಾಜ್ಯ ಸರಕಾರ ಒಪ್ಪಿಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗುವುದು ಎಂದು ಹೇಳಿದರು.
ಬಳ್ಪ ಆದರ್ಶ ಗ್ರಾಮದಲ್ಲಿ ಬೋಗಾ ಯನ ಕೆರೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ವಿಂಗಡಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳ ಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಮನೆ ನಿರ್ಮಾಣ ಸಹಿತ ಅನೇಕ ಯೋಜನೆ ಗಳು ಅನುಷ್ಠಾನಕ್ಕೆ ಬರಲಿವೆ. ಆದರ್ಶ ಗ್ರಾಮದ ಮಾರ್ಗಸೂಚಿಯಲ್ಲಿ ರಸ್ತೆ, ಸೇತುವೆ ಒಳಪಡುವುದಿಲ್ಲ. ಶಿಕ್ಷಣ, ಆರೋಗ್ಯ ಇನ್ನಿತರ ಸಾಮಾಜಿಕ ಅಭ್ಯುದಯ ಕಾರ್ಯಕ್ರಮಗಳಿವೆ. ಆದರೂ ಇವುಗಳ ಜತೆಗೆ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದವರು ಹೇಳಿದರು.
ಶಕ್ತಿ ತುಂಬಿದ ಕ್ಷೇತ್ರ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಈ ಬಾರಿ ಬಿಜೆಪಿಗೆ ಬಹುಮತ ಬಂದಿದೆ ಎಂದು ನಳಿನ್ ಹೇಳಿದರು. 991ರಿಂದಲೇ ಬಿಜೆಪಿಯ ವಿಜಯ ಯಾತ್ರೆ ಆರಂಭಗೊಂಡಿತ್ತು. ಇದರಲ್ಲಿ ಸುಳ್ಯದ ಕೊಡುಗೆ ದೊಡ್ಡದು. ಸುಳ್ಯ ನನಗೆ ಶಕ್ತಿ ತುಂಬಿದ ಕ್ಷೇತ್ರ. ಕಾಂಗ್ರೆಸ್ ಮುಕ್ತ ಕ್ಷೇತ್ರವಾಗಿ ಇದು ಮಾರ್ಪಡುತ್ತಿದೆ ಎಂದರು.
ಮೋದಿ ಅವರ ಯೋಚನೆ ಹಾಗೂ ಕೆಲಸಗಳಿಗೆ ಜನ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ವಿಪಕ್ಷ ಸ್ಥಾನವನ್ನು ಪಡೆದುಕೊಳ್ಳಲಾರದ ಸ್ಥಿತಿಯಲ್ಲಿದೆ. ಜನರ ವಿಶ್ವಾಸವನ್ನು ಗಳಿಸಿಕೊಳ್ಳಲು ಆ ಪಕ್ಷ ವಿಫಲವಾಗಿದೆ. ಪ್ರಧಾನಮಂತ್ರಿ ಮೇಲೆ ಸುಳ್ಳು ಆರೋಪ ಮಾಡಿದ ಅವರನ್ನು ತಿರಸ್ಕರಿಸಿ ಜನತಾ ನ್ಯಾಯಾಲಯವೇ ತೀರ್ಪು ನೀಡಿದೆ ಎಂದು ಹೇಳಿದರು. ಪ್ರಾಮಾಣಿಕ ಹಾಗೂ ಸಜ್ಜನಿಕೆಯ ರಾಜಕಾರಣ ನನ್ನನ್ನು ಬೆಂಬಲಿಸಿದೆ.
ಸೇವಾ ಮನೋಭಾವನೆಯಿಂದ ರಾಜಕಾರಣ ಮಾಡುತ್ತೇನೆ ಎಂದು ಕಟೀಲು ಹೇಳಿದರು. ಶಾಸಕ ಎಸ್. ಅಂಗಾರ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ. ಮಾಜಿ ಸದಸ್ಯ ನವೀನ್ಕುಮಾರ್ ಮೇನಾಲ, ಬಿಜೆಪಿ ನಾಯಕರಾದ ಎ.ವಿ. ತೀರ್ಥರಾಮ, ಸುಬೋಧ್ ಶೆಟ್ಟಿ ಮೇನಾಲ, ಭಾಸ್ಕರ ಬಯಂಬು, ಭಾಗೀರಥಿ ಮುರುಳ್ಯ, ಸುರೇಶ್ ಕಣೆಮರಡ್ಕ, ವಿನುತಾ ಪಾತಿಕಲ್ಲು, ಅಬ್ದುಲ್ ಕುಂಞಿ ನೇಲ್ಯಡ್ಕ, ರಂಜಿತ್ ಪೂಜಾರಿ, ವಾಸುದೇವ ನಾಯಕ್, ನಾಗರಾಜ್ ಮುಳ್ಯ, ಮಹೇಶ್ ರೈ ಮೇನಾಲ, ರಾಜೇಶ್ ರೈ ಮೇನಾಲ ಉಪಸ್ಥಿತರಿದ್ದರು.