ಸಂಚಾರ ನಿಯಮ ಕಟ್ಟುನಿಟ್ಟಿನ ಪಾಲನೆ: ಜಿಲ್ಲಾಧಿಕಾರಿ ಕರೆ
Team Udayavani, Dec 13, 2019, 11:12 PM IST
ಉಡುಪಿ: ವಾಹನ ಚಾಲಕರು ನಿಯಮಗಳಿಗೆ ಅನುಸಾರವಾಗಿ ವಾಹನ ಚಲಾಯಿಸಿ ಅಪಘಾತ ರಹಿತ ಸುಗಮ ಸಂಚಾರಕ್ಕೆ ಸಹಕಾರ ನೀಡಬೇಕು. ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿತ ಲೇನ್ಗಳಲ್ಲಿ, ನಿಗದಿತ ವೇಗ ಮಿತಿಯಲ್ಲಿ ಚಲಾಯಿಸುವಂತೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಕರೆ ನೀಡಿದ್ದಾರೆ.
ಹೆದ್ದಾರಿಯ ಮೊದಲನೇ ಪಥದಲ್ಲಿ ದ್ವಿಚಕ್ರ ವಾಹನಗಳನ್ನು ಅತೀ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಇದರಿಂದಾಗಿ ತೀವ್ರತರವಾದ ಅಪಘಾತಗಳು ಹೆಚ್ಚುತ್ತಿದ್ದು, ಆಗಾಗ್ಗೆ ಪ್ರಾಣಹಾನಿಗಳಾಗುತ್ತಿವೆ.
ದ್ವಿಚಕ್ರ ವಾಹನ ಚಾಲಕರು ರಸ್ತೆಯ ಎಡಭಾಗದಲ್ಲಿ ಮಾತ್ರ ವಾಹನ ಚಲಾಯಿಸಬೇಕು. ರಸ್ತೆ ಮೇಡಿಯನ್ ಓಪನಿಂಗ್ ಇದ್ದಲ್ಲಿ ಮಾತ್ರ ತಿರುಗಬೇಕು. ಅದು ದೂರ ಇದೆ ಎಂಬ ಕಾರಣಕ್ಕೆ ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುವುದು ಸರಿಯಲ್ಲ. ಇಂತಹ ನಿಯಮ ಬಾಹಿರ ಚಾಲನೆಯಿಂದ ಸುಗಮ ಸಂಚಾರಕ್ಕೆ ಅಡೆತಡೆಯಾಗುವುದಲ್ಲದೆ ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.