ಅದಮಾರು ಮಠ ಪರ್ಯಾಯದ ಬಾಳೆಮುಹೂರ್ತ
Team Udayavani, Dec 15, 2018, 9:13 AM IST
ಉಡುಪಿ/ಹೆಬ್ರಿ: ಶ್ರೀಕೃಷ್ಣ ಮಠದಲ್ಲಿ ಮುಂದಿನ ಪರ್ಯಾಯ ಪೂಜಾಕೈಂಕರ್ಯ ನೆರವೇರಿಸಲಿರುವ ಶ್ರೀ ಅದಮಾರು ಮಠಾಧೀಶರು ಪರ್ಯಾಯ ಪೂರ್ವಭಾವಿ ಮೊದಲ ಮುಹೂರ್ತವಾದ ಬಾಳೆ ಮುಹೂರ್ತವನ್ನು ಶುಕ್ರವಾರ ಬೆಳಗ್ಗೆ ಅದಮಾರು ಮಠದ ಆವರಣದಲ್ಲಿ ನೆರವೇರಿಸಿ, ಸಂಜೆ ಹೆಬ್ರಿ ಸಮೀಪದ ಚಾರ ಗ್ರಾಮದಲ್ಲಿ ಬಾಳೆ ಬೆಳೆಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಅದಮಾರು ಮಠದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ರಮವಾಗಿ ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ, ಶ್ರೀ ಕೃಷ್ಣಮಠಕ್ಕೆ ವಾದ್ಯ ಬಿರುದಾವಳಿಯೊಂದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಾಳೆ ಗಿಡಗಳ ಮೆರವಣಿಗೆ ರಥಬೀದಿಯಲ್ಲಿ ನಡೆದ ಬಳಿಕ ಉಭಯ ಶ್ರೀಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಬಾಳೆಗಿಡ ಮತ್ತು ತುಳಸಿ ಗಿಡಗಳನ್ನು ನೆಟ್ಟು ಮುಹೂರ್ತ ನಡೆಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ಪುರೋಹಿತರಾದ ಶಿಬರೂರು ವೇದವ್ಯಾಸ ಆಚಾರ್ಯ, ಗಿಡಗಳನ್ನು ಮೇಸ್ತ್ರೀಗಳಾದ ಸುಂದರ ಶೇರಿಗಾರ್ ನೇತೃತ್ವದಲ್ಲಿ ನೆಡಲಾಯಿತು. ಚಾರದ ಕೃಷಿಕರಾದ ರವೀಂದ್ರನಾಥ ಶೆಟ್ಟಿ, ಮಿಥುನ್ ಶೆಟ್ಟಿ ಗಿಡಗಳನ್ನು ನೆಟ್ಟರು.
ಕೃಷಿಯಿಂದ ಪರ್ಯಾಯ ಚಟುವಟಿಕೆ
ಪರ್ಯಾಯದ ಚಟುವಟಿಕೆ ಆರಂಭವಾಗುವುದೇ ಕೃಷಿಯಿಂದ. ಕೃಷಿಗೆ ಕೃಷ್ಣ ಮಹತ್ವ ಕೊಟ್ಟಿದ್ದ. ದೇವ
ಸ್ಥಾನದಲ್ಲಿ ಪೂಜೆ ಮಾಡುವ ಜತೆ ಗೋವರ್ಧನಗಿರಿಗೆ ಪೂಜೆ ಸಲ್ಲಿಸಿ ಸಸ್ಯಸಂಪತ್ತು, ಗೋಸಂಪತ್ತು ಹೆಚ್ಚಾಗು ವಂತೆ ಮಾಡಿದ್ದ. ಆಚಾರ್ಯ ಮಧ್ವರು, ವಾದಿರಾಜರು ತುಳಸಿ, ಬಾಳೆ ಮುಹೂರ್ತದೊಂದಿಗೆ ಪ್ರಕೃತಿ ಪೂಜೆಗೆ ಮತ್ತೆ ಒತ್ತು ಕೊಟ್ಟರು ಎಂದು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ನುಡಿದರು.
ಸಿರಿವಂತ, ಬಡವ: ಅನುಗ್ರಹ ಒಂದೇ
ಬಾಳೆ ಬೆಳೆಸುವ ಉಪಕ್ರಮಕ್ಕೆ ಚಾರ ಗ್ರಾಮದ ಯುವಕರು ಮುಂದಾಗಿದ್ದಾರೆ. ಇದರಿಂದ ಕೃಷಿ ಕ್ಷೇತ್ರ ಉತ್ತೇ
ಜನಗೊಳ್ಳುತ್ತದೆ. ನಮ್ಮ ಯುವಕರು ಸ್ಥಳೀಯವಾಗಿ ಉದ್ಯೋಗ ಪಡೆಯ ಬೇಕು ಮತ್ತು ಸ್ವಾವಲಂಬಿಯಾಗಿ ಬದುಕುವಂತಾಗಬೇಕು. ಕೋಟಿ ರೂ. ಕೊಟ್ಟ ಸಿರಿವಂತನಿಗೂ ಒಂದು ತೆಂಗಿನಕಾಯಿ ಕೊಟ್ಟ ಬಡವನಿಗೂ ಶ್ರೀಕೃಷ್ಣನ ಅನುಗ್ರಹ ಒಂದೇ ತೆರನಾಗಿರುತ್ತದೆ ಎಂದು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ವಿಶ್ಲೇಷಿಸಿದರು.
ಸ್ವಾವಲಂಬಿ ಬದುಕು ಮುಖ್ಯ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀಕೃಷ್ಣ ಮಠದಲ್ಲಿ ಈಗಿರುವ ವ್ಯವಸ್ಥೆಯನ್ನು ಚೆನ್ನಾಗಿ ಮುಂದು ವರಿಸಿಕೊಂಡು ಹೋಗುವುದೇ ನಮ್ಮ ಪರ್ಯಾಯದ ಗುರಿ. ಬಾಳೆ ಕೃಷಿ ಪ್ರಯೋಗದಂತೆ ಅಕ್ಕಿ ಇತ್ಯಾದಿ ಉತ್ಪಾದನೆಯನ್ನೂ ಮಾಡಬೇಕೆಂದಿದ್ದೇವೆ. ಒಟ್ಟಾರೆ ಸ್ವಾವಲಂಬಿ ಬದುಕು ನಮ್ಮದಾಗಬೇಕು ಎಂದರು. ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಕೆ. ಜಯಪ್ರಕಾಶ್ ಹೆಗ್ಡೆ, ಪುರಸಭೆ ಮಾಜಿ ಅಧ್ಯಕ್ಷ ಎಂ. ಸೋಮಶೇಖರ ಭಟ್, ನಗರಸಭಾ ಸದಸ್ಯರು, ಮಠದ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಪಾಲ್ಗೊಂಡಿದ್ದರು. ಗೋವಿಂದರಾಜ್ ನಿರ್ವಹಿಸಿದರು.
2020ರಲ್ಲಿ 250ನೇ ಪರ್ಯಾಯ ಪೀಠಾರೋಹಣ ಯಾರಿಂದ?
ಶ್ರೀಕೃಷ್ಣ ಮಠದಲ್ಲಿ ಮುಂದೆ ಪರ್ಯಾಯ ನಡೆಯುವುದು 2020ರಲ್ಲಿ. ಇದು 250ನೇ ದ್ವೆ ವಾರ್ಷಿಕ ಪರ್ಯಾಯವಾಗಿದೆ. 1522ರಲ್ಲಿ ಎರಡು ವರ್ಷಗಳ ಪೂಜಾ ವ್ಯವಸ್ಥೆಯನ್ನು ವಾದಿರಾಜರು ಆರಂಭಿಸಿದರು. ಶ್ರೀ ಅದಮಾರು ಮಠದ ಶ್ರೀವಿಬುಧೇಶತೀರ್ಥ ಶ್ರೀಪಾದರು 1956 -57, 1972- 73ರಲ್ಲಿ ಎರಡು ಪರ್ಯಾಯ ಪೂಜೆಯನ್ನು ನೆರವೇರಿಸಿ 1986-87, 2004-05ರಲ್ಲಿ ಅವರ ಪಟ್ಟ ಶಿಷ್ಯ ಶ್ರೀ ವಿಶ್ವ ಪ್ರಿಯತೀರ್ಥ ಶ್ರೀಪಾದರಿಂದ ಪರ್ಯಾಯ ಪೂಜೆಯನ್ನು ನಡೆಸಿದರು. ಈಗ ಶ್ರೀ ವಿಶ್ವಪ್ರಿಯತೀರ್ಥರೂ ಗುರುಗಳಂತೆ ಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಪರ್ಯಾಯ ಪೂಜೆಯನ್ನು ನಡೆಸುತ್ತಾರೋ ಎಂಬ ಕುತೂಹಲವಿದೆ. ಸುದ್ದಿಗಾರರ ಪದೇ ಪದೇ ಪ್ರಶ್ನೆಗೆ ಉತ್ತರಿಸಿದ ಶ್ರೀವಿಶ್ವಪ್ರಿಯತೀರ್ಥರು, ನಾವಿಬ್ಬರೂ ಜತೆ ಸೇರಿ ಪರ್ಯಾಯೋತ್ಸವವನ್ನು ನಡೆಸುತ್ತೇವೆ. 2020ರ ಜನವರಿ 18ರ ವರೆಗೆ ಕಾಯಿರಿ. ಅಂದೇ ಗೊತ್ತಾಗುತ್ತದೆ ಎಂದು ಹೇಳಿದರು.
ಚಾರದಲ್ಲಿ ಸಾವಿರ ಸಸಿಗಳು
ಹೆಬ್ರಿ ಚಾರ ಗ್ರಾಮದ ಹಂದಿಗಲ್ಲಿನಲ್ಲಿ ವಿವೇಕಾನಂದ ವೇದಿಕೆ ನೇತೃತ್ವದಲ್ಲಿ ಬಾಳೆ ಗಿಡಗಳನ್ನು ಬೆಳೆಸುವ ಪ್ರಕ್ರಿಯೆಗೆ ಶ್ರೀಪಾದರು ಚಾಲನೆ ನೀಡಿದರು. ಸುಮಾರು ಸಾವಿರ ಸಸಿಗಳನ್ನು ನೆಡಲಾಯಿತು. ವರ್ಷದ ಎಲ್ಲಸಮಯದಲ್ಲಿಯೂ ಫಲ ಕೊಡುವ ಬೆಳೆ ಬಾಳೆಗೆ ಧಾರ್ಮಿಕವಾಗಿ ವಿಶೇಷ ಮಹತ್ವವಿದೆ ಎಂದು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ನಿತ್ಯ ಕೃಷ್ಣನಾಮ ಸ್ಮರಣೆಯಿಂದ ಕೃಷಿಯೊಂದಿಗೆ ಆರೋಗ್ಯವೂ ಸುಧಾರಿಸುತ್ತದೆ ಎಂದು ಶ್ರೀ ಈಶಪ್ರಿಯತೀರ್ಥರು ನುಡಿದರು.
ಸಾಲ ಮನ್ನಾಕ್ಕಿಂತ ಪ್ರೋತ್ಸಾಹ ಅಗತ್ಯ
ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನೀಡುವುದು, ಉತ್ತಮ ಬೀಜ- ಗೊಬ್ಬರ ಪೂರೈಕೆ ಮೊದಲಾದ ಪ್ರೋತ್ಸಾಹಕ ಯೋಜನೆಗಳನ್ನು ಸರಕಾರ ರೂಪಿಸುವುದು ಮುಖ್ಯ. ಆಗ ರೈತ ಆರ್ಥಿಕವಾಗಿ ಸದೃಢನಾಗುತ್ತಾನೆ. ಸಾಲ ಮನ್ನಾ ಮಾಡುವುದಕ್ಕಿಂತ ಇದು ಮುಖ್ಯ ಎಂದು ಸುಮಾರು ಐದು ಎಕ್ರೆ ಪ್ರದೇಶದಲ್ಲಿ ಬಾಳೆ ಬೆಳೆಸಿರುವ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ವಿವೇಕಾನಂದ ವೇದಿಕೆ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಸ್ವಾಗತಿಸಿ, ಗಣೇಶ ಶೇಡಿಮನೆ ಕಾರ್ಯಕ್ರಮ ನಿರ್ವಹಿಸಿದರು. ಜಾಗದ ಮಾಲಕರಾದ ಸಾಧು ಶೆಟ್ಟಿ, ಮಿಥುನ್ ಶೆಟ್ಟಿ, ರಾಜೇಶ ಪೂಜಾರಿ, ಹಿರಿಯಣ್ಣ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ