Education: ಅನುದಾನವಿಲ್ಲದೆ ತಣಿದ ಬಿಸಿಯೂಟ – ಮೂರು ತಿಂಗಳುಗಳಿಂದ ಅನುದಾನ ಬಂದಿಲ್ಲ
-ಶಿಕ್ಷಕರೇ ಕೈಯಿಂದ ಹಣ ಹಾಕುವಂತಹ ಸ್ಥಿತಿ
Team Udayavani, Oct 14, 2023, 10:02 PM IST
ಬೆಂಗಳೂರು/ದೇವದುರ್ಗ: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ನಿರ್ವಹಣೆಗೆ ಅನುದಾನ ಬಿಡುಗಡೆ ಆಗದಿರುವುದರಿಂದ ಮುಖ್ಯ ಶಿಕ್ಷಕರು ಹಾಗೂ ಅಡುಗೆ ಸಿಬಂದಿ ತಮ್ಮ ಸ್ವಂತ ಹಣವನ್ನು ಬಿಸಿಯೂಟಕ್ಕಾಗಿ ವಿನಿಯೋಗಿಸುವ ಸ್ಥಿತಿ ನಿರ್ಮಾಣವಾಗಿದೆ.
ಅಂದಾಜು ನಿತ್ಯ 58 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ಬಡಿಸುವ ವ್ಯವಸ್ಥೆ ಈಗ ಆರ್ಥಿಕ ಮುಗ್ಗಟ್ಟಿನಿಂದಾಗಿ ಹಳಿ ತಪ್ಪಿದೆ. ವಿದ್ಯಾರ್ಥಿಗಳಿಗೆ ಬಿಸಿಯೂಟ ಪೂರೈಸಲು ಶಿಕ್ಷಕರೇ ಹಣ ಖರ್ಚು ಮಾಡುತ್ತಿರುವುದರಿಂದ ಅವರ ಜೇಬಿಗೆ ಹೊರೆ ಬೀಳುವಂತಾಗಿದೆ.
ಮಧ್ಯಾಹ್ನದ ಬಿಸಿಯೂಟದ ಮುಂಗಡ ಹಣವಿದ್ದ ತಾಲೂಕುಗಳನ್ನು ಹೊರತು ಪಡಿಸಿ ಉಳಿದ ತಾಲೂಕುಗಳಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭ ಆದಾಗಿನಿಂದ ಈವರೆಗೆ ತರಕಾರಿ, ಮಸಾಲೆ ಪದಾರ್ಥ, ಉಪ್ಪು, ಮೊಟ್ಟೆ ಖರೀದಿಗೆ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಅಡುಗೆ ಪದಾರ್ಥಗಳ ಬೆಲೆ ಏರಿಕೆಯ ಮಧ್ಯೆಯು ಬಿಸಿಯೂಟದ ವೆಚ್ಚ ಭರಿಸುವ ಅನಿವಾರ್ಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಗೆ ಎದುರಾಗಿದೆ.
ಮೊಟ್ಟೆಗೂ ಹಣ ಬಿಡುಗಡೆ ಆಗದಿರುವುದರಿಂದ ಅಂಗಡಿಗಳಲ್ಲಿ ಸಾಲದ ರೂಪದಲ್ಲಿ ಮೊಟ್ಟೆ ಪೂರೈಸಿದ ಹಣಕ್ಕೆ ಮೊಟ್ಟೆ ಪೂರೈಕೆದಾರರು (ಅಂಗಡಿ ಮಾಲಕರು) ಶಾಲೆಗಳಿಗೆ ಬಾಕಿ ವಸೂಲಿಗೆ ನಿತ್ಯ ಅಲೆಯುವಂತಾಗಿದೆ. ಕೆಲವು ಶಾಲೆಗಳ ಆವರಣದಲ್ಲಿ ತರಕಾರಿ ಬೆಳೆದು ಬಳಸಲಾಗುತ್ತಿದೆ.
ನಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ಮೊಟ್ಟೆ ತರಕಾರಿ ಖರೀದಿಸಿ ಶಾಲೆಗೆ ತರುತ್ತಿದ್ದೇವೆ. ತರಕಾರಿ ಅಂಗಡಿಗಳಲ್ಲಿ ಸಾವಿರಾರು ರೂ. ಬಾಕಿ ಉಳಿದುಕೊಂಡಿದೆ. ಬಾಕಿ ಪಟ್ಟಿ ಬೆಳೆಯುತ್ತಿದೆಯೇ ವಿನಾಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಹಲವು ಶಿಕ್ಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೇಂದ್ರ ಸರಕಾರ ಬಿಸಿಯೂಟಕ್ಕೆ ನೀಡಬೇಕಾದ ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡದಿರುವುದರಿಂದ ಈ ಶೈಕ್ಷಣಿಕ ವರ್ಷದ ಮೊದಲ ತೈಮಾಸಿಕದ ಹಣ ಬಿಡುಗಡೆ ತಡವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ ನಡೆಸುವ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನದ ಬಿಸಿಯೂಟ ಯೋಜನೆಯ ಶೇ. 60 ವೆಚ್ಚವನ್ನು ಕೇಂದ್ರ ಸರಕಾರ, ಉಳಿದ ಶೇ. 40ರಷ್ಟು ವೆಚ್ಚವನ್ನು ರಾಜ್ಯ ಸರಕಾರ ಭರಿಸುತ್ತದೆ. ಮೊದಲ ತೈಮಾಸಿಕದ ಬಿಸಿಯೂಟ ಯೋಜನೆಗೆ ಕೇಂದ್ರ ಸರಕಾರದಿಂದ ಹಣ ಬರಲು ಬಾಕಿಯಿದ್ದ ಕಾರಣ ನಾವು ಅನುದಾನ ಬಿಡುಗಡೆ ಮಾಡಿರಲಿಲ್ಲ. ಈಗ ಕೇಂದ್ರದಿಂದ 135 ಕೋಟಿ ರೂ ಬಿಡುಗಡೆಯಾಗಿದ್ದು ರಾಜ್ಯ ಸರಕಾರದಿಂದ 81 ಕೋಟಿ ರೂ. ಬಂದಿದೆ. ಹೀಗಾಗಿ ಮುಂದಿನ ವಾರ ಅನುದಾನ ಬಿಡುಗಡೆಯಾಗಬಹುದೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
58 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ
ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಪ್ರತೀ ದಿನ 1ರಿಂದ 5ನೇ ತರಗತಿಯ ಪ್ರತೀ ವಿದ್ಯಾರ್ಥಿಗೆ ತಲಾ 1.49 ರೂ. ಮತ್ತು 6ರಿಂದ 10ನೇ ತರಗತಿಯ ಪ್ರತೀ ವಿದ್ಯಾರ್ಥಿಗೆ 2.24 ರೂ.ಗಳಂತೆ ಅನುದಾನ ನೀಡಲಾಗುತ್ತಿದೆ. ರಾಜ್ಯದಲ್ಲಿ 53,882 ಶಾಲೆಗಳಲ್ಲಿ ಒಟ್ಟು 58 ಲಕ್ಷ ವಿದ್ಯಾರ್ಥಿಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಕೆಲವು ಶಾಲೆಗಳಿಗೆ ಬಿಸಿಯೂಟದ ಹಣ ಬಿಡುಗಡೆಯಾಗಿಲ್ಲ ಎಂಬ ಮಾಹಿತಿಯಿದೆ. ಶೀಘ್ರವೇ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಾಳೆಹಣ್ಣು, ಚಿಕ್ಕಿ, ಮೊಟ್ಟೆಯ ಅನುದಾನ ಬಂದಿಲ್ಲ ಎಂದು ಮುಖ್ಯ ಶಿಕ್ಷಕರು ಹೇಳುತ್ತಿದ್ದಾರೆ. ಸಮಸ್ಯೆ ಶೀಘ್ರ ಪರಿಹಾರಗೊಳ್ಳುವ ವಿಶ್ವಾಸವಿದೆ.
– ಕೃಷ್ಣಪ್ಪ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ
ಮೂರು ತಿಂಗಳುಗಳಿಂದ ಬಿಸಿಯೂಟ ಯೋಜನೆಗೆ ಅನುದಾನ ಬಿಡುಗಡೆ ಆಗಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದ್ದು, ವಾರದಲ್ಲಿ ಎಲ್ಲ ಶಾಲೆಗಳಿಗೆ ಅನುದಾನ ಜಮೆ ಮಾಡಲಾಗುತ್ತದೆ.
-ಬಂದೋಲಿಸಾಬ, ಅಕ್ಷರ ದಾಸೋಹ ಅಧಿಕಾರಿ
ರಾಕೇಶ್ ಎನ್.ಎಸ್./ನಾಗರಾಜ ತೇಲ್ಕರ್