ಹುಣಸೂರು: ಭಾರೀ ಗಾಳಿಗೆ ಬಾಳೆ ನಾಶ; ಅಪಾರ ನಷ್ಟ; ಜೋಳ ಕಟಾವಿಗೂ ತೊಂದರೆ
Team Udayavani, Sep 21, 2020, 7:59 PM IST
ಹುಣಸೂರು: ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಭಾರೀ ಬಿರುಗಾಳಿಗೆ ಪಸಲಿನ ಬಾಳೆ ಹಾಗೂ ಮರಗಿಡಗಳು ಮುರಿದು ಬಿದ್ದಿವೆ.
ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಜಡಿಮಳೆಗೆ ಹಾಗೂ ಬಿರುಗಾಳಿಗೆ ಹಿಂಡಗೂಡ್ಲ ಗ್ರಾಮದ ಮಾವಳಿ ಗೌಡ ಅವರಿಗೆ ಸೇರಿದ ಎರಡು ಎಕರೆ ಗೊನೆ ಬಿಟ್ಟಿದ್ದ ಬಾಳೆ ಗಿಡಗಳು ಮುರಿದುಬಿದ್ದಿವೆ ಇದರಿಂದ ಸಾವಿರಾರು ನಷ್ಟ ಸಂಭವಿಸಿದೆ.
ಹನಗೋಡು ಅಕ್ಕ-ಪಕ್ಕ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಗಿಡ ಮರಗಳು ಮುರಿದು ಬಿದ್ದಿವೆ. ಮತ್ತು ಹೋಬಳಿಯಾದ್ಯಂತ ಅತಿ ಹೆಚ್ಚು ಜೋಳ ಬೆಳೆಯುತ್ತಿದ್ದು ಜೋಳವು ಕಟಾವಿಗೆ ಬಂದಿದ್ದು ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಜೋಳವನ್ನು ಕಟಾವು ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ.
ನಾಗರಹೊಳೆ ಉದ್ಯಾನವನದಂಚಿನ ಕೊಡಗಿನ ಇರ್ಪು ಫಾಲ್ಸ್ ಸುತ್ತಮುತ್ತಲಿನಲ್ಲೂ ಬಾರೀ ಮಳೆಯಾಗುತ್ತಿದ್ದು. ಲಕ್ಷ್ಮಣತೀರ್ಥನದಿಯಲ್ಲಿ ಒಳ ಹರಿವು ಹೆಚ್ಚುತ್ತಲೇ ಇದ್ದು. ಹನಗೋಡು ಕಟ್ಟೆ ಮೇಲೆ 2 ಸಾವಿರ ಕ್ಯೂಸೆಕ್ಸ್ ನಷ್ಟು ನೀರು ಹರಿಯುತ್ತಿದೆ.