ಅನುದಾನ ಹಂಚಿಕೆ: ಈಗ ಕೇಂದ್ರದ ವಿರುದ್ಧ ಕೇರಳ ಸರ್ಕಾರ, ತ.ನಾಡು ಪ್ರತಿಭಟನೆ
ಕರ್ನಾಟಕದ ಬಳಿಕ ದಕ್ಷಿಣದ ಇನ್ನೆರಡು ರಾಜ್ಯಗಳು ಕಣಕ್ಕೆ-ಹೋರಾಟಕ್ಕೆ ಪಂಜಾಬ್, ದೆಹಲಿ ಸರ್ಕಾರಗಳ ಬೆಂಬಲ
Team Udayavani, Feb 8, 2024, 9:52 PM IST
ನವದೆಹಲಿ: ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ, ಗುರುವಾರ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಪ್ರತಿಭಟನೆ ನಡೆಸಿದವು. ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಸರ್ಕಾರ ಪ್ರತಿಭಟನೆ ನಡೆಸಿದ ಬೆನ್ನಲ್ಲೇ; ಗುರುವಾರ ಈ ಬೆಳವಣಿಗೆ ನಡೆದಿದೆ.
ಕೇರಳ ಎಡಪಕ್ಷಗಳ ಒಕ್ಕೂಟದ ನೇತೃತ್ವ ವಹಿಸಿ ಸಿಎಂ ಪಿಣರಾಯಿ ವಿಜಯನ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾಗವಹಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಎಡಪಕ್ಷಗಳ ಸಚಿವರು, ಸಂಸದರು, ಶಾಸಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜಂತರ್ ಮಂತರ್ನಲ್ಲಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯನ್, ಕೇಂದ್ರಸರ್ಕಾರವು ರಾಜ್ಯ ಸರ್ಕಾರದ ಅಭಿಪ್ರಾಯಗಳನ್ನು ಕೇಳದೆಯೇ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈ ಮೂಲಕ ದಕ್ಷಿಣದ ರಾಜ್ಯಗಳನ್ನು ಹಿಂದೆಂದೂ ಕಂಡಿರದಂತಹ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರಸರ್ಕಾರದ ಅನ್ಯಾಯವನ್ನು ಪ್ರಶ್ನಿಸುತ್ತಿರುವ ರಾಜ್ಯಗಳಿಗೆ ಬೆಂಬಲ ನೀಡುತ್ತಿರುವ ಎಲ್ಲ ವಿಪಕ್ಷಗಳ ನಾಯಕರಿಗೂ ವಿಜಯನ್ ಧನ್ಯವಾದ ತಿಳಿಸಿದ್ದಾರೆ.