Accident: ನಿಂತಿದ್ದ ಲಾರಿಗೆ ಕಾರು ಢಿಕ್ಕಿ; ಓರ್ವ ಸಾವು
Team Udayavani, Dec 21, 2023, 11:53 PM IST
ಕುಂದಾಪುರ: ಕೋಟೇಶ್ವರದ ಪೆಟ್ರೋಲ್ ಬಂಕ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ, ಕಾರಿನಲ್ಲಿದ್ದ ಒಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಗುರುವಾರ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಸಂಭವಿಸಿದೆ.
ಅಪಘಾತದಲ್ಲಿ ಉದ್ಯಾವರದ ಸಂಪಿಗೆನಗರ ನಿವಾಸಿ ರೋಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ, ಉದ್ಯಾವರ ವೈಸಿಎಂ ಅಧ್ಯಕ್ಷ ಜೋಯಿಸ್ಟನ್ ಕ್ಯಾಸ್ಟಲಿನೋ (21) ಸಾವನ್ನಪ್ಪಿದವರು. ಜೋಯಿಸ್ಟನ್ ಕಾರು ಚಲಾಯಿಸುತ್ತಿದ್ದರು. ಇನ್ನು ಕಾರಿನಲ್ಲಿದ್ದ ಕುತ್ಪಾಡಿ ಗ್ರಾಮದ ಲೆಸ್ಟರ್ ಪಿಂಟೋ (22), ಕೊರಂಗ್ರಪಾಡಿ ಗ್ರಾಮದ ಜಸ್ಟಿನ್ ಕರ್ಡೊಜ (22), ಉದ್ಯಾವರ ಗ್ರಾಮದ ಗ್ಲಾಡ್ಸನ್ ಡಿಸಿಲ್ವಾ (23), ವಿಲ್ಸನ್ ಮಾರ್ಟಿನ್ (21) ಗಾಯಗೊಂಡಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.ಇವರೆಲ್ಲ ಉದ್ಯಾವರದ ವೈಸಿಎಂ ಘಟಕದ ಸದಸ್ಯರೆಂದು ತಿಳಿದುಬಂದಿದೆ. ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ.
ಮುಂಜಾಗ್ರತೆ ವಹಿಸಿಲ್ಲ
ಲಾರಿಯನ್ನು ಚಾಲಕ ರಾಜೇಶ್ ಅವರು ಪಾರ್ಕಿಂಗ್ ಲೈಟ್ ಹಾಕದೇ, ಯಾವುದೇ ಬ್ಯಾರಿಕೇಡ್ ಇಡದೇ, ಅಪಘಾತ ತಡೆಯುವಂತಹ ಸಲಕರಣೆ ಗಳನ್ನು ಇರಿಸದೇ ಪೆಟ್ರೋಲ್ ಬಂಕ್ ಎದುರಿನ ಹೆದ್ದಾರಿಯಲ್ಲಿ ನಿಲ್ಲಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.