Bharat Jodo: ಭಾರತ್ ಜೋಡೋ ವರ್ಷಾಚರಣೆ: ಇಂದು “ಜೋಡೋ” ನಡಿಗೆ
ರಾಮನಗರದಲ್ಲಿ ಸಿಎಂ, ಡಿಸಿಎಂ ಪಾದಯಾತ್ರೆ
Team Udayavani, Sep 6, 2023, 10:28 PM IST
ರಾಮನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ನಡೆದಿದ್ದ “ಭಾರತ್ ಜೋಡೋ ಯಾತ್ರೆ’ ಗುರುವಾರಕ್ಕೆ ವರ್ಷ ಪೂರೈಸಿದೆ. ಇದರ ಮೊದಲ ವರ್ಷಾಚರಣೆ ನೆನಪಿಗೆ ದೇಶದ ಎಲ್ಲ ಜಿಲ್ಲೆಗಳಲ್ಲೂ ಸೆ.7ರಂದು “ಭಾರತ್ ಜೋಡೋ’ ಯಾತ್ರೆ ಸಹಿತ ವಿವಿಧ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ.
ರಾಜ್ಯಮಟ್ಟದ ಪ್ರಮುಖ ಕಾರ್ಯಕ್ರಮ ಗುರುವಾರ ರಾಮನಗರದಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರ ಸಚಿವರು ಹಾಗೂ ಮುಖಂಡರು 4 ಕಿ.ಮೀ. ದೂರದವರೆಗೆ ಕಾಲ್ನಡಿಗೆ ಮೂಲಕ ಸಂಚರಿಸುವರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಸಂಜೆ 5 ಗಂಟೆಗೆ ಕಾಲ್ನಡಿಗೆ ಆರಂಭವಾಗಲಿದ್ದು, ರಾತ್ರಿ 7 ಗಂಟೆವರೆಗೆ ನಡೆಯಲಿದೆ. ಸುಮಾರು 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ದೇಶಾದ್ಯಂತ 722 ಕಡೆ ಪಾದಯಾತ್ರೆ
ದೇಶಾದ್ಯಂತ 722 ಭಾರತ್ ಜೋಡೋ ಯಾತ್ರೆಗಳನ್ನು ಏರ್ಪಡಿಸಿದೆ. ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಈ ನಡೆ ಮಹತ್ವ ಪಡೆದಿದೆ.