ಕಾಲು ಸೋತವರಿಗೆ ತಂಗುದಾಣವಾಗಲಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಗಮನ ಕೊಡಲಿ
Team Udayavani, Feb 24, 2022, 11:27 AM IST
ಇದು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಬಸ್ ತಂಗುದಾಣಗಳ ಕಥೆ. ಇವುಗಳು ನಿರ್ವಹಣೆಯ ನಿರೀಕ್ಷೆಯಲ್ಲಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮನಸ್ಸು ಮಾಡಿದರೆ ಈ ಬೇಸಗೆಗೆ ಜನರು ಕೊಂಚ ನೆಮ್ಮದಿಯಿಂದ ಇರಲು ಸಾಧ್ಯ. ಉದಯವಾಣಿಯ ತಂಡ ಬೈಕಂಪಾಡಿಯಿಂದ ಪಡೀಲ್ ಕಣ್ಣೂರು ವ್ಯಾಪ್ತಿಯವರೆಗೆ ತಿರುಗಿ ಬಂದಾಗ ಸಿಕ್ಕಿದ್ದು, 15 ಬಸ್ ತಂಗುದಾಣಗಳು. ಈ ಹಾದಿಯಲ್ಲಿ ಇಷ್ಟೇ ಖಾಸಗಿ ಸಹಭಾಗಿತ್ವದ/ಖಾಸಗಿ ಕೊಡುಗೆಯ ತಂಗುದಾಣಗಳೂ ಇವೆ. ಆದರೆ ನಿರ್ವಹಣೆಯಲ್ಲಿ ಅಜಗಜಾಂತರವಿದೆ. ಅದರ ವಿವರವೇ ಇಲ್ಲಿದೆ.
ಸಮಸ್ಯೆ ಇಲ್ಲಿದೆ
– ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಲವು ತಂಗುದಾಣಗಳು ಪ್ರಯಾಣಿಕರಿಗೆ ಬೇಕಾದ ಸ್ಥಳದಲ್ಲಿಲ್ಲ ; ಹಾಗಾಗಿ ಅವು ಇದ್ದೂ ಇಲ್ಲದಂತೆ.
– ಕೆಲವೆಡೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಹಿರಿಯ ನಾಗರಿಕರಿಂದ ಹಿಡಿದು ಎಲ್ಲರೂ ನಿಲ್ಲಲೇ ಬೇಕು.
– ಕೆಲವೆಡೆ ಇರುವ ಬೆಂಚೂ ಮುರಿದು ತಿಂಗಳುಗಳಾಗಿವೆ. ದುರಸ್ತಿಯಾಗಿಲ್ಲ.
– ಬಹುತೇಕ ಕಡೆ ಕಳಪೆ ನಿರ್ವಹಣೆಯೇ ಪ್ರಮುಖ ಸಮಸ್ಯೆ
ಸಮಸ್ಯೆಯ ಸ್ಥೂಲ ಚಿತ್ರಣ
ಪಡೀಲ್ ವ್ಯಾಪ್ತಿಯ ಬಸ್ತಂಗುದಾಣದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆಯಿಲ್ಲ. ಕೆಪಿಟಿ ಬಳಿಯಲ್ಲಿ ಕುಳಿತುಕೊಳ್ಳುವ ಬೆಂಚು ತುಂಡಾಗಿ ಬಿದ್ದಿದೆ. ಎ.ಜೆ ಆಸ್ಪತ್ರೆಯ ಇಕ್ಕೆಲಗಳಲ್ಲಿರುವ ಹೆದ್ದಾರಿ ಪ್ರಾಧಿಕಾರದ ತಂಗುದಾಣ ಬಳಕೆಗೆ ಸಿಗುತ್ತಿಲ್ಲ. ಬೈಕಂಪಾಡಿ ವ್ಯಾಪ್ತಿಯಲ್ಲಿಯೂ ಇಂತಹುದೇ ಪರಿಸ್ಥಿತಿ. ಪಣಂಬೂರು ಬೀಚ್ನ ಮುಂಭಾಗದ ತಂಗುದಾಣ ಬಳಕೆಯಾಗುತ್ತಿಲ್ಲ. ಪಣಂಬೂರು ಸಿಗ್ನಲ್ ಬಳಿ ಸ್ಮಾರ್ಟ್ಸಿಟಿ ಮಾಡಿರುವ ಬಸ್ನಿಲ್ದಾಣವು ಬಳಕೆಯಾಗದೆ ಬಿಕೋ ಎನ್ನುತ್ತಿದೆ!
ಪರಿಹಾರವೂ ಇಲ್ಲಿದೆ
– ಬಸ್ತಂಗುದಾಣದ ಪ್ರದೇಶವನ್ನು ಸ್ವತ್ಛ ಹಾಗೂ ಸುಂದರವಾಗಿರಿಸಲು ವ್ಯವಸ್ಥೆ ಕಲ್ಪಿಸಬೇಕು.
– ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಬೇಕು.
– ಬಸ್ ತಂಗುದಾಣದಲ್ಲಿ ವ್ಯಾಪಾರ ಚಟುವಟಿಕೆಗೆ ಅವಕಾಶ ನಿರ್ಬಂಧಿಸಬೇಕು.
– ಅಗತ್ಯವಿರುವಲ್ಲಿಗೆ ನಿಲ್ದಾಣ ಸ್ಥಳಾಂತರ ವಾದರೆ ಹೆಚ್ಚು ಜನರಿಗೆ ಅನುಕೂಲ.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಗಮನಕ್ಕೆ
ಬೇಸಗೆ ಬರುತ್ತಿದೆ. ಜನರಿಗೆ ತಂಗುದಾಣದ ಹೆಸರಿನಲ್ಲಿರುವ ನಿಲ್ದಾಣ ಗಳು ಹೆಚ್ಚು ಪ್ರಯೋಜನಕ್ಕೆ ಬರುವ ಕಾಲವಿದು. ಹಾಗಾಗಿ ಆದ್ಯತೆಯ ಮೇರೆಗೆ ಇಲ್ಲಿನ ಸಮಸ್ಯೆ ಬಗೆಹರಿಸಬೇಕೆಂಬುದು ಸ್ಥಳೀಯ ನಾಗರಿಕರ ಆಗ್ರಹ.
– ದಿನೇಶ್ ಇರಾ / ಸತೀಶ್ ಇರಾ