ಕೆಂಪೇಗೌಡರ ಅಧ್ಯಯನಕ್ಕೆ ಪೀಠ ರದ್ದು :ಹೋರಾಟಕ್ಕೆ ತೀರ್ಮಾನ ಡಿಕೆಶಿ
Team Udayavani, Dec 4, 2019, 10:50 PM IST
ಬೆಂಗಳೂರು: ನಾಡ ಪ್ರಭು ಕೆಂಪೇಗೌಡರ ಹೆಸರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಆಧ್ಯಯನ ಪೀಠ ಮಾಡಲು ನಿರ್ಧರಿಸಿದ್ದ ಹಿಂದಿನ ಸಿದ್ದರಾಮಯ್ಯ ಸರ್ಕಾರದ ತೀರ್ಮಾನವನ್ನು ಹಣಕಾಸಿನ ಸಮಸ್ಯೆಯ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಟೆಂಡರ್ ರದ್ದು ಪಡಿಸಿದ್ದು, ರಾಜ್ಯ ಸರ್ಕಾರ ಕೆಂಪೇಗೌಡರು ಹಾಗೂ ಅವರ ಅಭಿಮಾನಿಗಳಿಗೆ ಅವಮಾನ ಮಾಡಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ನಾಡಪ್ರಭು ಕೆಂಪೇಗೌಡರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ, ಅವರ ಜೀವನ ಸಾಧನೆಯನ್ನು ಸಾರಲು ಬೆಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ತೀರ್ಮಾನಿಸಿ ಗುದ್ದಲಿ ಪೂಜೆಯನ್ನು ಮಾಡಲಾಗಿತ್ತು. ಈ ಯೋಜನೆಗೆ ಬಿಬಿಎಂಪಿ ಹಣ ಕೊಡಲು ಮುಂದಾಗಿದ್ದರೂ ರಾಜ್ಯ ಸರ್ಕಾರ ಹಣಕಾಸಿನ ಕೊರತೆಯ ನೆಪ ಹೇಳಿ ಟೆಂಡರ್ ರದ್ದುಗೊಳಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ಕೆಂಪೇಗೌಡರ ಬುಡಕ್ಕೆ ಕೈ ಹಾಕಿದಂತಿದೆ. ಈ ನಿರ್ಧಾರದ ಹಿಂದೆ ಯಾವುದೇ ವ್ಯಕ್ತಿಯ ಕೈವಾಡದ ಬಗ್ಗೆ ಆರೋಪ ಮಾಡುವುದಿಲ್ಲ. ಇಡೀ ಸರ್ಕಾರವೇ ಇದರ ಹೊಣೆಯಾಗುತ್ತದೆ.
ರಾಜ್ಯ ಸರ್ಕಾರದ ಈ ನಿರ್ಧಾರ ಕೆಂಪೇಗೌಡರ ಅಭಿಮಾನಿಗಳಿಗೆ ಅವಮಾನ ಮಾಡಿದಂತಾಗಿದ್ದು, ಇದರ ವಿರುದ್ದ ಹೋರಾಟ ಮಾಡಲು ಚಿಂತನೆ ನಡೆಸಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಹಿಂದಿನ ಸರ್ಕಾರದ ಯಾವ ಯೋಜನೆಗಳ ಟೆಂಡರ್ಗಳನ್ನು ರದ್ದು ಮಾಡಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ನ ಎಲ್ಲ ಶಾಸಕರಿಗೆ ಪತ್ರ ಬರೆದು ಮಾಹಿತಿ ಕೇಳಿದ್ದು, ಅವರಿಂದ ಮಾಹಿತಿ ಬಂದ ನಂತರ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಇದೇ ವೇಳೆ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಪ್ರಸ್ತಾಪದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಚುನಾವಣೆಯಲ್ಲಿ ಎಲ್ಲ ನಾಯಕರೂ ನಮಗೆ ವಹಿಸಿದ್ದ ಜವಾಬ್ದಾರಿಯನ್ನು ನಿಭಾಯಿಸಿದ್ದೇವೆ ಎಂದು ಹೇಳಿದರು.