Cylinder ಸ್ಫೋಟ: ಮಕ್ಕಳು ಸೇರಿ 7 ಮಂದಿಗೆ ಗಾಯ
Team Udayavani, Nov 23, 2023, 4:05 PM IST
ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ 7 ಮಂದಿ ಗಾಯ ಗೊಂಡಿರುವ ಘಟನೆ ನಗರದ ಅಂಜನಾಪುರ ಸಮೀಪದ ವೀವರ್ಸ್ ಕಾಲೋನಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್ (33) ಆತನ ಪತ್ನಿ ನಾಜಿಯಾ(23), ಇರ್ಫಾನ್(22) ಮತ್ತು ಈತನ ಪತ್ನಿ ಗುಲಾಬ್(19) ಮತ್ತು ಶಹಜಾದ್ (9) ಹಾಗೂ 2 ಮತ್ತು ಮೂರು ವರ್ಷದ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿದೆ. ಈ ಪೈಕಿ ಜಮಾಲ್ ಮತ್ತು ನಾಜೀಯಾ ಹಾಗೂ ಇಬ್ಬರು ಚಿಕ್ಕ ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಳಿಮಾವು ನಿವಾಸಿ ಮಾರ್ಟಿನ್ ಎಂಬುವರ ಮನೆಯಲ್ಲಿ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.
ಉತ್ತರ ಪ್ರದೇಶದ ಮೂಲದ ಜಮಾಲ್ ಮತ್ತು ಇರ್ಫಾನ್ ದಂಪತಿ ವೀವರ್ಸ್ ಕಾಲೋನಿ ಸಮೀಪ ದಲ್ಲೇ ಕೈಮಗ್ಗ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮಾರ್ಟಿನ್ ಎಂಬುವರಿಗೆ ಸೇರಿದ ಕಟ್ಟಡದ ಮೊದಲ ಮಹಡಿಯಲ್ಲಿರುವ ಬಾಡಿಗೆ ಮನೆಯಲ್ಲೇ ಕುಟುಂಬ ಸಮೇತ 7 ಮಂದಿಯೂ ವಾಸವಾಗಿದ್ದರು.
ಮಂಗಳವಾರ ರಾತ್ರಿ ಎಲ್ಲರೂ ಊಟ ಮುಗಿಸಿ ಮಲಗಿದ್ದಾರೆ. ಅದಕ್ಕೂ ಮೊದಲು ಅಡುಗೆ ಸಿಲಿಂಡರ್ ಆಫ್ ಮಾಡಿರಲಿಲ್ಲ. ರಾತ್ರಿಯಿಡಿ ಅಡುಗೆ ಅನಿಲ ಸೋರಿಕೆಯಾಗಿದೆ. ಮತ್ತೊಂದೆಡೆ ಚಳಿ ಹೆಚ್ಚಾಗಿದ್ದರಿಂದ ಅಡುಗೆ, ಮಧ್ಯದ ಕೋಣೆಯ ಕಿಟಕಿಗಳನ್ನು ಮುಚ್ಚಲಾಗಿತ್ತು. ಆದರಿಂದ ಸೋರಿಕೆಯಾದ ಅನಿಲ ಹೊರಗಡೆ ಹೋಗಲು ಸಾಧ್ಯವಾಗದೆ ಮನೆಯ ಎಲ್ಲೆಡೆ ಆವರಿಸಿಕೊಂಡಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
7 ಮಂದಿಗೂ ಗಾಯ:
ಸಿಲಿಂಡರ್ ಸ್ಫೋಟಕ್ಕೆ ಮನೆಯಲ್ಲಿದ್ದ ಮೂವರು ಮಕ್ಕಳು ಸೇರಿ 7 ಮಂದಿಗೂ ಗಂಭೀರ ಗಾಯಗಳಾಗಿದ್ದು, ಎಲ್ಲರೂ ಅಸ್ವಸ್ಥಗೊಂಡಿ ದ್ದರು. ವಿಚಾರ ತಿಳಿದು ಕೆಲ ನಿಮಿಷಗಳಲ್ಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಕೋಣನಕುಂಟೆ ಠಾಣೆ ಪೊಲೀಸರು ಮನೆ ಒಳಗೆ ಪ್ರವೇಶಿಸಿ ಎಲ್ಲರನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಡುಗೆ ಅನಿಲ ಸೋರಿಕೆಯಿಂದಲೇ ದುರ್ಘಟನೆ ನಡೆದಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವಿದ್ಯುತ್ ಸ್ವಿಚ್ ಆನ್ ಮಾಡಿದಾಗ ಸ್ಫೋಟ
ಬುಧವಾರ ಮುಂಜಾನೆ 5.30ರ ಸುಮಾರಿಗೆ ನಾಜೀಯಾ ಅಡುಗೆ ಮಾಡಲು ಎದ್ದು, ಅಡುಗೆ ಕೋಣೆಯ ವಿದ್ಯುತ್ ಸ್ವಿಚ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದ್ದು, ನಾಜೀಯಾ ಸೇರಿ ಮಲಗಿದ್ದ ಇತರೆ ಆರು ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಕೂಡಲೇ ರಕ್ಷಣೆಗೆ ಕೂಗಿಕೊಂಡಿದ್ದಾರೆ. ಅದೇ ವೇಳೆ ಸ್ಫೋಟದ ತೀವ್ರತೆಗೆ ಮನೆಯ ಮುಂಬಾಗಿಲು, ಮೂರು ಕಿಟಕಿಗಳು, ಕಾರಿಡಾರ್ನಲ್ಲಿದ್ದ ಕಬ್ಬಿಣದ ಕಂಬಿಗಳು ಛಿದ್ರಗೊಂಡು ಹೊರಗಡೆ ಬಿದ್ದಿವೆ. ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ.