ಉಸ್ಮಾನ್ ಕೊಲೆ ಪ್ರಕರಣ: ಮೂರನೇ ಆರೋಪಿಯ ಬಂಧನ
Team Udayavani, Jul 30, 2023, 5:00 AM IST
ಅರಂತೋಡು: ಎರಡು ವಾರಗಳ ಹಿಂದೆ ಸಹೋದರರಿಂದಲೇ ಹತ್ಯೆಗೀಡಾದ ಉಸ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಮಡಿಕೇರಿ ತಾಲೂಕು ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ನಡೆದಿತ್ತು. ಉಸ್ಮಾನ್ ನ್ನು ಕೊಲೆಗೈಯ್ಯಲು ಆತನ ಸಹೋದರರಾದ ರಫೀಕ್ ಮತ್ತು ಸತ್ತಾರ್ ಬಳಸಿದ ಚೂರಿಯನ್ನು ಅರಂತೋಡಿನಲ್ಲಿರುವ ಅವರ ಸಹೋದರ ಮಾಯಿನ್ ಕುಟ್ಟಿಯವರ ಪುತ್ರ ಮುಬಾರಕ್ ಒದಗಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಮುಬಾರಕ್ (37) ಸುಳ್ಯ ಜೂನಿಯರ್ ಕಾಲೇಜು ಸಮೀಪದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದನು. ಕೊರೊನಾದ ಬಳಿಕ ಬೇಕರಿ ಮುಚ್ಚಿ ಊರಿಗೆ ಬಂದು ನೆಲೆಸಿರುವ ಆತನಲ್ಲಿ ಬೇಕರಿಯ ಬ್ರೆಡ್ ಮತ್ತಿತರ ವಸ್ತುಗಳನ್ನು ಕತ್ತರಿಸುವ ಗಟ್ಟಿಯಾದ ಚೂರಿ ಇತ್ತೆನ್ನಲಾಗಿದೆ.
ತನ್ನ ಚಿಕ್ಕಪ್ಪ ಮತ್ತು ದೊಡ್ಡಪ್ಪ ಕೇಳಿದ ಮೇರೆಗೆ ಕೊಲೆ ನಡೆಯುವ ಹಿಂದಿನ ದಿನ ಮುಬಾರಕ್ ಆ ಚೂರಿಯನ್ನು ಅವರಿಗೆ ಕೊಟ್ಟಿದ್ದನೆಂದು ಹೇಳಲಾಗಿದೆ. ಕೊಲೆ ಪ್ರಕರಣದ ತನಿಖಾಧಿಕಾರಿಯಾದ ಮಡಿಕೇರಿ ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೆಯವರು ಜು. 27ರಂದು ಸುಳ್ಯದಲ್ಲಿ ಮುಬಾರಕ್ನನ್ನು ಬಂಧಿಸಿದರು.
ಆರೋಪಿಯನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎನ್ನಲಾಗಿದೆ.