ಭಾರೀ ಮಳೆ: ಗೌರಿಹೊಳೆ, ಕುಮಾರಧಾರಾ ತಟದ ಕೃಷಿ ಭೂಮಿ ಜಲಾವೃತ
Team Udayavani, Aug 17, 2018, 12:54 PM IST
ಸವಣೂರು: ವರುಣನ ಆರ್ಭಟ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. 24 ವರ್ಷಗಳ ಬಳಿಕ ಪಾಲ್ತಾಡಿ ಹಾಗೂ ಪೆರುವಾಜೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕುಂಡಡ್ಕ ಸೇತುವೆಯ ರಸ್ತೆ ಮುಳುಗಡೆಯಾಗುವ ಮೂಲಕ ಸಂಪರ್ಕ ಕಡಿತಗೊಂಡಿತ್ತು. ಪಾಲ್ತಾಡಿ ಗ್ರಾಮದ ಚೆನ್ನಾವರ, ನೆಲ್ಯಾಜೆ, ದೇರ್ನಡ್ಕ, ಕಾಪುತಮೂಲೆ, ಪಾಲ್ತಾಡು ಭಾಗದ ಜನರು ಹಾಗೂ ವಿದ್ಯಾರ್ಥಿಗಳು ಇದೇ ಸೇತುವೆಯಲ್ಲಿ ಸಾಗಿ ಸವಣೂರು, ಪೆರುವಾಜೆ ಮೂಲಕ ಶಿಕ್ಷಣ ಸಂಸ್ಥೆ ಹಾಗೂ ಇತರ ಕಡೆಗಳಿಗೆ ಸಾಗಬೇಕಿದ್ದು, ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಕಾರಣ ಸುತ್ತು ಬಳಸಿ ಸಾಗಬೇಕಾಯಿತು. ಇನ್ನೊಂದೆಡೆ ಬೆಳ್ಳಾರೆ ಮೂಲಕ ಸವಣೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 1 ಕಿ.ಮೀ.ನಷ್ಟು ದೂರಕ್ಕೆ ಆಳೆತ್ತರಕ್ಕೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.
ಮಧ್ಯಾಹ್ನದ ವೇಳೆಗೆ ನೆರೆನೀರು ತಗ್ಗಿದ್ದು, ಗೌರಿ ಹೊಳೆ ಬದಿಯ ನಿವಾಸಿಗಳ ಆತಂಕ ಇನ್ನೂ ದೂರವಾಗಿಲ್ಲ. ಗೌರಿ ಹೊಳೆಯ ಬದಿಯಲ್ಲಿರುವ ಎಲ್ಲ ತೋಟಗಳಲ್ಲಿ ಕಳೆದ ಕೆಲ ದಿನಗಳಿಂದ ನೀರು ನಿಂತಿದ್ದು, ಕೃಷಿಕರು ಆತಂಕದಲ್ಲಿದ್ದಾರೆ. ಪುತ್ತೂರು-ದರ್ಬೆ ಹೆದ್ದಾರಿಯಲ್ಲಿ ಸವಣೂರು, ಕಾಣಿಯೂರು, ಸುಬ್ರಹ್ಮಣ್ಯ ಸಂಪರ್ಕಿಸುವ ಸರ್ವೆ ಎಂಬಲ್ಲಿರುವ ಸೇತುವೆಯಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ.
ಶಾಂತಿಮೊಗರು ದೇವಸ್ಥಾನ ಜಲಾವೃತ
ಬೆಳಂದೂರು: ಕುಮಾರಧಾರಾ ನದಿಯಲ್ಲಿ ಧುಮ್ಮಿಕ್ಕಿ ನೀರು ಹರಿಯುತ್ತಿದ್ದು, ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ. ನದಿ ಪಾತ್ರದಲ್ಲಿರುವ ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ. ನದಿ ದಡದಲ್ಲಿರುವ ದೇವಸ್ಥಾನ, ಮಸೀದಿ, ಮನೆಗಳಿಗೆ ನೆರೆ ನೀರು ನುಗ್ಗಿ ಜಲಾವೃತವಾಗಿದೆ. ಮಧ್ಯಾಹ್ನ ಅನಂತರ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಜನತೆ ಭೀತಿಗೊಳಗಾಗಿದ್ದಾರೆ.
ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ವಠಾರ ಸಂಪೂರ್ಣ ಜಲಾವೃತಗೊಂಡಿದ್ದು, ದೇವಾಲಯದ ಕೆರೆ ನೀರಿನಿಂದ ಆವೃತವಾಗಿ, ಕುಸಿಯುವ ಹಂತದಲ್ಲಿದೆ. ದೇವಾಯಲದ ಸಭಾಭವನವೂ ಜಲಾವೃತವಾಗಿದೆ. 1974ರಲ್ಲಿ ಇದೇ ಪ್ರಮಾಣದಲ್ಲಿ ನೆರೆನೀರು ಬಂದಿತ್ತು. ಜನತೆ ಆತಂಕಗೊಂಡಿದ್ದು, ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಆಗ್ರಹಿಸಿದರು.
ಕಾಪೆಜಾಲು ಎಂಬಲ್ಲಿ ಮಸೀದಿ, ಕಾಪೆಜಾಲುವಿನ ಲತೀಫ್, ಮಹಮ್ಮದ್, ಕೊಪ್ಪ ದೇವಪ್ಪ ಕುಂಬಾರರ ಮನೆಗಳಿಗೆ ನೀರು ನುಗ್ಗಿದೆ. ಪುಣcತ್ತಾರು, ಬೈತ್ತಡ್ಕ ಎಂಬಲ್ಲಿ ಮುಖ್ಯರಸ್ತೆಗೆ ನೀರು ಹರಿದಿದ್ದು, ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ಮುಂಡೂರಿನ ನೈತಡಿ ಗೋಪಾಲ ಸಫಲ್ಯ ಎಂಬವರ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ 1.5ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ದ್ವೀಪದಂತಾದ ವೀರಮಂಗಲ, ಜನರ ಸ್ಥಳಾಂತರ
ಕುಮಾರಧಾರಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ವೀರಮಂಗಲದ ಹಲವು ಮನೆಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ. ಸುಳಿಮೇಲು ಎಂಬಲ್ಲಿ ನಾಲ್ಕು ಮನೆಗಳು ದ್ವೀಪದಂತಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುಳಿಮೇಲಿನ ಕೂಸಪ್ಪ ಗೌಡ, ಮೋನಪ್ಪ ಗೌಡ, ಅಚ್ಯುತ ಗೌಡ ಹಾಗೂ ಖಾಸೀಂ ಬ್ಯಾರಿ ಅವರ ಮನೆಗಳು ನೆರೆ ನೀರಿನಿಂದ ಆವೃತವಾಗಿವೆ. ಅಗ್ನಿಶಾಮಕ ದಳದವರು ನೆರೆ ಭೀತಿಗೆ ತುತ್ತಾದವರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತಂದರು.
ಪುತ್ತೂರು ತಹಶೀಲ್ದಾರ್ ಅನಂತಶಂಕರ ಹಾಗೂ ಪೊಲೀಸರು ಸ್ಥಳದಲ್ಲಿದ್ದು, ಮಾರ್ಗದರ್ಶನ ನೀಡಿದರು. ಅಡಿಕೆ ತೋಟದ ನಡುವೆ ಬೋಟ್ ತರಲು ಹರಸಾಹಸ ಮಾಡಬೇಕಾಯಿತು. ಇದಲ್ಲದೆ ಕೊಯಕ್ಕುಡೆ ಬಾಬು ಗೌಡ, ಮಾರಪ್ಪ ಗೌಡ, ಬೆಳಿಯಪ್ಪ ಗೌಡ, ಗಂಡಿ ಮನೆ ಶೇಷಪ್ಪ ಗೌಡರ ಮನೆಗಳೂ ನೆರೆ ಹಾವಳಿಗೆ ತುತ್ತಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್