ಪರೀಕ್ಷಾ ಕೇಂದ್ರಗಳಿಂದ ವಿದ್ಯಾರ್ಥಿಗಳಿಗೆ ಸೋಂಕು ಹರಡಿಲ್ಲ: ಉಡುಪಿ ಜಿಲ್ಲಾಧಿಕಾರಿ ಸ್ಪಷ್ಟನೆ
Team Udayavani, Jul 1, 2020, 5:40 PM IST
ಉಡುಪಿ: ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ಹರಡಿದೆ ಎಂಬುದಕ್ಕೆ ಯಾವುದೇ ಕುರುಹುಗಳಿಲ್ಲ. ಆ ರೀತಿ ಆಗದಂತೆ ಎಲ್ಲವೂ ಶಿಸ್ತು ಬದ್ಧವಾಗಿ ಹಾಗೂ ಸುರಕ್ಷಿತ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರಕಾರದ ಸೂಚನೆಯಂತೆ ಕೆಎಸ್ಆರ್ಟಿಸಿ ಬಸ್ಗಳ 600 ಮಂದಿ ಚಾಲಕರು ಹಾಗೂ ನಿರ್ವಾಹಕರಿಗೆ ಹಾಗೂ ಮಾಲ್ಗಳಲ್ಲಿರುವವರನ್ನು, ಡೆಲಿವರಿ ಬಾಯ್ಗಳು, ಸೇಲ್ಸ್ ಮೆನ್ಗಳು, ವ್ಯಾಪಾರಸ್ಥರು, ಬಸ್ ಚಾಲಕರುಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲು ಉದ್ದೇಶಿಸಿದೆ ಎಂದರು.
ಉಡುಪಿ ಮಾಡೆಲ್
ಜಿಲ್ಲೆಯಲ್ಲಿ ಐಸಿಯುನಲ್ಲಿ ನಾಲ್ಕು ಮಂದಿ ಕೋವಿಡ್-19 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಮೂವರು ಚೇತರಿಸಿಕೊಂಡಿದ್ದಾರೆ. ಒಬ್ಬರು ಗಂಭೀರವಾಗಿದ್ದರೂ ಶೇ.25ರಷ್ಟು ಆರೋಗ್ಯದಲ್ಲಿ ಸುಧಾರಣೆ ಆಗಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಲ್ಲ ಸೋಂಕಿತರು ಬದುಕಿ ಬಂದಿರುವುದು ನಮ್ಮ ಜಿಲ್ಲೆಯಲ್ಲಿ ಮಾತ್ರ. ಇದಕ್ಕೆ ವೈದ್ಯರ ತಂಡದ ಶ್ರಮ ಮುಖ್ಯವಾಗಿದೆ. ಈ ಉಡುಪಿ ಮಾಡೆಲ್ ಅನ್ನು ಇತರ ಜಿಲ್ಲೆಯವರು ಕೂಡ ಅನುಸರಿಸುತ್ತಿದ್ದಾರೆ ಎಂದರು.
ಹೆಚ್ಚು ಪರೀಕ್ಷೆ!
ಜಿಲ್ಲೆಯ ಕೋವಿಡ್-19 ವಾರಿಯರ್ಸ್ಗಳಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಅವರಿಗೆ ಕೋವಿಡ್ ಸೋಂಕು ತಗಲದಂತೆ ತಡೆಯಬೇಕಾಗಿದೆ. ಈ ಮೂಲಕ ನಮ್ಮ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಿದರೆ ಕೋವಿಡ್ ವಾರಿಯರ್ಸ್ ಸೋಂಕಿನ ಕೈಗೆ ಸಿಗದಂತೆ ಮಾಡಬಹುದು. ಸೋಂಕು ಸಮುದಾಯಕ್ಕೆ ಹರಡದಂತೆ ತಡೆಯಲು ನಾವು ಇಂದು ಹೆಚ್ಚು ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದರು.
ಜಿಲ್ಲೆಯ ಬೀಚ್ ತೆರೆಯಲಾಗಿದೆ. ಆದರೆ ಮಕ್ಕಳು ಹಾಗೂ ಹಿರಿಯರಿಗೆ ಅಲ್ಲಿ ಪ್ರವೇಶ ನಿಷೇಧ. ಸದ್ಯಕ್ಕೆ ಹೊರಗಿನ ಪ್ರವಾಸಿಗರು ಜಿಲ್ಲೆಗೆ ಬರುವುದು ಬೇಡ. ಅಗತ್ಯ ಇದ್ದರೆ ಮಾತ್ರ ಪ್ರಯಾಣ ಮಾಡಬೇಕು. ಅನಾವಶ್ಯಕವಾಗಿ ಯಾರು ಕೂಡ ಪ್ರಯಾಣ ಮಾಡುವುದು ಬೇಡ ಎಂದರು.