ಬೆಳ್ತಂಗಡಿಯಿಂದ ಪಾಕಿಸ್ಥಾನಕ್ಕೆ ಸ್ಯಾಟಲೈಟ್ ಕರೆ: ಬೆಚ್ಚಿದ ಕರಾವಳಿ
Team Udayavani, Aug 18, 2019, 10:33 AM IST
ಬೆಳ್ತಂಗಡಿ: ರಾಜ್ಯದಲ್ಲಿ ಹೈಅಲರ್ಟ್ ಘೋಷಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಪಾಕಿಸ್ಥಾನಕ್ಕೆ ಸ್ಯಾಟಲೈಟ್ ಕರೆಗಳು ಮಾಡಿರುವ ಆಘಾತಕಾರಿ ಮಾಹಿತಿ ವರದಿಯಾಗಿದೆ.
ದೆಹಲಿಯಲ್ಲಿ ಸಿಕ್ಕಿದ ಉಗ್ರನೊಬ್ಬನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ಹೊರಬಿದ್ದಿದ್ದು, ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಗೋವಿಂದೂರು ಎಂದು ಹೇಳಲಾದ ಊರಿನಿಂದ ಸ್ಯಾಟಲೈಟ್ ಕರೆ ಹೋಗಿರುವ ಕುರಿತು ಬಾಯಿ ಬಿಟ್ಟಿದ್ದ ಎಂದು ವರದಿಯಾಗಿದೆ.
ಈ ಹಿನ್ನಲೆಯಲ್ಲಿ ಆಂತರಿಕ ಭದ್ರತಾ ಅಧಿಕಾರಿಗಳು ಕರೆಗಳ ಕುರಿತು ತನಿಖೆ ನಡೆಸಿದಾಗ ಕರೆ ಹೋಗಿರುವುದು ಬೆಳ್ತಂಗಡಿ ತಾಲೂಕಿನ ಆಸುಪಾಸಿಂದ ಕರೆ ಹೋಗಿರಿವುದು ಖಚಿತಗೊಂಡಿದೆ.
ಈ ಕುರಿತು ಆಂತರಿಕ ಮಂಗಳೂರು ವಿಭಾಗದ ಅಧಿಕಾರಿಗಳು ಕರೆ ಹೋದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇಲಾಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ.
ಚಿಕ್ಕಮಗಳೂರಲ್ಲೂ ಕಾಲ್ ಲೊಕೇಶನ್ ಪತ್ತೆ?
ಚಿಕ್ಕಮಗಳೂರು ಹಾಗೂ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಕರೆಗಳ ಲೊಕೇಷನ್ ಪತ್ತೆಯಾಗಿದ್ದು, ಎನ್ಐಎ ಅಧಿಕಾರಿಗಳ ಆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗುಪ್ತಚರ ಇಲಾಖೆ ಹೈ ಅಲರ್ಟ್ ಘೋಷಿಸಿದೆ ಎಂದು ಹೇಳುತ್ತಿದೆ ಕರೆಗಳ ಲೊಕೇಶನ್ ನಮೂದಾಗಿದೆ. ಎನ್ಐಎ ತಂಡ 3 ದಿನಗಳಿಂದ ಮಂಗಳೂರಿನಲ್ಲಿ ಶಂಕಿತರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ.
ಹೊರ ರಾಜ್ಯದ ದೋಣಿಗಳ ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿ ಪಡೆಯುತ್ತಿದೆ. ಕರಾವಳಿಯಲ್ಲಿನ ಎಲ್ಲ ಚಟುವಟಿಕೆಗಳ ಮೇಲೆ ಎನ್ಐಎ ಅಧಿಕಾರಿಗಳು ಗಮನ ಇಟ್ಟಿದ್ದಾರೆ.
ಕಮಿಷನರ್ ಸ್ಥಳೀಯ ಪೊಲೀಸ್ ಅಧಿಕಾರಿಗಳು, ನೌಕಾಪಡೆ ಹಾಗೂ ಕೋಸ್ಟ್ಗಾರ್ಡ್ ಅಧಿಕಾರಿಗಳ ಜತೆ 3 ಗಂಟೆಗಳಿಗೊಮ್ಮೆ ಮಾಹಿತಿ ಪಡೆಯುತ್ತಿದ್ದಾರೆ.
ಶುಕ್ರವಾರ ರಾತ್ರಿಯಿಂದ ನವಮಂಗಳೂರು ಬಂದರು, ಎಂಆರ್ಪಿಎಲ್, ಎನ್ಐಟಿಕೆ, ಕೆಐಒಸಿಎಲ್, ಮಂಗಳೂರು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ವ್ಯಾಪಕ ತಪಾಸಣೆ ನಡೆಯುತ್ತಿದೆ.