ಎಸೆಸೆಲ್ಸಿ ಮೌಲ್ಯಮಾಪಕರ ನಿರ್ಲಕ್ಷ್ಯ; ಬೆಳಾಲು ಶಾಲೆಯ ಹಲವು ವಿದ್ಯಾರ್ಥಿಗಳಿಗೆ ಅನ್ಯಾಯ
Team Udayavani, Aug 26, 2020, 4:54 AM IST
ಬೆಳ್ತಂಗಡಿ: ಎಸೆಸೆಲ್ಸಿ ಮೌಲ್ಯಮಾಪಕರ ನಿರ್ಲಕ್ಷ್ಯದಿಂದ ಒಂದೇ ಶಾಲೆಯ ಹಲವು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದು ಬೆಳ್ತಂಗಡಿಯಿಂದ ವರದಿಯಾಗಿದೆ. ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯ ವಿದ್ಯಾರ್ಥಿ ಕೃತಿನ್ ರಾಜ್ ಅವರಿಗೆ ಸಮಾಜ ವಿಜ್ಞಾನದಲ್ಲಿ ಆಂತರಿಕ ಅಂಕ ಹೊರತು ಪಡಿಸಿ ಪರೀಕ್ಷೆಯಲ್ಲಿ 36 ಅಂಕಗಳನ್ನಷ್ಟೇ ನೀಡಲಾಗಿದೆ. ಸಂದೇಹಗೊಂಡು ಉತ್ತರ ಪತ್ರಿಕೆಯನ್ನು ತರಿಸಿ ಶಾಲೆಯ ಅಧ್ಯಾಪಕರು ಮರುಮೌಲ್ಯಮಾಪನ ಮಾಡಿದಾಗ ಹೆಚ್ಚುವರಿ 16 ಅಂಕಗಳು ಸಿಗಬೇಕಿತ್ತು ಎಂದು ತಿಳಿದುಬಂತು. ಪ್ರಶ್ನೆಗಳಿಗೆ ನೇರ ಉತ್ತರ ಅಥವಾ ತನ್ನ ಸ್ವಂತಿಕೆಗೆ ಸಮಾನಾಂತರವಾಗಿ ಸರಿ ಹೊಂದುವ ಉತ್ತರ ನೀಡಿದಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದು ನಿಯಮ. ಆದರೆ ಮೌಲ್ಯಮಾಪಕರು ಅದನ್ನು ಪರಿಗಣಿಸದೇ ಇರುವುದರಿಂದ 16 ಅಂಕ ಕಡಿಮೆ ಬಂದಿದೆ.
ಒಟ್ಟು 419 ಅಂಕ ಬಂದರೂ ಫೇಲ್!
ಇದೇ ಶಾಲೆಯ ಬಸವರಾಜ್, ಶ್ರಾವ್ಯಾ, ಸವಾದ್ ಮತ್ತು ರೂಫಿಹಾ ಬಾನು ಅವರಿಗೆ ವಿಜ್ಞಾನ ವಿಷಯದಲ್ಲಿ ಅನುಕ್ರಮವಾಗಿ 6, 12, 8, 8 ಅಂಕಗಳು ಹೆಚ್ಚುವರಿಯಾಗಿ ಸಿಗಬೇಕಿವೆ. ಒಟ್ಟು 419 ಅಂಕ ಗಳಿಸಿರುವ ವಿದ್ಯಾರ್ಥಿಯೂ ಮೌಲ್ಯಮಾಪಕರ ತಪ್ಪಿನಿಂದಾಗಿ “ಅನುತ್ತೀರ್ಣ’ ಎನಿಸಿ ಕೊಳ್ಳು ವಂತಾಗಿದೆ. ಎಲ್ಲ ವಿದ್ಯಾರ್ಥಿಗಳು ಮರುಮೌಲ್ಯಮಾಪನದ ಮೊರೆಹೋಗಿದ್ದಾರೆ.
ವಿದ್ಯಾರ್ಥಿಯ ಸ್ವಂತಿಕೆ ಅಭಿವೃದ್ಧಿ ದೃಷ್ಟಿಯಿಂದ ಸ್ವಸಾಮರ್ಥ್ಯ ಗುರುತಿಸಬೇಕಿದೆ. ಮೌಲ್ಯಮಾಪಕರು ಆ ಕೆಲಸ ಮಾಡದೆ ಇರುವುದರಿಂದಾಗಿ ವಿದ್ಯಾರ್ಥಿಗಳು ಮೌಲ್ಯಮಾಪನದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಈ ವಿಚಾರವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.
– ರಾಮಕೃಷ್ಣ ಭಟ್ ಮುಖ್ಯೋಪಾಧ್ಯಾಯ, ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆ