ಜಾತಿ ಸಮೀಕ್ಷಾ ವರದಿ ಬಿಡುಗಡೆ ಸಿಎಂ ನಿರ್ಧಾರ
Team Udayavani, Mar 3, 2021, 6:54 PM IST
ಹೊಸಪೇಟೆ: ಹಿಂದುಳಿದ ವರ್ಗದ ಆಯೋಗ ನಡೆಸಿರುವ ಜಾತಿ ಸಮೀಕ್ಷಾ ವರದಿ ಬಿಡುಗಡೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರಬಾಬು ಹೇಳಿದರು.
ನಗರದ ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯಗಳಿಗೆ ಮೀಸಲಾತಿ ನೀಡುವುದಕ್ಕೆ ಆರ್ಥಿಕ ಹಿಂದುಳಿಯುವಿಕೆ ಮಾತ್ರ ಮಾನದಂಡವಲ್ಲ. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಹಿನ್ನಡೆಯೇ ಪ್ರಮುಖ ಮಾನದಂಡ ಎಂದರು.
ಈಗಾಗಲೇ ಕೇಂದ್ರ ಸರಕಾರ ಎಲ್ಲ ಸಮುದಾಯಗಳಿಗೂ ಮೀಸಲಾತಿ ನೀಡಿದೆ. ಒಬಿಸಿ ವರ್ಗದ ಅಭಿವೃದ್ಧಿಗೆ ಶಿಕ್ಷಣ ಕ್ಷೇತ್ರದಲ್ಲೂ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಹೆಚ್ಚುಕಮ್ಮಿ ಎಲ್ಲ ಸಮುದಾಯಗಳು ಈಗ ಮೀಸಲಾತಿ ಪರಿ ಯಲ್ಲೇ ಬಂದಿವೆ ಎಂದರು. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಗಳಾದರೂ ಹಲವು ಸಮುದಾಯಗಳು ಧ್ವನಿ ಇಲ್ಲದಂತಾಗಿವೆ. ಹೇಳವ, ತಿಗಳ, ಸವಿತಾ, ಮಡಿವಾಳ, ಗಾಣಿಗ ಸೇರಿದಂತೆ ಹಲವು ಸಣ್ಣ ಸಣ್ಣ ಸಮಾಜಗಳಿಗೆ ಧ್ವನಿ ನೀಡುವ ಕಾರ್ಯವನ್ನು ಬಿಜೆಪಿ ಒಬಿಸಿ ಮೋರ್ಚಾ ಮಾಡುತ್ತಿದೆ. ಅವರಲ್ಲಿ ಜಾಗೃತಿ ಮೂಡಿಸಿ ಶಿಕ್ಷಣ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಚನ್ನಪಟ್ಟಣದ ಗೊಂಬೆಗಳನ್ನು ರಫ್ತು ಮಾಡುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ದೇಶದ ಆರ್ಥಿಕ ಸುಧಾರಣೆಗಾಗಿ ಶಸ್ತ್ರಾಸ್ತ್ರ ಸೇರಿದಂತೆ ಎಲ್ಲ ವಲಯದಲ್ಲೂ ಭಾರತ ಉತ್ಪಾದನೆ ಮಾಡಬೇಕಿದೆ. ಯಾವಾಗ ಆಮದು ನಿಂತು, ರಫ್ತು ಜಾಸ್ತಿಯಾದರೆ ಮಾತ್ರ ಭಾರತ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಸಚಿವ ಆನಂದ್ ಸಿಂಗ್, ಬಳ್ಳಾರಿ ಜಿಲ್ಲಾ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಅಯ್ನಾಳಿ ತಿಮ್ಮಪ್ಪ, ಮುಖಂಡರಾದ ಸಿದ್ದೇಶ್ ಯಾದವ್, ಅನಂತ ಪದ್ಮನಾಭ, ಶಶಿಧರಯ್ಯಸ್ವಾಮಿ ಮತ್ತಿತರರಿದ್ದರು.