ಕೈಗೆ ಸಿಗದ ಬೆಳೆ, ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ರೈತ
Team Udayavani, Apr 28, 2022, 7:43 PM IST
ರಬಕವಿ-ಬನಹಟ್ಟಿ: ತಾಲ್ಲೂಕಿನ ಯರಗಟ್ಟಿ ಗ್ರಾಮದ ರೈತ ಮಹಾದೇವ ಮಾದರ(35) ಸಾಲಬಾಧೆ ತಾಳಲಾರದೆ ಗುರುವಾರ ಬೆಳಗ್ಗೆ ಗ್ರಾಮದ ತಮ್ಮ ಮನೆಯ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಾದೇವ ಮಾದರ ಯರಗಟ್ಟಿಯಲ್ಲಿ ಒಕ್ಕಲತನ ಮಾಡಿಕೊಂಡಿದ್ದು, ತನ್ನ ಹೆಸರಿನಲ್ಲಿ ಚಿಮ್ಮಡ ಗ್ರಾಮದ ಪಿಕೆಪಿಎಸ್ ಸೋಸೈಟಿಯಲ್ಲಿ 50 ಸಾವಿರ, ಹಾಗೂ ತನ್ನ ಹೆಂಡತಿ ಹೆಸರಿನಲ್ಲಿ ರಬಕವಿಯ ಜ್ಯೋತಿ ಕೋ-ಆಫ್ ಕ್ರೆಡಿಟ್ ಸೊಸೈಟಿಯಲ್ಲಿ 70 ಸಾವಿರ, ತನ್ನ ಚಿಕ್ಕಪ್ಪನಾದ ಗಂಗಪ್ಪ ತಾಯಿ. ಸತ್ಯವ್ವ ಮಾದರ ಇವರ ಹೆಸರಿನಲ್ಲಿ ಹೊಸೂರ ಗ್ರಾಮದ ಪಿಕೆಪಿಎಸ್ ಸೋಸೈಟಿಯಲ್ಲಿ 69 ಸಾವಿರ, ಹಾಗೂ ತನ್ನ ತಾಯಿ ಇಂದ್ರವ್ವ ಅವರ ತಾಯಿ ಸತ್ಯವ್ವ ಮಾದರ ಹೆಸರಿನಲ್ಲಿ ಹೊಸೂರ ಗ್ರಾಮದ ಸಹಕಾರಿ ಸಂಘದಲ್ಲಿ ೨೦ ಸಾವಿರ ಸೇರಿ ಒಟ್ಟು ೨ ಲಕ್ಷ ಒಂಬತ್ತು ಸಾವಿರ ಸಾಲವನ್ನು ಮಾಡಿದ್ದಾನೆ.
ತನ್ನ ಜಮೀನಿನಲ್ಲಿ ಬೆಳೆಯು ಸರಿಯಾಗಿ ಬಾರದೆ ಇದ್ದ ಕಾರಣ, ಈ ಸಾಲವನ್ನು ತೀರಿಸುವುದಾದರೂ ಹೇಗೆಂದು ಮಾನಸಿಕವಾಗಿ ನೊಂದು ಗುರುವಾರ ಬೆಳಗ್ಗೆ ತಮ್ಮ ಮನೆಯ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಇದನ್ನೂ ಓದಿ : ವರಿಷ್ಠರು ಸಮ್ಮತಿಸಿದರೆ ನಾಗಠಾಣಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ: ಜಿಗಜಿಣಗಿ
ಘಟನಾ ಸ್ಥಳಕ್ಕೆ ಸ್ಥಳೀಯ ಸಿಪಿಐ ಜೆ.ಕರುಣೇಶಗೌಡ, ಪಿಎಸ್ಐ ಸುರೇಶ ಮಂಟೂರ, ಕ್ರೈಂ ಪಿಎಸ್ಐ ಪುರದಂರ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಬನಹಟ್ಟಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗೊಂಡಿದೆ.