ಆಧಾರ್ ಕಾರ್ಡ್ ತಿದ್ದುಪಡಿಗೆ ಪಂಚಾಯತ್ನಲ್ಲೇ ಅವಕಾಶ ನೀಡಿ
Team Udayavani, Aug 11, 2019, 5:21 AM IST
ಈಶ್ವರಮಂಗಲ: ಆಧಾರ್ ಕಾರ್ಡ್ ಜಾರಿಗೆ ಬಂದ ಬಳಿಕ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಅದರ ಭವಣೆ ತಪ್ಪಿದ್ದಲ್ಲ. ಎಷ್ಟು ಬಾರಿ ತಿದ್ದುಪಡಿ ಮಾಡಿದರೂ ಅದು ಸರಿಯಾಗುವುದಿಲ್ಲ. ಅಲ್ಲದೆ ತಿದ್ದುಪಡಿಗೂ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಆಧಾರ್ ಕಾರ್ಡ್ಗೊಂದು ಶಾಶ್ವತ ಪರಿಹಾರ ನೀಡುವಂತೆ ಬೆಟ್ಟಂಪಾಡಿ ಗ್ರಾಮ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಗ್ರಾ.ಪಂ. ಅಧ್ಯಕ್ಷೆ ಬೇಬಿ ಜಯರಾಮ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ಗ್ರಾಮಸಭೆ ನಡೆಯಿತು.
ಗ್ರಾಮಸ್ಥ ವಿಶ್ವನಾಥ ಪಾಟಾಳಿ ಮಾತನಾಡಿ, ವಿದ್ಯಾರ್ಥಿ ವೇತನ ಹಾಗೂ ಇತರ ಉದ್ದೇಶಗಳು ಸೇರಿದಂತೆ ಪ್ರತಿಯೊಂದು ವಿಚಾರಗಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ ಆಧಾರ್ ಕಾರ್ಡ್ನಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ತಿದ್ದುಪಡಿಗೆ ಶಾಲಾ ಸರ್ಟಿಫಿಕೇಟ್ ಅನ್ನು ದಾಖಲೆಯಾಗಿ ನೀಡಿದರೂ ಅದರಲ್ಲಿ ಹುಟ್ಟಿದ ದಿನಾಂಕವಿಲ್ಲ ಎನ್ನುವ ಕಾರಣಕ್ಕೆ ತಿರಸ್ಕೃತವಾಗುತ್ತದೆ. ಮೊಬೈಲ್ ನಂಬರ್ ಲಿಂಕ್ ಮಾಡಿದರೂ ತಿದ್ದುಪಡಿ ಮಾಡಬೇಕಾಗುತ್ತದೆ. ತಿದ್ದುಪಡಿಗಾಗಿ ಜನರು ಅಲೆದಾಡುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳೂ ಸಮಸ್ಯೆ ಎದುರಿಸುವಂತಾಗಿದೆ. ಆಧಾರ್ ಕಾರ್ಡ್ ಪ್ರಾರಂಭವಾದಾಗಿನಿಂದ ತಿದ್ದುಪಡಿಗೆ ಪರಿಹಾರ ಸಿಕ್ಕಿಲ್ಲ. ಇದು ಯಾವಾಗ ಸರಿಯಾಗುತ್ತದೆ ಎಂದು ಪ್ರಶ್ನಿಸಿದರು. ಪಂಚಾಯತ್ನಲ್ಲಿಯೇ ಆಧಾರ್ ಕಾಡ್ ತಿದ್ದುಪಡಿಗೆ ಆವಕಾಶ ನೀಡುವಂತೆ ಸದಸ್ಯರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದು, ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.
ಮೋರಿ ಆಗೋದ್ಯಾವಾಗ?
ಪೇರಲ್ತಡ್ಕದಲ್ಲಿ ಮಳೆ ನೀರು ಬಾವಿಗೆ ಬರುತ್ತಿದೆ. ಅಲ್ಲಿ ಮೋರಿ ಅಳವಡಿಸಲು ಕಳೆದ ಚುನಾವಣೆ ಸಂದರ್ಭ ಕಲ್ಲು ತಂದು ಹಾಕಾಲಾಗಿದೆ. ಮೋರಿ ಮಾತ್ರ ಇನ್ನೂ ಅಳವಡಿಸಿಲ್ಲ. ಮೋರಿ ಅಳವಡಿಸಲು ಇನ್ನೊಂದು ಚುನಾವಣೆ ಬರಬೇಕಾ? ಪಂಚಾಯತ್ಗೆ ಸಂಬಂಧಿಸಿದ ಕಾಮಗಾರಿಗಳನ್ನು ಪಂಚಾಯತ್ ಮಾಡಬೇಕೇ ಹೊರತು ಶಾಸಕರು ಮಾಡುವುದಲ್ಲ. ವಾರ್ಡ್ ನ ಸದಸ್ಯರೇ ಅಧ್ಯಕ್ಷರಾಗಿದ್ದರೂ ಕಾಮಗಾರಿ ನಡೆಸಿಲ್ಲ. ಕಾಮಗಾರಿ ಪೂರ್ತಿಗೊಳಿಸಿ ಎಂದು ಗ್ರಾಮಸ್ಥ ಐತ್ತಪ್ಪ ಹೇಳಿದರು.
ವಾರ್ಡ್ ಸಭೆ ಮಾಹಿತಿ ಇಲ್ಲ!
ಗ್ರಾಮದ ಅಭಿವೃದ್ಧಿಗಾಗಿ ವಾರ್ಡ್ ಸಭೆ ನಡೆಸಲಾಗುತ್ತಿದೆ ಎಂದು ಹೇಳುವುದು ಮಾತ್ರ. ಆದರೆ ಗ್ರಾಮ ಸಭೆಗೆ ಮುಂಚಿತವಾಗಿ ನಡೆಯುವ ವಾರ್ಡ್ ಸಭೆಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯೇ ನೀಡುವುದಿಲ್ಲ. ಹೀಗಾಗಿ ವಾರ್ಡ್ ಸಭೆಗಳನ್ನು ನಡೆಸು ವುದು ಸದಸ್ಯರಿಗಾಗಿಯೋ ಇಲ್ಲವೇ ಗ್ರಾಮಸ್ಥರಿಗಾಗಿಯೋ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ವಾರ್ಡ್ ಸಭೆ ಹಾಗೂ ಗ್ರಾಮಸಭೆ ನಡೆಸುವ ದಿನಾಂಕ ಹಾಗೂ ಸ್ಥಳಗಳನ್ನು ಮುದ್ರಿಸಿ ದ ಕರಪತ್ರ ಹಂಚಲಾಗಿದೆ. ಪತ್ರಿಕೆಯಲ್ಲಿ ಜಾಹಿರಾತು ನೀಡಲಾಗಿದೆ ಎಂದು ಸದಸ್ಯರು ತಿಳಿಸಿದರು.
ದೂಮಡ್ಕಕ್ಕೆ ಬಸ್ ಬರುತ್ತಿಲ್ಲ
ದೂಮಡ್ಕಕ್ಕೆ ಖಾಸಗಿ ಬಸ್ಸು ಬರುತ್ತಿದ್ದು, ಈಗ ಸ್ಥಗಿತವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸೇರಿ ದಂತೆ ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ನೇತಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಆ ಭಾಗದ ಜನಸಾಮಾನ್ಯರದ್ದಾಗಿದೆ. ಇದರ ಬಗ್ಗೆ ಸದಸ್ಯರಿಗೆ ತಿಳಿದಿದ್ದರೂ ಮೌನವಾಗಿದ್ದಾರೆ. ಬಸ್ ಸಂಚಾರ ಸ್ಥಗಿತಗೊಳಿಸಿರುವುದು ಯಾಕೆ? ಗ್ರಾಮಸಭೆಯಲ್ಲಿ ಸಲ್ಲಿಸಿದ ಅರ್ಜಿಗೆ ಬೆಲೆಯಿಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಸದಸ್ಯ ರಕ್ಷಣ್ ರೈ, ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಖಾಸಗಿ ಬಸ್ಗೆ ದೂಮಡ್ಕ-ಪೆರ್ಲ ಪರವಾನಿಗೆಯಿದ್ದರೂ ಸಂಚಾರ ಸ್ಥಗಿತ ಗೊಳಿಸಿರುವ ಬಸ್ ಅನುಮತಿ ರದ್ದು ಗೊಳಿಸುವಂತೆ ಆಗ್ರಹಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡುವುದು ಉತ್ತಮ ಎಂದು ಸದಸ್ಯರು ಅಭಿಪ್ರಾಯ ತಿಳಿಸಿದರು.
ಆದಾಯ ಮಿತಿ ಬದಲಾಗಲಿ
ಬಿಪಿಎಲ್ ಪಡಿತರ ಚೀಟಿದಾರರ ಆದಾಯ ಮಿತಿಯನ್ನು ಸರಕಾರ 1,20,000 ರೂ.ಗೆ ನಿಗದಿಗೊಳಿಸಿದೆ. ಆದರೆ ವಿವಿಧ ಆಶ್ರಯ ಯೋಜನೆ ಗಳ ಮುಖಾಂತರ ಮನೆ ಮಂಜೂರಾಗ ಬೇಕಾದರೆ ಆದಾಯ ಮಿತಿಯನ್ನು 32,000 ರೂ.ಗೆ ಸೀಮಿತಿಗೊಳಿಸಿದ್ದಾರೆ. ಇದರಿಂದಾಗಿ ಬಡ ಬಿಪಿಎಲ್ ಪಡಿತರ ಚೀಟಿದಾರರು ಆಶ್ರಯ ಯೋಜನೆ ಮೂಲಕ ಮನೆ ಪಡೆದು ಕೊಳ್ಳುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಆದಾಯ ಮಿತಿ ಯನ್ನು ಸಮರ್ಪಕ ಗೊಳಿಸುವಂತೆ ಸದಸ್ಯ ಮೊದುಕುಂಞಿ ಆಗ್ರಹಿಸಿದರು.
ಹಬ್ಬದ ದಿನವೇಕೆ ಗ್ರಾಮಸಭೆ
ಗ್ರಾಮಸಭೆಗಳು ಗ್ರಾಮದ ಅಭಿವೃದ್ಧಿಗೆ ಪೂರಕ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗಬೇಕು. ಹಬ್ಬದ ದಿನ ಗ್ರಾಮಸಭೆ ನಡೆಸಿದರೆ ಗ್ರಾಮಸ್ಥರು ಹಾಜರಾಗುವುದಾದರೂ ಹೇಗೆ? ತುಳುನಾಡಿನ ವಿಶಿಷ್ಟ ಹಬ್ಬದ ದಿನ ವಾಗಿರುವುದರಿಂದ ಕಡಿಮೆ ಸಂಖ್ಯೆ ಯಲ್ಲಿ ಗ್ರಾಮಸ್ಥರು ಸಭೆಗೆ ಭಾಗಿಯಾಗಿ ದ್ದಾರೆ ಎಂದು ಗ್ರಾಮಸ್ಥ ನಾರಾಯಣ ರೈ ತಿಳಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.
ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ ಕಜೆ, ಸದಸ್ಯರಾದ ರಮೇಶ್ ರೈ, ದಿನೇಶ್ ಜಿ., ಉಮಾವತಿ, ಪ್ರಕಾಶ್ ರೈ ಬೈಲಾಡಿ, ಭವಾನಿ ಹುಕ್ರಪ್ಪ, ರಕ್ಷಣ್ ರೈ, ಪದ್ಮಾವತಿ, ಪಾರ್ವತಿ ಲಿಂಗಪ್ಪ ಗೌಡ, ಪುಷ್ಪಲತಾ, ದಿವ್ಯಾ, ಜಗನ್ನಾಥ ರೈ ಕೊಮ್ಮಂಡ, ವಿನೋದ್ ಕುಮಾರ್ ರೈ, ಪ್ರೇಮಲತಾ, ಐತ್ತಪ್ಪ, ಹಾಗೂ ಶಾಲಿನಿ ಉಪಸ್ಥಿತರಿದ್ದರು. ಪಿಡಿಒ ಶಾಂತಾರಾಮ್ ಸ್ವಾಗತಿಸಿ, ಕಾರ್ಯದರ್ಶಿ ಬಾಬು ನಾಯ್ಕ ವಂದಿಸಿ, ಸಿಬಂದಿ ಸಹಕರಿಸಿದರು.
ಚರಂಡಿಗೆ ಅನುದಾನವಿಲ್ಲ
ಇರ್ದೆ ದೂಮಡ್ಕ ರಸ್ತೆ ಬದಿಯಲ್ಲಿ ಚರಂಡಿಯಿಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ಇದರಿಂದ ರಸ್ತೆ ಕೆಟ್ಟು ಹೋಗಿದೆ. ಈ ರಸ್ತೆಗೆ ಚರಂಡಿ ನಿರ್ಮಾಣ ಮಾಡುವಂತೆ ಗ್ರಾಮಸ್ಥ ಐತ್ತಪ್ಪರವರು ಆಗ್ರಹಿಸಿದರು. ಜಿ.ಪಂ. ವ್ಯಾಪ್ತಿಯ ರಸ್ತೆಗಳಿಗೆ ಪ್ಯಾಚ್ ವರ್ಕ್ಗೆ ಮಾತ್ರ ಅನುದಾನವಿರುವುದು. ಚರಂಡಿಗೆ ಅನುದಾನವಿಲ್ಲ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖಾಧಿಕಾರಿಗಳು ತಿಳಿಸಿದರು. ರಸ್ತೆ ದುರಸ್ತಿ ಮಾಡಿ ಚರಂಡಿ ನಿರ್ಮಿಸದಿದ್ದರೆ ಏನು ಪ್ರಯೋಜನ. ದುರಸ್ತಿ ಮಾಡುವುದಾಗಿ ಅಧಿಕಾರಿಗಳು ಗ್ರಾಮಸಭೆಯಲ್ಲಿ ಒಪ್ಪಿಕೊಂಡು ಹೋಗುವುದು ಮಾತ್ರ. ಅದು ಮುಂದಿನ ಗ್ರಾಮಸಭೆಯ ತನಕ ಪರಿಹಾರ ಕಾಣುವುದಿಲ್ಲ ಎಂದು ಐತ್ತಪ್ಪ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ