ವಿದ್ಯುತ್ ಕಾಯ್ದೆ ತಿದ್ದುಪಡಿಗೆ ವಿರೋಧ
Team Udayavani, Jun 2, 2020, 5:58 AM IST
ಮೈಸೂರು: ವಿದ್ಯುತ್ ಕಾಯ್ದೆ 2020 ಅನ್ವಯ ವಿದ್ಯುತ್ ಕ್ಷೇತ್ರದ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮ ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು. ನಗರದ ಎಂಪಿಎಲ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
ಕೂಡಲೇ ಈ ಕಾಯ್ದೆ ತಿದ್ದುಪಡಿ ಕೈಬಿಡಬೇಕು. ಖಾಸಗೀಕರಣದಿಂದ ನಮಗೆ ಹಾಗೂ ಸರ್ಕಾರಕ್ಕೆ ತೊಂದರೆಯಾಗಲಿದೆ. ಇದರಿಂದ ಎಲ್ಲಾ ರೈತರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ತೀರ್ಮಾನ ಕೈಬಿಡುವಂತೆ ನೌಕರರು ಒತ್ತಾಯಿಸಿದರು. ಸೆಸ್ಕ್ ಎಂಡಿ ಮುನಿಗೋಪಾಲರಾಜು ಮಾತನಾಡಿ, ವಿದ್ಯುತ್ ತಿದ್ದುಪಡಿ ಕಾಯ್ದೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
ವಿದ್ಯುತ್ ವಿತರಣಾ ಜಾಲ ಸಂಪೂರ್ಣವಾಗಿ ಖಾಸಗಿ ವ್ಯಾಪ್ತಿಗೆ ಬರುತ್ತದೆ. ಇದರಿಂದ ಎಲ್ಲಾ ಕೆಇಬಿ ಎಂಜಿನಿಯರುಗಳು ಮತ್ತು ಇತರೆ ನೌಕರರು ಖಾಸಗಿ ಕಂಪನಿಗಳ ನೀತಿಗೆ ಒಳಗಾಗಬೇಕಾಗುತ್ತದೆ. ಇದರಿಂದ ನೌಕರರಿಗೂ ತುಂಬಾ ಅನಾನುಕೂಲವಾಗಲಿದೆ ಎಂದರು. ವಿದ್ಯುತ್ ತಿದ್ದುಪಡಿ ಕಾಯ್ದೆಯಿಂದ ರೈತರು ಮತ್ತು ಬಡವರಿಗೆ ಹೆಚ್ಚು ತೊಂದರೆಯಾಗಲಿದೆ.
ತಿದ್ದುಪಡಿಯಿಂದ ಭಾಗ್ಯಜ್ಯೋತಿ ಫಲಾನುಭವಿಗಳು, ಕೃಷಿ ಪಂಪ್ ಸೆಟ್ ಗ ಳಿಗೆ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ. ಇವೆಲ್ಲಾ ಯೋಚಿಸಿ ವಿದ್ಯುತ್ ತಿದ್ದುಪಡಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.