ತಿ.ನರಸೀಪುರದಲ್ಲಿ ಮುಖ್ಯಪೇದೆಗೆ ಸೋಂಕು
Team Udayavani, Jun 30, 2020, 5:43 AM IST
ತಿ.ನರಸೀಪುರ: ತಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರಿಗೆ ಸೋಮವಾರ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದ್ದು ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 58 ವರ್ಷ ವಯಸ್ಸಿನ ಮುಖ್ಯಪೇದೆಗೆ ಪಾಸಿಟಿವ್ ದೃಢಪಟ್ಟಿದ್ದು, ಆತನ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ. ಪೊಲೀಸ್ ಠಾಣೆ 3 ದಿನದ ಮಟ್ಟಿಗೆ ಸೀಲ್ಡೌನ್ ಮಾಡಿದ್ದಾರೆ.
ಪೋಲೀಸ್ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ತಲಕಾಡು ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪುರಸಭಾ ಮುಖ್ಯಾಧಿಕಾರಿ ಆರ್. ಅಶೋಕ್ ಸೂಚನೆ ಮೇರೆಗೆ ಪೋಲಿಸ್ ಠಾಣೆ ಸ್ಯಾನಿಟೈಸ್ ಮಾಡಲಾಗಿದೆ. ಸೋಂಕಿತ ಪೇದೆ ನಿನ್ನೆಯಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಿನ್ನೆಲೆಯಲ್ಲಿ ವಿದ್ಯೋದಯ ಕಾಲೇಜು ವೃತ್ತವನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದ್ದಾರೆ.
ಮಧ್ಯಾಹ್ನದ ಬಳಿಕ ವ್ಯಾಪಾರ ಸ್ಥಗಿತ: ತಾಲೂಕಿನಲ್ಲಿ ಕೋವಿಡ್ 19 ಸೋಂಕು ತಡೆಗಟ್ಟಲು ಸ್ವಯಂ ಪ್ರೇರಿತರಾಗಿ ವರ್ತಕರೇ ಮಧ್ಯಾಹ್ನದ ಬಳಿಕ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲು ತೀರ್ಮಾನಿಸಿದರು. ಪಟ್ಟಣದ ವಾಸವಿ ಮಹಲ್ನಲ್ಲಿ ವರ್ತಕರ ಸಭೆಯಲ್ಲಿ ವರ್ತಕರು ಮಾತನಾಡಿ, ತಾಲೂಕಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನ ನಿಯಂತ್ರಣಕ್ಕೆ ತರುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ.
ಈ ನಿಟ್ಟಿನಲ್ಲಿ ವರ್ತಕರ ಸಂಘದವರು ಜವಾಬ್ದಾರಿ ಅರಿತು ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ಬಳಿಕ ವ್ಯಾಪಾರ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದರು. ಸಭೆಯಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ರಂಗನಾಥ್, ಮುರಳಿ, ವಿಜಯ ಮಾರ್ಕೆಟ್ ಶಶಿಕಾಂತ್, ಗಣೇಶ್ ಗುಪ್ತ, ಭವರ್ ಲಾಲ್, ಲಲಿತ್, ದಿಲೀಪ್, ಮನೋಹರ ಲಾಲ್ ಮತ್ತಿತರರಿದ್ದರು.