Ayodhya: ಶ್ರೀರಾಮ ಅಪ್ಪಟ ಪ್ರಜಾಪ್ರಭುತ್ವವಾದಿ
ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಶ್ರೀ ಕಾಡಸಿದ್ದೇಶ್ವರ ಮಠ, ಕನೇರಿ-ಕೊಲ್ಲಾಪುರ (ಮಹಾರಾಷ್ಟ್ರ) ಅವರ ವಿಶೇಷ ಅಂಕಣ
Team Udayavani, Jan 11, 2024, 7:52 AM IST
ಶ್ರೀರಾಮ ಯಾವುದೇ ದೃಷ್ಟಿಯಿಂದ ನೋಡಿದರು ಈ ದೇಶಕ್ಕೆ ಆರಾಧ್ಯ ಹಾಗೂ ಆದರ್ಶ ಪುರುಷನಾಗಿ ಗೋಚರಿಸುತ್ತಾನೆ. ಶ್ರೀರಾಮ ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದ. ಆತನ ಆಳ್ವಿಕೆ ಏನಾಗಿತ್ತು ಎಂಬುದ ಸ್ಪಷ್ಟ ಪರಿಕಲ್ಪನೆ ಇಲ್ಲದೆಯೇ ಏನೇನೋ ಚಿಂತನೆಗಳಡಿ ವ್ಯಾಖ್ಯಾನಿಸಲಾಗಿದೆ. ರಾಮ ರಾಜ್ಯವೆಂದರೆ ಸಮಾಜದ ಕಟ್ಟಕಡೆಯ ಶ್ರೀಸಾಮಾನ್ಯನ ಮಾತಿಗೂ ಸಮಾನ ಮೌಲ್ಯ ನೀಡುವ, ಸರ್ವ ಜನರು ಸುಖಮಯವಾಗಿ ಬದುಕಿನ ಅವಕಾಶದ ಆಳ್ವಿಕೆಯಾಗಿತ್ತು. ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಬೇಕು. ಅಂತಹ ಆದರ್ಶಗಳನ್ನು ಸ್ಮರಿಸಲು, ಮಹತ್ವದ ಚರಿತ್ರೆಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಲು ಶ್ರೀರಾಮ ಮಂದಿರ ನಿರ್ಮಾಣ ಅತ್ಯವಶ್ಯವಾಗಿತ್ತು.
ಶ್ರೀರಾಮ ಪರಿವಾರ, ರಾಜನೀತಿ, ಧರ್ಮಕ್ಷೇತ್ರ ಆದರ್ಶದ ಜತೆಗೆ ನಿಸರ್ಗ ಪ್ರೇಮಿಯೂ ಆಗಿದ್ದ. ಶ್ರೀರಾಮಚಂದ್ರ ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದರು. ಕೇವಲ ಬಹುಮತವಷ್ಟೇ ಅಲ್ಲದೆ, ಸರ್ವಾನುಮತದ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿದ್ದ. ಯಾವುದೇ ವಿಷಯವಾಗಲಿ ಅದು ಯಾರೊಬ್ಬರ ವಿರೋಧ ಇಲ್ಲದೆಯೇ ಸರ್ವಮತ ಹೊಂದಿರಬೇಕು ಎಂಬ ಚಿಂತನೆ ಹೊಂದಿದ್ದ. ಶ್ರೀರಾಮಚಂದ್ರನ ಪಟ್ಟಾಭಿಷೇಕದ ಘಟನೆಯನ್ನು ಅವಲೋಕಿಸಿದರೆ ಇದು ಸ್ಪಷ್ಟವಾಗಲಿದೆ. ಶ್ರೀರಾಮನ ಪಟ್ಟಾಭಿಷೇಕ ಸಂದರ್ಭದಲ್ಲಿ ಕೈಕೆಯೊಬ್ಬರನ್ನು ಬಿಟ್ಟರೆ ಬೇರಾರ ಆಕ್ಷೇಪ, ವಿರೋಧವೂ ಇರಲಿಲ್ಲ. ಒಬ್ಬರ ವಿರೋಧ ಇದೆ ಎಂಬುದಕ್ಕೂ ಬೆಲೆ ಕೊಟ್ಟದ್ದಷ್ಟೇ ಅಲ್ಲ, ತನ್ನ ತಂದೆ ಕೊಟ್ಟ ಮಾತನ್ನು ಅಕ್ಷರಶಃ ಪಾಲಿಸುತ್ತೇನೆ ಎಂದು ರಾಜನಾಗುವ ಅವಕಾಶವನ್ನು ತೊರೆದು ನಿಂತ ಆದರ್ಶವಾದಿ.
ರಾಜನಾಗುವುದು, ಪಟ್ಟಾಭಿಷೇಕ ಎಂಬುದು ಕೆಲವೇ ಕೆಲವರಿಗೆ ದೊರೆ ಯುವ ಸುವರ್ಣಾವಕಾಶ. ಅಂತಹ ಅವಕಾಶ ಒದಗಿ ಬಂದಾಗಲೂ ಶ್ರೀರಾಮ ಅಧಿಕಾರಕ್ಕೆ ಅಂಟಿಕೊಳ್ಳದೆ ಆದರ್ಶಕ್ಕೆ ಕಟ್ಟು ಬಿದ್ದ. ಬಲಿಷ್ಠ ಸಾಮ್ರಾಜ್ಯದ ರಾಜನಾಗಿ ಅರಮನೆಯಲ್ಲಿ ಬದುಕು ಕಳೆಯುವ ಬದಲು ತಂದೆಯ ಮಾತು ಪರಿಪಾಲನೆ ಹಾಗೂ ಪಟ್ಟಾಭಿಷೇಕಕ್ಕೆ ಕೇವಲ ಒಬ್ಬರಿಂದಲೂ ವಿರೋಧ ಬಂದಿ ದ್ದನ್ನು ಗಮನಿಸಿ ಪಟ್ಟಾಭಿಷೇಕವನ್ನು ತೊರೆದು ಕಷ್ಟ-ಕಾರ್ಪಣ್ಯದ ವನವಾಸಕ್ಕೆ ಮುಂದಾದ ಶ್ರೀರಾಮ ಮರ್ಯಾದಾ ಪುರುಷೋತ್ತಮನಲ್ಲದೆ ಮತ್ತಿನ್ನೇನು?
ಶ್ರೀರಾಮ ನಿಸರ್ಗ ಪ್ರೇಮಿಯೂ ಆಗಿದ್ದ. ಸೀತೆ, ಲಕ್ಷಣರೊಂದಿಗೆ ಶ್ರೀರಾಮ ವನವಾಸದಲ್ಲಿದ್ದಾಗ ವಿವಿಧ ಹಣ್ಣುಗಳನ್ನು ಬಲವಂತವಾಗಿ ಕೀಳುತ್ತಿದ್ದಿಲ್ಲ. ಪೂರ್ಣ ಹಣ್ಣಾಗಿ ಕೆಳಗೆ ಬಿದ್ದ ಹಣ್ಣುಗಳನ್ನು ಮಾತ್ರ ಆಯ್ದುಕೊಂಡು ಸೇವನೆ ಮಾಡುತ್ತಿದ್ದ. ಒಂದು ದಿನ ಲಕ್ಷ್ಮಣ ಹಣ್ಣುಗಳಿಲ್ಲದೆ ಬರಿಗೈಯಲ್ಲಿ ಬಂದಿದ್ದ. ಈ ದಿನ ಎಲ್ಲಿಯೂ ಹಣ್ಣು ಕೆಳಗೆ ಬಿದ್ದಿಲ್ಲ ಎಂದು ಲಕ್ಷ್ಮಣ ಹೇಳಿದ್ದನ್ನು ಕೇಳಿ ಅಂದು ಶ್ರೀರಾಮ ಹಣ್ಣು ಸೇವಿಸದೆ ಉಪವಾಸವಿದ್ದ ವಿನಃ ಹಣ್ಣಿನ ಗಿಡಗಳಿಂದ ಬಲವಂತವಾಗಿ ಹಣ್ಣು ಕಿತ್ತು ತಿನ್ನುವ ಕೆಲಸ ಮಾಡಿರಲಿಲ್ಲ.
ಶ್ರೀರಾಮ ತನ್ನ ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಹಿಂದಿರುಗಿ ಮತ್ತೆ ರಾಜಾಧಿಕಾರವನ್ನು ವಹಿಸಿಕೊಂಡ ಅನಂತರ ಅಗಸನೊಬ್ಬನು ಮಾತನಾಡಿದ ಮಾತು ಕೇಳಿ, ರಾಜ ಮನೆತನದ ಬಗ್ಗೆ ಇಂತಹ ಮಾತನಾಡಿದ್ದಾನೆಂದು ಸಿಟ್ಟಿಗೆದ್ದು ಆತನನ್ನು ಜೈಲಿಗೆ ಕಳುಹಿ ಸಲಿಲ್ಲ. ಅಂದರೆ ಅರಮನೆಯಲ್ಲಿ ದ್ದವರ ಮಾತು-ಆಕ್ಷೇಪಕ್ಕೆ ಎಷ್ಟು ಮೌಲ್ಯ-ಬೆಲೆ ಇದೆಯೋ ಸಮಾಜದ ಕಟ್ಟಕಡೆಯ ವ್ಯಕ್ತಿ ಯಾಡುವ ಮಾತು-ಆಕ್ಷೇಪಕ್ಕೂ ಅಷ್ಟೇ ಬೆಲೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ತನ್ನ ಆಳ್ವಿಕೆಯಲ್ಲಿ ಪ್ರತಿಯೊಬ್ಬರ ಮಾತಿಗೂ ಬೆಲೆ ಇದೆ ಎಂಬುದನ್ನು ಸಾಕ್ಷೀಕರಿಸಿದ್ದ.
ಶ್ರೀರಾಮ ಕರ್ತವ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದ. ಆ ಕರ್ತವ್ಯನಿಷ್ಠೆ ಪಾಲನೆ ಮಾಡದೆ ಇರುವ ಕಾರಣಕ್ಕೆ ಶಂಭೂಕನಿಗೆ ಶಿಕ್ಷೆಯನ್ನು ನೀಡಿದ್ದ. ಶಂಭೂಕ ವೃತ್ತಿಯಲ್ಲಿ ವೈದ್ಯನಾಗಿದ್ದ. ತರುಣನೊಬ್ಬ ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗೆಂದು ಬಂದಿದ್ದ. ಆ ವೇಳೆ ಶಂಭೂಕ ತಾನು ಪೂಜೆ, ಧಾನ್ಯದಲ್ಲಿದ್ದು ಚಿಕಿತ್ಸೆ ನೀಡಲಾಗದು ಎಂದಿದ್ದ. ಇದರಿಂದ ತರುಣ ಮೃತಪಟ್ಟಿದ್ದ. ವಿಷಯ ತಿಳಿದ ಶ್ರೀರಾಮ ಶಂಭೂಕನಿಗೆ ಮೃತ್ಯು ಶಿಕ್ಷೆ ನೀಡಿದ್ದ.
ರಾಮರಾಜ್ಯವೆಂದರೆ ಕೇವಲ ಮಾತಿಗೆ, ಭಕ್ತಿಗೆ ಹೇಳುವುದಲ್ಲ. ಶ್ರೀರಾಮನ ಆಳ್ವಿಕೆಯಲ್ಲಿ ಭಿಕ್ಷುಕರು ಇರಲಿಲ್ಲ. ಬೇಡುವವರ ಬದಲು ನೀಡುವವರೇ ಇದ್ದರು. ಕರ ಪಾವತಿಗೆ ಜನ ಸರದಿಯಲ್ಲಿ ನಿಂತು ಕರ ಪಾವತಿಸುತ್ತಿದ್ದರು ಎಂಬುದು ವಾಲ್ಮೀಕಿ ರಾಮಾಯಣದಲ್ಲಿ ನಮೂದಾಗಿದೆ. ಅಯೋಧ್ಯೆಯನ್ನು ಅತ್ಯಂತ ಆದರ್ಶ ನಗರವಾಗಿಸಿದ ಕೀರ್ತಿ ಶ್ರೀರಾಮನಿಗೆ ಸಲ್ಲುತ್ತದೆ. ಈ ಎಲ್ಲ ಕಾರಣಗಳಿಗೆ ಶ್ರೀರಾಮ ಹಿಂದೆ, ಇಂದು ಹಾಗೂ ಮುಂದೆಯೂ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗುತ್ತಾರೆ. ಮರ್ಯಾದಾ ಪುರುಷೋತ್ತಮರಾಗುತ್ತಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಏಕೆ ನಿರ್ಮಾಣ ಮಾಡಬೇಕು, ಅಲ್ಲಿ ಒಂದು ಉತ್ತಮ ಆಸ್ಪತ್ರೆ ನಿರ್ಮಾಣ ಮಾಡಿದರೆ ಸೂಕ್ತವಲ್ಲವೆ ಎಂಬುದು ಕೆಲವರ ವಾದವಾಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಎಂಬಂತೆ ಪ್ರತಿಯೊಂದಕ್ಕೂ ಅದರದ್ದೇಯಾದ ಶಾಸ್ತ್ರ ಇರುತ್ತದೆ. ಶ್ರೀರಾಮ ಮಂದಿರ ನಿರ್ಮಾಣ ಆದರ್ಶ ಪುರುಷೋತ್ತಮ ಕುರುಹು ರೂಪದಲ್ಲಿ. ಆತನ ಚಿಂತನೆ, ಆದರ್ಶಗಳ ಸದಾ ಸ್ಮರಣೆಗೆ, ನಮ್ಮ ಮುಂದಿನ ಪೀಳಿಗೆಗೆ ಅದು ದಾರಿದೀಪವಾಗುವುದಕ್ಕೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್