Uppinangady ಕೆಲಸ ಒದಗಿಸುವುದಾಗಿ ಹೇಳಿ ವಂಚನೆ
Team Udayavani, Jan 25, 2024, 1:07 AM IST
ಉಪ್ಪಿನಂಗಡಿ: ಮೆರೈನ್ನಲ್ಲಿ ಕೆಲಸ ಒದಗಿಸುವುದಾಗಿ ನಂಬಿಸಿ ಅದಕ್ಕಾಗಿ 3 ಲಕ್ಷ ರೂ. ಖರ್ಚಾಗುವುದಾಗಿ ತಿಳಿಸಿ ಹಂತ ಹಂತವಾಗಿ 2.10 ಲಕ್ಷ ರೂ. ಪಡೆದು ಬಳಿಕ ಕೆಲಸವನ್ನೂ ಒದಗಿಸದೆ, ಹಣವನ್ನೂ ಹಿಂದಿರುಗಿಸದೆ ವಂಚಿಸಿರುವ ಕೃತ್ಯಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಕಳೆಂಜ ಮನೆ ನಿವಾಸಿ, ಪ್ರಸಕ್ತ ಮೆರೈನ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿಕೊಂಡಿರುವ ಭವಿತ್ ಕೆ. ಎನ್. ವಂಚನೆಗೆ ಒಳಗಾದವರು. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಕೋಲಾರದ ಕೆಂಬೋಡಿ ಅಂಚೆ ನಿವಾಸಿ ಪ್ರಜ್ವಲ್ (29) ವಂಚಿಸಿರುವುದಾಗಿ ಅವರು ದೂರು ನೀಡಿದ್ದಾರೆ.
ಆರೋಪಿ ಪ್ರಜ್ವಲ್ ಕಳೆದ ಜೂನ್ 5 ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮೆರೈನ್ ನಲ್ಲಿ ಕೆಲಸ ಸಿಗಬೇಕಾದರೆ 3 ಲಕ್ಷ ಖರ್ಚು ಇದೆಯೆಂದು ತಿಳಿಸಿದ್ದು, ಅದರಂತೆ ಆತನಿಗೆ ಗೂಗಲ್ ಪೇ ಮೂಲಕ ಒಟ್ಟು 2,10,000 ರೂ. ಪಾವತಿಸಿದ್ದೇನೆ. ಆ ಬಳಿಕ ಆರೋಪಿಯು ಕೆಲಸ ಮಾಡಿಕೊಡಲು ಆಗುವುದಿಲ್ಲ. ಹಣವನ್ನು 10 ದಿನಗಳ ಒಳಗಾಗಿ ಹಿಂದಿರುಗಿಸುತ್ತೇನೆಂದು ಹೇಳಿದ್ದರೂ ಹಲವು ತಿಂಗಳು ಕಳೆದರೂ ಹಣ ನೀಡದೆ ವಂಚಿಸಿದ್ದಾನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದ್ದಾರೆ.