Kollur; ಜೆಸಿಬಿ ವಾಹನವನ್ನು ಹಿಂದಿರುಗಿಸದೆ ವಂಚನೆ
Team Udayavani, Jan 23, 2024, 11:15 PM IST
ಕೊಲ್ಲೂರು: ಮಂಗಳೂರಿನ ವ್ಯಕ್ತಿಯಿಂದ 2020ರಲ್ಲಿ 10 ಲಕ್ಷ ರೂ. ಕೊಟ್ಟು ಜೆಸಿಬಿ ಖರೀದಿಸಿದ ಇಲ್ಲಿನ ದೈವಿಕ್ ಅವರಿಗೆ ವ್ಯಕ್ತಿಯೋರ್ವ ನಂಬಿಸಿ ಮೋಸ ಮಾಡಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2012ನೇ ಮಾಡೆಲ್ ಜೆಸಿಬಿ ವಾಹನವನ್ನು 2020ರಲ್ಲಿ 10 ಲಕ್ಷ ರೂ. ನೀಡಿ ಮಂಗಳೂರಿನ ವ್ಯಕ್ತಿಯಿಂದ ಖರೀದಿ ಮಾಡಲಾಗಿತ್ತು. ಬಳಿಕ ಉಡುಪಿ ಆರ್ಟಿಒ ಕಚೇರಿಯಲ್ಲಿ ಅವರ ಹೆಸರಿನಲ್ಲಿ ನೋಂದಣಿ ಮಾಡಿಕೊಳ್ಳಲಾಗಿತ್ತು. ಈ ಜೆಸಿಬಿ ವಾಹನವನ್ನು ಮಾರಾಟ ಮಾಡುವ ಬಗ್ಗೆ ಒ.ಎಲ್. ಎಕ್ಸ್ ಆ್ಯಪ್ನಲ್ಲಿ ಜಾಹೀರಾತು ಹಾಕಿದ ಸಂದರ್ಭದಲ್ಲಿ ಆರೋಪಿ ಎನ್ನಲಾದ ಕಾರ್ಕಳದ ನೆಲ್ಲೂರಿನ ಸುಮಿತ್ 2021ರ ಮೇ ತಿಂಗಳಲ್ಲಿ ದೂರು ನೀಡಿದವರ ಮನೆಗೆ ಬಂದು ಮಾತುಕತೆ ನಡೆಸಿ ಒಟ್ಟು 8 ಲಕ್ಷ 50 ಸಾವಿರ ರೂ. ಹಣಕ್ಕೆ ಖರೀದಿಗೆ ಒಪ್ಪಿಕೊಂಡು 1 ಲಕ್ಷ ರೂ. ಮೊತ್ತವನ್ನು ಸ್ಥಳದಲ್ಲೇ ದೂರುದಾರರ ಕೆನರಾ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಮಿಕ್ಕುಳಿದ 7,50,000 ರೂ. ಹಣವನ್ನು ಕೂಡಲೇ ನೀಡುವುದಾಗಿ ಹೇಳಿ ವಾಹನದ ದಾಖಲಾತಿ ಹಾಗೂ ವಾಹನವನ್ನು ತೆಗೆದುಕೊಂಡು ಹೋಗಿದ್ದರು.
ಜೆ.ಸಿ.ಬಿ. ವಾಹನವನ್ನು ಕೊಂಡು ಹೋಗಿ ಸುಮಾರು ಎರಡೂವರೆ ವರ್ಷ ಕಳೆದರೂ, ಈವರೆಗೆ ಬಾಕಿ ಉಳಿದ ಹಣ ನೀಡದೆ ಜೆ.ಸಿ.ಬಿ. ವಾಹನವನ್ನೂ ಮರಳಿಸದೆ ನಂಬಿಸಿ ವಂಚನೆ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.