ವಿದ್ಯಾರ್ಥಿನಿಯ ಕೈ ಸೇರಿದ ಆಧಾರ್!
Team Udayavani, Feb 20, 2021, 7:30 AM IST
ಪುತ್ತೂರು: ಐದು ವರ್ಷದಿಂದ ಆಧಾರ್ ಕಾರ್ಡ್ಗಾಗಿ ಕಚೇರಿಗೆ ಅಲೆದಾಡುತ್ತಿದ್ದ ಸುಳ್ಯ ತಾಲೂಕಿನ ಪೆರುವಾಜೆ ಕುಂಡಡ್ಕ ನಿವಾಸಿ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಪವಿತ್ರಾ ಅವರಿಗೆ ಫೆ.19 ರಂದು ಸಂಜೆ ಆಧಾರ್ ಕಾರ್ಡ್ ಕೈ ಸೇರಿದೆ.
“ದಶ ಪ್ರಯತ್ನಕ್ಕೆ ಒಲಿಯದ ಆಧಾರ್ ಕಾರ್ಡ್’ ಎಂಬ ಶೀರ್ಷಿಕೆಯಡಿ ಉದಯವಾಣಿ ವರದಿ ಪ್ರಕಟಿಸಿದ ದಿನವೇ ಪುತ್ತೂರು ವಿಭಾಗ ಅಂಚೆ ಇಲಾಖೆ ಸ್ಪಂದಿಸಿದ್ದು, ಹೊಸ ಆಧಾರ್ ಕಾರ್ಡ್ ವಿದ್ಯಾರ್ಥಿನಿಗೆ ಲಭಿಸಿದೆ.
ಪುತ್ತೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಶ್ರೀಹರ್ಷ ನೆಟ್ಟಾರು, ಅಂಚೆ ಸಹಾಯಕಿ ಸುಮಾ ಎಚ್.ಎಸ್. ಅವರು ಪತ್ರಿಕಾ ವರದಿ ಆಧರಿಸಿ ವಿದ್ಯಾರ್ಥಿಯ ಆಧಾರ್ ಸಮಸ್ಯೆ ಬಗ್ಗೆ ಪೋಷಕರ ಜತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಈ ಹಿಂದೆ ನೋಂದಾಯಿಸಿದ ನೋಂದಣಿ ಸಂಖ್ಯೆ ಆಧರಿಸಿ ಪರಿಶೀಲಿಸಲಾಯಿತು. ಕೊನೆಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸಂಜೆ ವೇಳೆ ಹೊಸ ಆಧಾರ್ ಪ್ರತಿಯನ್ನು ಬೆಳ್ಳಾರೆ ಅಂಚೆ ಇಲಾಖೆ ಕಚೇರಿಯಲ್ಲಿ ವಿದ್ಯಾರ್ಥಿನಿ ಪವಿತ್ರಾ, ತಾಯಿ ಗೀತಾ ಅವರಿಗೆ ವಿತರಿಸಲಾಯಿತು.
ಜಿಲ್ಲಾಡಳಿತದ ಸೂಚನೆ :
ಉದಯವಾಣಿಯ ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಅಪರ ಜಿಲ್ಲಾಧಿಕಾರಿ ರೂಪಾ ಅವರ ಸೂಚನೆಯಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪವಿತ್ರಾ ಅವರ ಪೋಷಕರನ್ನು ಸಂಪರ್ಕಿಸಿ ಮಾಹಿತಿ ಪಡೆದು ತಾಲೂಕು ಆಡಳಿತಕ್ಕೆ ಸ್ಪಂದನೆ ನೀಡುವಂತೆ ನಿರ್ದೇಶಿಸಿದರು. ಸುಳ್ಯ ತಹಶೀಲ್ದಾರ್, ಉಪ ತಹಶೀಲ್ದಾರ್, ಪೆರುವಾಜೆ ಗ್ರಾಮಕರಣಿಕರು ಪೋಷಕರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಮೇಲಾಧಿಕಾರಿಗಳ ಗಮನಕ್ಕೆ ತಂದರು. ಸ್ಥಳೀಯವಾಗಿ ಅಗತ್ಯ ವಿವರಗಳನ್ನು ಒದಗಿಸುವಲ್ಲಿ ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅವರು ಸಹಕಾರ ನೀಡಿದರು.
ಶಿಕ್ಷಣ ಸಚಿವರ ಸ್ಪಂದನೆ :
ಪವಿತ್ರಾಳ ಆಧಾರ್ ಸಮಸ್ಯೆಯ ಬಗ್ಗೆ ಉದಯವಾಣಿ ವರದಿಯನ್ನು ಫೇಸ್ಬುಕ್ನಲ್ಲಿ ಗಮನಿಸಿದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಸಂದೇಶ ರವಾನಿಸಿ, ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಅದರಂತೆ ದ.ಕ. ಜಿಲ್ಲಾಡಳಿತ, ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ತತ್ಕ್ಷಣ ಆಧಾರ್ ಕಾರ್ಡ್ ಒದಗಿಸುವಂತೆ ನಿರ್ದೇಶಿಸಿದರು.
5 ವರ್ಷಗಳ ಅಲೆದಾಟಕ್ಕೆ ಮುಕ್ತಿ :
ಕೂಲಿ ಕಾರ್ಮಿಕ ಬಾಬು ಮತ್ತು ಗೀತಾ ದಂಪತಿ ಪುತ್ರಿ ಪವಿತ್ರಾ ಕಳೆದ ಐದು ವರ್ಷದಿಂದ ಆಧಾರ್ ಕಾರ್ಡ್ಗಾಗಿ ಪೋಷಕರ ಜತೆ ಸುತ್ತಾಡದ ಕಚೇರಿಗಳಿಲ್ಲ. ಖಾಸಗಿ, ಸರಕಾರಿ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮಾಡಿದ್ದರೂ ಈ ತನಕ ಕಾರ್ಡ್ ಸಿಕ್ಕಿರಲಿಲ್ಲ. ಪರಿಣಾಮ ಬಾಲಕಿ ಸ್ಕಾಲರ್ ಶಿಪ್ ಸೌಲಭ್ಯದಿಂದಲೂ ವಂಚಿತೆಯಾಗಿದ್ದಳು. ಇದೀಗ ಪವಿತ್ರಾ ಹಾಗೂ ಆಕೆಯ ಪೋಷಕರ ಐದು ವರ್ಷದ ಅಲೆದಾಟಕ್ಕೆ ಮುಕ್ತಿ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು