ಅಂತಿಮ ಪಟ್ಟಿ ಪ್ರಕಟವಾಗುವ ಮುನ್ನವೇ ಸಂದರ್ಶನಕ್ಕೆ ಆಹ್ವಾನ
Team Udayavani, Jun 16, 2020, 5:40 AM IST
ಮೈಸೂರು: ಮೈಮುಲ್ ಅಕ್ರಮ ನೇಮಕಾತಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗುವ ಮುನ್ನವೇ ಸಂದರ್ಶನಕ್ಕೆ ಆಹ್ವಾನ ನೀಡಿ ಮೈಮುಲ್ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ ಎಂದು ಶಾಸಕ ಸಾ. ರಾ.ಮಹೇಶ್ ಆರೋಪಿಸಿದರು.
ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಬೇಡಿ ಎಂದು ಹೈಕೋರ್ಟ್ ಆದೇಶ ನೀಡಿದ್ದರೂ ಸಂದರ್ಶನ ನಡೆಸುವ ಅಗತ್ಯವೇನಿದೆ. ಈ ಕಾರಣಕ್ಕಾಗಿಯೇ ನಾನು ಅಕ್ರಮದ ಬಗ್ಗೆ ಆರೋಪ ಮಾಡುತ್ತಿದ್ದೇನೆ. ಮೈಮುಲ್ನ ವಿವಿಧ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಪಾರದರ್ಶಕತೆ ಇಲ್ಲ. ಸ್ವಜನ ಪಕ್ಷಪಾತ ನಡೆದಿರುವುದು ಖಚಿತವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಾಕಿ ಹಣ ವಸೂಲಿ: ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಕೆಲ ಅಭ್ಯರ್ಥಿಗಳು ಅರ್ಧ ಹಣ ನೀಡಿರುವುದು ಗೊತ್ತಾಗಿದೆ. ಬಾಕಿ ಹಣವನ್ನು ವಸೂಲಿ ಮಾಡಿಕೊಳ್ಳುವ ಸಲುವಾಗಿ ಸಂದರ್ಶನ ನಡೆಸಲಾಗುತ್ತಿದೆ.
ಮೈಮುಲ್ ನೇಮಕಾತಿ ವಿಚಾರದಲ್ಲಿ ಹೈಕೋರ್ಟ್ನಲ್ಲಿ ಮತ್ತೂಂದು ರಿಟ್ ಅರ್ಜಿ ಸಲ್ಲಿಕೆ ಆಗಲಿದೆ. ನಮ್ಮ ಹೋರಾಟ ನಿರಂತರ ವಾಗಿ ನಡೆಯುತ್ತದೆ ಎಂದರು.
ತೆರಿಗೆ ವಿನಾಯಿತಿ: ಲಾಕ್ಡೌನ್ನಿಂದ ಕಲ್ಯಾಣ ಮಂಟಪಗಳಿಗೆ ತೊಂದರೆ ಉಂಟಾ ಗಿದೆ. ನಗರಪಾಲಿಕೆ ಮತ್ತು ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಕಲ್ಯಾಣ ಮಂಟಪಗಳಿಗೆ 4 ತಿಂಗಳ ತೆರಿಗೆ ವಿನಾಯಿತಿ ನೀಡಬೇಕು. ಕೆಪಿಟಿಸಿಎಲ್ ವತಿಯಂದ ಪ್ರತಿ ಕಲ್ಯಾಣ ಮಂಟಪಗಳಿಗೂ ಪ್ರತಿ ತಿಂಗಳು 50 ರಿಂದ 75 ಸಾವಿರ ಮುಂಗಡ ಠೇವಣಿ ಕಟ್ಟಿಸಿಕೊಳ್ಳುತ್ತಾರೆ. ಇದರಿಂದಲೂ ಸರ್ಕಾರ ವಿನಾಯಿತಿ ನೀಡಬೇಕು.
ಈ ಸಂಬಂಧ ಮುಖ್ಯಮಂತ್ರಿ, ಕಂದಾಯ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ. ರಾಜ್ಯ ಸರ್ಕಾರ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಕಲ್ಯಾಣ ಮಂಟಪಗಳಿಗೆ ನೀಡಿರುವ ಮುಂಗಡ ಹಣ ಹಿಂತಿರುಗಿಸುವ ಸೂಚನೆಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಮೈಮುಲ್ ನಿರ್ದೇಶಕ ಸೋಮ ಶೇಖರ್, ಜೆಡಿಎಸ್ ನಗರಾಧ್ಯಕ್ಷ ಚಲುವೆಗೌಡ, ಕಾರ್ಯದರ್ಶಿ ಪ್ರಕಾಶ್, ಪ್ರಿಯದರ್ಶಿನಿ ಇದ್ದರು.