ಸಿದ್ದರಾಮಯ್ಯ ಆನೆ ಇದ್ದಂತೆ: ಎಸ್.ಟಿ.ಸೋಮಶೇಖರ್
Team Udayavani, May 14, 2019, 3:06 AM IST
ಬೆಂಗಳೂರು: “ಮಾಜಿ ಸಿಎಂ ಸಿದ್ದರಾಮಯ್ಯ ಆನೆ ಇದ್ದ ಹಾಗೆ. ಆನೆ ನಡೆದುಕೊಂಡು ಹೋಗುವಾಗ ನಾಯಿಗಳೆಲ್ಲ ಬೊಗಳುತ್ತಿರುತ್ತವೆ. ಹಾಗಂತ ಆನೆ ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ’ ಎಂದು ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸಿದ್ದರಾಮಯ್ಯ ಆನೆ ಥರ. ಹೊಗಳಿಕೆಗೆ ಅವರು ಹಿಗ್ಗುವುದಿಲ್ಲ. ಕುಗ್ಗುವುದೂ ಇಲ್ಲ. ಕುಪೇಂದ್ರ ರೆಡ್ಡಿ ಯಾರು ? ಅವರು ಎಂಪಿ ಇರಬಹುದು. ಆದರೆ, ಕುಪೇಂದ್ರ ರೆಡ್ಡಿ ಸಮ್ಮಿಶ್ರ ಸರ್ಕಾರ ಮಾಡಿದ್ದಾರಾ? ರಾಹುಲ್ ಗಾಂಧಿ, ದೇವೇಗೌಡರು ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ದಾರೆ. ಇದಕ್ಕೆಲ್ಲ ಮಾತನಾಡಲು ಕುಪೇಂದ್ರ ರೆಡ್ಡಿ ಯಾರು? ಕುಪೇಂದ್ರ ರೆಡ್ಡಿಗೆ ದೇವೇಗೌಡರು ಜಿಪಿಎ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ವಾಗ್ಧಾಳಿ ನಡೆಸಿದ ಸೋಮಶೇಖರ್, ನಮ್ಮನ್ನು ಚಮಚಾಗಳು ಎನ್ನುವ ವಿಶ್ವನಾಥ್ ಮಟ್ಟದಲ್ಲಿ ನಾವಿಲ್ಲ. ಅವರು ಜೆಡಿಎಸ್ ರಾಜ್ಯಾಧ್ಯಕ್ಷರು ನಾವು ಅವರ ಮಟ್ಟಕ್ಕೆ ಇಲ್ಲ. ನಾವು ಸಣ್ಣ ಪುಟ್ಟ ಕ್ಷೇತ್ರಗಳ ಶಾಸಕರು ಎಂದು ವ್ಯಂಗ್ಯವಾಡಿದ್ದಾರೆ.
21 ಸಮಾನ ಮನಸ್ಕರ ಸಭೆ: ಮೇ 21 ರಂದು ಸಮಾನ ಮನಸ್ಕರ ಸಭೆ ಕರೆಯುವ ಚಿಂತನೆ ಇದೆ. ಈ ಬಗ್ಗೆ ಇನ್ನೂ ಯಾರ ಬಳಿಯೂ ಮಾತನಾಡಿಲ್ಲ. ಹತ್ತು ಹನ್ನೆರಡು ಶಾಸಕರು ಸೇರಿ ಚರ್ಚೆ ನಡೆಸುತ್ತೇವೆ. ನಾವು ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕಿದೆ. ಕೆಲವು ಶಾಸಕರು ಉಪ ಚುನಾವಣೆಯಲ್ಲಿ ಸಕ್ರೀಯರಾಗಿದ್ದಾರೆ.ಸಭೆಯ ಬಗ್ಗೆ 17 ರ ನಂತರ ತೀರ್ಮಾನ ಮಾಡುತ್ತೇವೆ ಎಂದರು.