ಚಿಕ್ಕಬಳ್ಳಾಪುರ: ದರೋಡೆಗೆ ಸಂಚು ರೂಪಿಸುತ್ತಿದ್ದ ನಾಲ್ವರ ಬಂಧನ
Team Udayavani, Oct 9, 2019, 8:30 PM IST
ಚಿಕ್ಕಬಳ್ಳಾಪುರ: ಸಾರ್ವಜನಿಕರನ್ನು ಹಾಗೂ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡಗೆ ಸಂಚು ರೂಪಿಸುತ್ತಿದ್ದ ಗುಂಪಿನ ಮೇಲೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಗಳೂರು ಮೂಲದ ನಾಲ್ವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಶಿವಾಜಿನಗರದ ನಿವಾಸಿಗಳಾದ ಇರ್ಪಾನ್ ಪಾಷಾ ಬಿನ್ ಪಯಾಜ್ (27) ಸೈಯದ್ ತನ್ವೀರ್ ಅಲಿಯಾಸ್ ತನ್ನು ಬಿನ್ ಸೈಯದ್ ಸಲೀಂ, (22), ಮೊಹಮದ್ ಜಶೀಂ ಬಿನ್ ಅಬ್ದುಲ್ ಸಲಾಂ (21) ಬಂಧಿತ ಆರೋಪಿಗಳು ಉಳಿದಂತೆ ಚಿಂತಾಮಣಿ ತಾಲೂಕಿನ ಮುರಗಲ್ಲ ಗ್ರಾಮದ ಬಾಲಾಜಿ ಬಸ್ ಕ್ಲೀನರ್ ಮೊಹಮದ್ ಅಜಾದ್ ಬಿನ್ ಲೆಟ್ ಮೊಹಮ್ಮದ್ ರಫೀಕ್ , (18) ಎಂದು ಗುರುತಿಸಲಾಗಿದೆ.
ಪರಾರಿಯಾಗಿರುವ ಆರೋಪಿಗಳನ್ನು ತಾಲೂಕಿನ ಮುದ್ದಲಹಳ್ಳಿ ನಿವಾಸಿಗಳಾದ ನಿವಾಸಿ ಆಂಜಪ್ಪ ಬಿನ್ ಲೇಟ್ ಕರಕಮಾಕನಹಳ್ಳಿ ಪಾಪಣ್ಣ, (58), ನರಸಿಂಹ ಬಿನ್ ಅಂಜಪ್ಪ (38), ಮಂಜುನಾಥ ಬಿನ್ ಅಂಜಪ್ಪ, (35 ಎಂದು ಹೇಳಲಾಗಿದೆ.
ಬಟ್ಲಹಳ್ಳಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮುದ್ದಲಹಳ್ಳಿ ಸಮೀಪ ಪೆದ್ದೂರುಗೆ ಹೋಗುವ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ 7 ಮಂದಿ ದರೋಡೆಕೋರರು ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದು ದರೋಡೆ ನಡೆಸಲು ಸಂಚು ರೂಪಿಸುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಕೂಡಲೇ ಬಟ್ಲಹಳ್ಳಿ ಗ್ರಾಮಾಂತರ ಠಾಣೆ ಪಿಎಸ್ಐ ಪಾಪಣ್ಣ ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದು ದಾಳಿ ನಡೆಸಿದಾಗ ಬೆಂಗಳೂರಿನ ಶಿವಾಜಿನಗರದ ನಾಲ್ವರು ದರೋಡೆಕೋರರು ಸೆರೆ ಸಿಕ್ಕಿದ್ದು, ಅವರೊಂದಿಗೆ ಇದ್ದ ಮೂವರು ಸ್ಥಳೀಯರು ಪರಾರಿ ಆಗಿದ್ದಾರೆ.
ಮಾರಕಾಯುಧಗಳ ವಶ:
ಪೊಲೀಸರ ದಾಳಿ ವೇಳೆ ಬಂಧಿತರ ಬಳಿ ಇದ್ದ 6000 ರೂ, ನಗದು ಜೊತೆಗೆ ಚಾಕು, ಕಾರದ ಪುಡಿ, ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಎರಡು ದ್ವಿಚಕ್ರವಾಹನಗಳಲ್ಲಿ ಬಂದಿದ್ದು, ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಯ ವೇಳೆ ಸಾರ್ವಜನಿಕರಿಗೆ ಮಾರಕಾಯುಧಗಳನ್ನು ತೊರಿಸಿ ಪ್ರಾಣ ಬೆದರಿಕೆ ಹಾಕಿ ಸಾರ್ವಜನಿಕರಿಂದ ಹಣ ಹಾಗೂ ಇತರೆ ಬೆಲೆ ಬಾಳುವ ಆಭರಣಗಳನ್ನು ಮತ್ತು ವಸ್ತುಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿರುವುದಾಗಿ ಅದಕ್ಕೆ ಸಾರ್ವಜನಿಕರು ಅಡ್ಡಿಪಡಿಸಿದಲ್ಲಿ ತಮ್ಮಲ್ಲಿರುವ ಕಾರದ ಪುಡಿ ಎರಚಿ ಮಾರಕಾಯುಧಗಳಿಂದ ಹೊಡೆದು ಪರಾರಿಯಾಗುವ ಸಲುವಾಗಿ ದ್ವಿಚಕ್ರವಾಹನಗಳಲ್ಲಿ ಬಂದು ರಸ್ತೆಯಲ್ಲಿ ಬರುವವರಿಗೆ ವಾಹನಗಳು ಗೊತ್ತಾಗದಂತೆ ರಸ್ತೆಯ ಪಕ್ಕದಲ್ಲಿ ಗಿಡಗಳ ಮರೆಯಲ್ಲಿ ನಿಲ್ಲಿಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.