Bangalore: ಬೆಂಗಳೂರಿನಲ್ಲಿ ಆಸೀಸ್ ದೂತಾವಾಸ ಕಚೇರಿ: ಜೈಶಂಕರ್
ಭಾರತ-ಆಸ್ಟ್ರೇಲಿಯಾ 2+2 ಮಾತುಕತೆ ವೇಳೆ ಚರ್ಚೆ
Team Udayavani, Nov 21, 2023, 9:09 PM IST
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ಆರ್ಥಿಕ, ಭದ್ರತಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರ ಹೊಂದಲು ತೀರ್ಮಾನಿಸಿದ್ದು, ಮಂಗಳವಾರ ನಡೆದ ಎರಡೂ ದೇಶಗಳ ವಿದೇಶಾಂಗ ಮತ್ತು ರಕ್ಷಣಾ ಸಚಿವರ 2+2 ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆದಿದೆ.
ವಿಶೇಷವಾಗಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ದೂತಾವಾಸ, ಬ್ರಿಸ್ಬೇನ್ನಲ್ಲಿ ಭಾರತದ ದೂತಾವಾಸ, ಎರಡು ದೇಶಗಳ ಪ್ರಮುಖ ನಗರಗಳ ನಡುವೆ ನೇರ ವಿಮಾನಯಾನ, ಭಾರತದಲ್ಲಿ ಆಸೀಸ್ನ ಮೊದಲ ವಿವಿಯ ಕ್ಯಾಂಪಸ್ ಆರಂಭದ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಪ್ರಧಾನಿ ಮೋದಿ ಆಸೀಸ್ ಪ್ರವಾಸ ಕೈಗೊಂಡಿದ್ದ ವೇಳೆಯೂ ಈ ಕುರಿತು ಚರ್ಚೆ ನಡೆಸಲಾಗಿತ್ತು.
ಇನ್ನು, ಇಸ್ರೇಲ್ ಮತ್ತು ಹಮಾಸ್ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಜೈಶಂಕರ್, ಅ.7ರಂದು ಇಸ್ರೇಲ್ ಮೇಲೆ ನಡೆದ ದಾಳಿ ಖಂಡನೀಯ. ಆದರೆ, ನಂತರದ ದಿನಗಳಲ್ಲಿ ಗಾಜಾ ಪಟ್ಟಿಯಲ್ಲಿ ನಾಗರಿಕರ ಸಾವು ಒಪ್ಪುವ ವಿಚಾರವಲ್ಲ. ಕ್ವಾಡ್ ರಾಷ್ಟ್ರಗಳ ಮೈತ್ರಿಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಒಕ್ಕೂಟ ಇತ್ತೀಚಿನ ವರ್ಷಗಳಲ್ಲಿ ಬಹಳ ಪ್ರಗತಿ ಸಾಧಿಸಿದೆ ಎಂದರು. ಆಸೀಸ್ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಮಾತನಾಡಿ ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಆರ್ಥಿಕ ಸಹಕಾರ ವೃದ್ಧಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.