ಮೈತ್ರಿ ಸರ್ಕಾರ ಉಳಿಸಿಕೊಳ್ಳೋದು, ಬಿಡೋದು ಕಾಂಗ್ರೆಸ್ ಗೆ ಬಿಟ್ಟಿದ್ದು; ಸಿಟಿ ರವಿ
Team Udayavani, May 16, 2019, 6:09 PM IST
ಹುಬ್ಬಳ್ಳಿ: ಆಡಳಿತಾರೂಢ ಮೈತ್ರಿ ಸರ್ಕಾರವನ್ನು ನಾವು ಬೀಳಿಸುವುದಿಲ್ಲ. ಉಳಿಸಿಕೊಳ್ಳೋದು, ಬಿಡೋದು ಅವರಿಗೆ ಬಿಟ್ಟಿದ್ದು ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ಬಿಜೆಪಿ ಬೀಳಿಸುವುದಿಲ್ಲ. ಆದರೆ, 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಉಂಟಾಗುವ ಬೆಳವಣಿಗೆಯ ತೀವ್ರತೆಯಿಂದಾಗಿ ಸರ್ಕಾರ ಬೀಳುವ ಸಾಧ್ಯತೆ ಇದೆ. ಹಾಗಾಗಿ, ಸರ್ಕಾರ ಉಳಿಸಿಕೊಳ್ಳುವುದು ಅಥವಾ ಬಿಡುವುದು ಆಯಾ ಪಕ್ಷದವರಿಗೆ ಬಿಟ್ಟ ವಿಷಯ. ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಆಯುಷ್ಯವಿದೆ ಎಂದು ಯಾರಿಗೂ ಅನಿಸುತ್ತಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಹಗುರವಾಗಿ ಮಾತನಾಡುತ್ತಿದ್ದಾರೆ. ತನ್ಮೂಲಕ ಅವರು ಸುಸಂಸ್ಕೃತ ನಾಡು ಎನಿಸಿಕೊಂಡಿರುವ ರಾಜ್ಯಕ್ಕೆ ಅಪಮಾನ ಮಾಡಿದ್ದಾರೆ. ಇಂಥವರನ್ನು ಸರಿಮಾಡಲು ಸಾಧ್ಯವಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂದು ಪ್ರಶ್ನಿಸಿ ಲೇವಡಿ ಮಾಡಿದರು.