ಸುಳ್ಳು ಆಶ್ವಾಸನೆಗಳಿಂದ ಪ್ರಗತಿ ಅಸಾಧ್ಯ: ತುನ್ನೂರ
Team Udayavani, Jan 10, 2021, 6:57 PM IST
ಯಾದಗಿರಿ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬರೀ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ಮರಳು ಮಾಡುತ್ತಿದ್ದು, ಜನರು ಎಚ್ಚೆತ್ತುಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ತುನ್ನೂರ ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಪಂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ನವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ಬಿಜೆಪಿಗರು, 6 ವರ್ಷದಲ್ಲಿ ಕೇಂದ್ರ ಸರ್ಕಾರ ಏನು ಮಾಡಿದೆ ಎನ್ನುವುದನ್ನು ಹೇಳಲಿ. ಇತ್ತೀಚೆಗೆ ಯಾದಗಿರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸಿ ಕೇವಲ 3 ನಿಮಿಷದ ಭಾಷಣ ಮಾಡಿದ್ದಾರೆ. ಬರೀ ಸುಳ್ಳು ಮಾತಿನಲ್ಲಿ ಮೋಡಿ ಮಾಡುತ್ತಿದ್ದು, 2 ಕೋಟಿ ಯುವಕರಿಗೆ ನೌಕರಿ ನೀಡುವುದಾಗಿ ಹೇಳಿ ಈವರೆಗೆ ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ
ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಸವಾಲ್ ಎಸೆದರು.
ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿ, ಪರಿಶಿಷ್ಟರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ
ವರ್ಗಗಳ ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಹಲವು ಯೋಜನೆಗಳನ್ನು ರೂಪಿಸಿ ಏಳ್ಗೆಗೆ ಶ್ರಮಿಸಿದೆ. ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 31 ಗ್ರಾಪಂಗಳಲ್ಲಿ ಶೇ.70ರಷ್ಟು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ ಎಂದರು.
ಅಲ್ಪಸಂಖ್ಯಾತರ ಮುಖಂಡ ಲಾಯಕ್ ಹುಸೇನ್ ಬಾದಲ್, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಮಂಜುಳಾ ಗೂಳಿ, ಮಲ್ಲಣ್ಣ ದಾಸನಕೇರಿ ಮಾತನಾಡಿದರು. ಪ್ರಮುಖರಾದ ಚಿದಾನಂದಪ್ಪ ಕಾಳಬೆಳಗುಂದಿ, ಮಾಣಿಕರಡ್ಡಿ ಕುರಕುಂದಿ, ಸುದರ್ಶನ ನಾಯಕ್, ಮರೆಪ್ಪ ಬಿಳಾರ, ಬಸ್ಸುಗೌಡ ಬಿಳಾರ, ರಾಘವೇಂದ್ರ ಮಾನಸಗಲ್, ಸುರೇಶ ಜೈನ್ ಇದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು.