ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆ; ಮುಟ್ಟುಗೋಲು ಹಾಕಿದ್ದ ವಸ್ತು ಮರಳಿ ಮಾಲಕರಿಗೆ
Team Udayavani, Feb 6, 2024, 11:46 PM IST
ಗುತ್ತಿಗಾರು: ನಾಲ್ಕೂರು ಗ್ರಾಮದ ಕಡವೆಗುಂಡಿ ಎಂಬಲ್ಲಿ ಸರಕಾರಿ ಜಾಗದ ಅತಿಕ್ರಮಣ ಆರೋಪದಲ್ಲಿ ಮುಟ್ಟುಗೋಲು ಹಾಕಲಾಗಿದ್ದ ವಸ್ತುಗಳನ್ನು ಹೈಕೋರ್ಟ್ ಆದೇಶದ ಮೇರೆಗೆ ಮರಳಿಸಲಾಗಿದೆ.
ನಾಲ್ಕೂರು ಗ್ರಾಮದ ಮನುದೇವ್ ಪರಮಲೆ ಅವರು ಮಾಡಿದ ಕೃಷಿಯನ್ನು ದ.ಕ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ದಿನ ಕೆಲವರು ಸರಕಾರಿ ಜಾಗ ಅತಿಕ್ರಮಣವೆಂದು ಆರೋಪಿಸಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅತಿಕ್ರಮಣ ತೆರವಿಗೆ ಅದೇಶಿಸಿದ್ದು, ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದರು.
ಈ ಕ್ರಮದ ವಿರುದ್ಧ ಮನುದೇವ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯವು ಜಿಲ್ಲಾಧಿಕಾರಿಯವರ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಮುಟ್ಟುಗೋಲು ಮಾಡಿಕೊಂಡ ಎಲ್ಲ ವಸ್ತುಗಳನ್ನು ಮರಳಿಸುವಂತೆ ಆದೇಶ ನೀಡಿದೆ. ಅದರಂತೆ ಸುಳ್ಯ ತಾಲೂಕು ಕಚೇರಿಯಲ್ಲಿ ಇರಿಸಲಾಗಿದ್ದ ಸೋಲಾರ್ ಬೇಲಿ, ಬ್ಯಾಟರಿ ಮತ್ತು ಇತರ ವಸ್ತುಗಳನ್ನು ಗ್ರಾಮ ಲೆಕ್ಕಾಧಿಕಾರಿ ಶ್ರೀಕಲಾ ಉಪಸ್ಥಿತಿಯಲ್ಲಿ ಇಲಾಖೆಯು ಮನುದೇವರಿಗೆ ಹಿಂದಿರುಗಿಸಿದೆ.