ರಾಜಕೀಯಕ್ಕೆ ಧುಮುಕಲು ತಂದೆಯೇ ಪ್ರೇರಣೆ: ಡಾ| ಜಾಧವ
ದಿ. ಗೋಪಾಲದೇವ ಜಾಧವ ಸಮಾಜ ಮುಖಿಯಾಗಿ ಕೆಲಸ ಮಾಡಿ ಎಲ್ಲರ ಮನಗೆದ್ದಿದ್ದರು
Team Udayavani, Jan 25, 2021, 3:51 PM IST
ಚಿಂಚೋಳಿ/ಕಾಳಗಿ: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವೆಯೇ ಉಸಿರಾಗಿಸಿಕೊಂಡಿದ್ದ ನಮ್ಮ ತಂದೆ ದಿ. ಗೋಪಾಲದೇವ ಜಾಧವ ನನ್ನ ರಾಜಕೀಯ
ಜೀವನಕ್ಕೆ ದಾರಿ ದೀಪ ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು. ಕಾಳಗಿ ತಾಲೂಕಿನ ಭೆಡಸೂರ (ಕೆ) ತಾಂಡಾದಲ್ಲಿ ಗೋಪಾಲದೇವ ಜಾಧವ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಿ. ಗೋಪಾಲದೇವ ಜಾಧವ ಅವರ 37ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಈ ಭಾಗದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನನ್ನ ತಂದೆ ಸೇವೆ ಅಮೋಘವಾಗಿದೆ. ರಾಜಕೀಯ ಹಾಗೂ ಸಾರ್ವಜನಿಕ ಜೀವನಕ್ಕೆ ನನ್ನ ತಂದೆಯೇ ಪ್ರೇರಣೆಯಾಗಿದ್ದಾರೆ. ತಂದೆ ದಿ. ಗೋಪಾಲದೇವ ಜಾಧವ, ನನ್ನ ಅಣ್ಣ ದಿ. ನರಸಿಂಗ್ ಜಾಧವ ಹಾಕಿಕೊಟ್ಟ ಹಾದಿಯಲ್ಲೇ ಜನ ಸೇವೆ ಮಾಡುತ್ತಿದ್ದೇನೆ.
ಅಲ್ಲದೇ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕ್ಕಿದ್ದೇನೆ ಎಂದು ಹೇಳಿದರು. ದಿ. ಕೆ.ಟಿ.ರಾಠೊಡ ಅವರು 1978ರಲ್ಲಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದಾಗ ಲಂಬಾಣಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿದ್ದರಿಂದ ನಾವಿಂದು ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಆಗುತ್ತಿದ್ದೇವೆ ಎಂದರು. ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಮಹಾ ಸ್ವಾಮೀಜಿ ಮಾತನಾಡಿ, ನಾವು ಯಾರ ಹೊಟ್ಟೆಯಲ್ಲಿ ಹುಟ್ಟುತ್ತೇವೆ ಎನ್ನುವುದು
ಯಾರಿಗೂ ಗೊತ್ತಿಲ್ಲ. ಭೂಮಿ ಮೇಲೆ ಜನಿಸಿದ ಪ್ರತಿಯೊಂದು ಜೀವಿಗೂ ಸಾವು ತಪ್ಪಿದ್ದಲ್ಲ. ಆದರೆ ದೇವರು ಬದುಕನ್ನು ನಮ್ಮ ಕೈಯಲ್ಲಿ ಕೊಟ್ಟಿದ್ದಾನೆ. ಅದನ್ನು ಸುಂದರವಾಗಿಸೋಣ ಎಂದರು.
ಸೂಗುರ ಮಠದ ಚೆನ್ನರುದ್ರಮುನಿ ಶಿವಾಚಾರ್ಯರು ಮಾತನಾಡಿ, ದಿ. ಗೋಪಾಲದೇವ ಜಾಧವ ಸಮಾಜ ಮುಖಿಯಾಗಿ ಕೆಲಸ ಮಾಡಿ ಎಲ್ಲರ ಮನಗೆದ್ದಿದ್ದರು
ಎಂದರು. ಕಬ್ಬಣಗುತ್ತಿಯ ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಸೂಗುರನ ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು, ರಟಕಲ್ನ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಚಂದನಕೇರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ಚಿಟಗುಪ್ಪ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಆಲ್ ಇಂಡಿಯಾ ಬಂಜಾರಾ
ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ಜಾಧವ, ಶಾಸಕ ಡಾ| ಅವಿನಾಶ ಜಾಧವ, ಜಿ.ಪಂ ಸದಸ್ಯರಾದ ಸಂಜೀವನ ಯಾಕಾಪುರ, ಗೌತಮ ಪಾಟೀಲ, ಬಿಜೆಪಿ
ಮಂಡಲ ಚಿಂಚೋಳಿ ಅಧ್ಯಕ್ಷ ಸಂತೋಷ ಗಡಂತಿ, ಸತೀಶ ರೆಡ್ಡಿ, ಅಜೀತ ಪಾಟೀಲ, ಬಿಜೆಪಿ ಜಿಲ್ಲಾ ಗ್ರಾಮಾಂತರ ಹಿಂದುಳಿದ ಮೋರ್ಚಾ ಕೋಶಾಧ್ಯಕ್ಷ
ರಾಜಕುಮಾರ ರಾಜಾಪುರ, ಮುಖಂಡರಾದ ಶೇಖರ ಪಾಟೀಲ, ಜಗದೀಶಸಿಂಗ್ ಠಾಕೂರ, ಅರುಣ ಪವಾರ, ಹಣಮಂತರೆಡ್ಡಿ, ಸಂತೋಷ ಕೊಂಡಾ, ಅನಸೂಜಮ್ಮ, ರಮೇಶ ಕಿಟ್ಟದ, ಪ್ರಶಾಂತ ಕದಂ, ಸಂತೋಷ ಪಾಟೀಲ ಮಂಗಲಗಿ, ನಾಮದೇವ ರಾಠೊಡ, ಸುಂದರ ಸಾಗರ, ರಮೆಶ ದುತ್ತರಗಿ, ಮಹೇಂದ್ರ ಪೂಜಾರಿ, ನಾಗರಾಜ ಪಾಟೀಲ, ಸುನೀಲ ರಾಜಾಪುರ ಇದ್ದರು. ಪ್ರೇಮಸಿಂಗ್ ರಾಠೊಡ ನಿರೂಪಿಸಿದರು.