8 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ: ಸಚಿವ ಸಿ.ಸಿ. ಪಾಟೀಲ್
Team Udayavani, Jul 12, 2022, 6:40 AM IST
ಸುಬ್ರಹ್ಮಣ್ಯ: ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈ ಮೂಲಕ ರಾಜ್ಯದಲ್ಲಿ ಉತ್ತಮ ಗುಣ ಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದೇವೆ. ಕೆಲವೊಂದು ರಸ್ತೆಗಳ ಕಾಮಗಾರಿ ನಡೆದಿವೆ. ಕೆಲವು ನಡೆಯುತ್ತಿವೆ.
ಮಳೆಗಾಲ ಮುಗಿದ ತತ್ಕ್ಷಣ ಮತ್ತಷ್ಟು ರಸ್ತೆಯ ಪ್ರಗತಿ ಕಾರ್ಯ ಆರಂಭಗೊಳ್ಳಲಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೂ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ ದರು. ರಸ್ತೆಗಳ ಕಾಮಗಾರಿಯ ಪ್ರಗತಿ ಕುರಿತು ಪ್ರತೀ 15 ದಿನಕ್ಕೊಮ್ಮೆ ಅಧಿ ಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಶಿರಾಡಿ ಘಾಟಿ ರಸ್ತೆ ಶೀಘ್ರ
ರಾಜ್ಯದಲ್ಲಿ ಭಾರೀ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ವರ್ಷಧಾರೆ ಆಗುತ್ತಿರುವುದರಿಂದ ಮಳೆಯಿಂದಾಗಿ ರಸ್ತೆಗಳ ಸಮರ್ಪಕತೆ ಬಗ್ಗೆ ಅಧ್ಯಾಯನ ಮಾಡಲು ಆಗಮಿಸಿದ್ದೇನೆ. ಬೆಂಗ ಳೂರು- ಮಂಗಳೂರು ಸಂಪರ್ಕಿಸುವ ಪ್ರಧಾನ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಕಾಮಗಾರಿ ಮಂದಗತಿಯಲ್ಲಿ ಆಗುತ್ತಿದೆ. ಈ ಬಗ್ಗೆ ಸ್ಥಳಕ್ಕೆ ತೆರಳಿ ಕಾಮಗಾರಿಗೆ ಹೆಚ್ಚಿನ ವೇಗ ನೀಡಲು ಆದೇಶಿಸಿದ್ದೇನೆ. ಪ್ರಸ್ತುತ ತಾತ್ಕಾಲಿಕ ದುರಸ್ತಿ ಮಾಡಲಾಗುವುದು. ಮಳೆಗಾಲ ಮುಗಿದ ತತ್ಕ್ಷಣ ಕಾಮಗಾರಿಗೆ ವೇಗ ದೊರಕಲಿದೆ ಎಂದರು.
80 ಕೋಟಿ ರೂ. ನಷ್ಟ
ಈ ಬಾರಿಯ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆಗೆ ಅಂದಾಜು 80 ಕೋಟಿ ರೂ. ನಷ್ಟ ಸಂಭವಿಸಿದೆ. ಹಾನಿಗೀಡಾದ ರಸ್ತೆಗಳ ಅಭಿವೃದ್ಧಿಗೆ ಶೀಘ್ರ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.
ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಲೋಕೋಪಯೋಗಿ ಕಾರ್ಯದರ್ಶಿ ಕೃಷ್ಣ ರೆಡ್ಡಿ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು.
ಸುಳ್ಯಕ್ಕೆ ಪಾಟೀಲ್ ಭೇಟಿ
ಸುಳ್ಯ: ಸುಬ್ರಹ್ಮಣ್ಯದಿಂದ ಕೊಡಗಿಗೆ ತೆರಳುವ ವೇಳೆ ಸಚಿವ ಸಿ.ಸಿ. ಪಾಟೀಲ್ ಸುಳ್ಯದ ನಿರೀಕ್ಷಣ ಮಂದಿರಕ್ಕೆ ಭೇಟಿ ನೀಡಿ ಸಚಿವ ಎಸ್.ಅಂಗಾರ ಅವರೊಂದಿಗೆ ಭೂಕಂಪನ ಮತ್ತು ಪಾಕೃತಿಕ ವಿಕೋಪದ ಬಗ್ಗೆ ಮಾತುಕತೆ ನಡೆಸಿದರು.
ಅಂಗಾರ ಅವರು ಸುಳ್ಯ ತಾಲೂಕಿನ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕುರಿತು ಸಚಿವರಿಗೆ ಮನವಿ ನೀಡಿದರು. ಸುಳ್ಯದ ಐಬಿ ಕಟ್ಟಡದ ಅಭಿ ವೃದ್ಧಿ ಕುರಿತು ಗಮನಕ್ಕೆ ತಂದರು. ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವರು ಹೇಳಿದರು.