ಪಾದರಾಯನಪುರ “ಪುಂಡ’ ಬಂಧನ
Team Udayavani, Apr 28, 2020, 3:10 PM IST
ಬೆಂಗಳೂರು: ಪಾದರಾಯನಪುರ ಗಲಾಟೆ ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ಸಂಘಟನೆಯೊಂದರ ಸದಸ್ಯ ಇರ್ಫಾನ್ (28)ನನ್ನು ಜೆ.ಜೆ.ನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪಾದರಾಯನಪುರದಲ್ಲಿ ಗಲಾಟೆಗೆ ಈತನೇ ಪ್ರಚೋದನೆ ನೀಡಿದ್ದು, ಕೆ.ಜಿ. ಹಳ್ಳಿಯ ಸಂಬಂಧಿಕರ ಮನೆಯೊಂದರಲ್ಲಿ ತಲೆಮರೆಸಿಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ.
ಇತರೆ ಆರೋಪಿಗಳ ವಿಚಾರಣೆ ವೇಳೆ ಮಾಹಿತಿ ಸಿಕ್ಕ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಇದೇ ಏ.19ರಂದು ರಾತ್ರಿ ಪಾದರಾಯನಪುರದ ಅರ್ಫತ್ ನಗರಕ್ಕೆ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಬಂದಿದ್ದ ಪೊಲೀಸರು, ಆರೋಗ್ಯಾಧಿಕಾರಿಗಳ ಮೇಲೆ ನಡೆಸಿ ದಾಂಧಲೆ ಮಾಡಲಾಗಿತ್ತು. ಆರೋಪಿಗಳ ಪೈಕಿ ಒಬ್ಟಾತ ಮಾರಕಾಸ್ತ್ರಗಳಿಂದ ಹತ್ಯೆಗೂ ಯತ್ನಿಸಿದ್ದ. ಈ ಗಲಭೆಗೂ ಮೊದಲು ಇರ್ಫಾನ್ ತನ್ನ ಮನೆಗೆ ಬಂಧಿತೆ ಫರೋಜಾ, ಇನ್ನಿತರೆ ಆರೋಪಿಗಳನ್ನು ಕರೆಸಿ ದಾಂಧಲೆಗೆ
ಸಂಚು ರೂಪಿಸಿದ್ದ. ಅಲ್ಲದೆ, “ಕ್ವಾರಂಟೈನ್ ಮಾಡಲು ಯಾರೇ ಬಂದರೂ ಅವಕಾಶ ಕೊಡಬೇಡಿ. ಹಲ್ಲೆ ನಡೆಸಿ ಎಂದು ಪ್ರಚೋದನೆ ನೀಡಿದ್ದ. ಗಲಾಟೆ ವೇಳೆ ಫರೋಜಾ ಜತೆ ಸೇರಿ ಗಲಾಟೆಗೆ ಕುಮ್ಮಕ್ಕು ನೀಡಿದ್ದ. ಈತನ ಹಿಂದೆ ಇನ್ನಷ್ಟು ಮಂದಿ ಕೈವಾಡವಿರುವ ಅನುಮಾನವಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು. ಗುಜರಿ ವ್ಯಾಪಾರ ಮಾಡಿಕೊಂಡಿರುವ ಆರೋಪಿ, ಕೃತ್ಯ ಎಸಗಿದ ಬಳಿಕ ಬೇರೆ ಊರುಗಳಿಗೆ ಹೋಗಲು ಸಿದ್ಧತೆ ನಡೆಸಿದ್ದ. ಆದರೆ, ಎಲ್ಲೆಡೆ ಲಾಕ್ಡೌನ್ ಹಾಗೂ ಪೊಲೀಸ್ ತಪಾಸಣೆ ನಡೆಯುತ್ತಿದ್ದರಿಂದ ಎಲ್ಲಿಯೂ ಹೋಗಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದರು.
ವೈದ್ಯಕೀಯ ಪರೀಕ್ಷೆಗೆ: ಆರೋಪಿಯನ್ನು ವಶಕ್ಕೆ ಪಡೆಯುವ ಮೊದಲು ಇರ್ಫಾನ್ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಪ್ರತ್ಯೇಕವಾಗಿ ವಿಚಾರಣೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದರು.