ಮರವೂರು: ಯೋಜನೆ ಶೀಘ್ರ ಸಾಕಾರ ನಿರೀಕ್ಷೆ
ಕೋಸ್ಟ್ಗಾರ್ಡ್ ರಾಷ್ಟ್ರೀಯ ತರಬೇತಿ ಅಕಾಡೆಮಿ
Team Udayavani, Jul 4, 2020, 6:50 AM IST
ಸಾಂದರ್ಭಿಕ ಚಿತ್ರ
ಮಹಾನಗರ: ಕರ್ನಾಟಕದ ಕರಾವಳಿ ತೀರಕ್ಕೆ ಗರಿಷ್ಠ ಭದ್ರತೆ ಒದಗಿ ಸಲು ಭಾರತೀಯ ಕೋಸ್ಟ್ಗಾರ್ಡ್ (ಭಾರತೀಯ ಕರಾವಳಿ ತಟ ರಕ್ಷಣ ಪಡೆ) ಹಲವು ಆಯಾಮಗಳಲ್ಲಿ ಕಾರ್ಯಾ ಚರಿಸುತ್ತಿದ್ದು, ಇದೀಗ ರಾಷ್ಟ್ರೀಯ ತರಬೇತಿ ಅಕಾಡೆಮಿಯನ್ನು ಮಂಗಳೂರು ಹೊರವಲಯದ ಮರವೂರು ಬಳಿ ಸ್ಥಾಪಿ ಸುವ ಮಹತ್ವದ ಯೋಜನೆಗೆ ಮುಂದಾಗಿದ್ದು, ಶೀಘ್ರ ಸಾಕಾರದ ನಿರೀಕ್ಷೆ ಯಿದೆ.
ಈ ಹಿಂದೆ ಮರವೂರಿನಲ್ಲಿ ಅಕಾಡೆಮಿ ಸ್ಥಾಪನೆ ಬಗ್ಗೆ ಸುದ್ದಿ ಕೇಳಿಬಂದ ಕೆಲವೇ ತಿಂಗಳಲ್ಲಿ ಈ ಅಕಾಡೆಮಿ ದಿಢೀರಾಗಿ ಕೇರಳದಲ್ಲಿ ಸ್ಥಾಪನೆಯಾಗಲಿದೆ ಎಂಬ ಬಗ್ಗೆಯೂ ಮಾತು ಕೇಳಿಬಂದಿತ್ತು. ಆದರೆ ಅಲ್ಲಿ ಯೋಜನೆಗೆ ಗುರುತಿಸಿದ್ದ ಜಮೀನಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಲು ನಿರಾಕರಿಸಿದ ಹಿನ್ನೆಲೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂಲಕ ಅಕಾಡೆಮಿ ಮತ್ತೆ ಮರವೂರಿಗೆ ಬಂದಿದ್ದು, ಶೀಘ್ರದಲ್ಲಿಯೇ ಈ ಯೋಜನೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. 1,010 ಕೋ. ರೂ. ವೆಚ್ಚದಲ್ಲಿ ಈ ಯೋಜನೆ ಸ್ಥಾಪನೆಯಾಗುವ ನಿರೀಕ್ಷೆಯಿದೆ.
160 ಎಕ್ರೆ ಭೂಮಿ
ಮರವೂರು ಸಮೀಪ ಗುರುಪುರ ನದಿ ತೀರದಲ್ಲಿ ಈ ಹಿಂದೆ ಜೆಸ್ಕೊ ಕಂಪೆನಿಗೆ ಒದಗಿಸಿದ್ದ 160 ಎಕ್ರೆ ಜಾಗವನ್ನು ಕೋಸ್ಟ್ಗಾರ್ಡ್ಗೆ ಒದಗಿಸಲು ಎರಡು ವರ್ಷಗಳ ಹಿಂದೆಯೇ ರಾಜ್ಯ ಸರಕಾರ ನಿರ್ಧರಿಸಿ ಈ ಬಗ್ಗೆ ಸಚಿವ ಸಂಪುಟದ ಅನುಮೋದನೆಯನ್ನೂ ನೀಡಿತ್ತು. ತನ್ನ ಯೋಜನೆಗಾಗಿ ಪಡೆದಿದ್ದ 160 ಎಕ್ರೆ ಜಾಗದಲ್ಲಿ ಜೆಸ್ಕೊ ನಿಗದಿತ ಅವಧಿಯಲ್ಲಿ ಯೋಜನೆ ಆರಂಭಿಸದ ಕಾರಣ ಆ ಜಾಗವನ್ನು ರಾಜ್ಯ ಸರಕಾರ ವಾಪಸ್ ಪಡೆದಿತ್ತು. ಇದೀಗ ಜಾಗವು ಕೆಐಎಡಿಬಿ ಅಧೀನದಲ್ಲಿದ್ದು, ಅದನ್ನು ಕೋಸ್ಟ್ ಗಾರ್ಡ್ಗೆ ಹಸ್ತಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
2009ರ ತೀರ್ಮಾನ ಅನುಷ್ಠಾನದತ್ತ
ಪ್ರಸ್ತುತ ಕೋಸ್ಟ್ಗಾರ್ಡ್ ಸಿಬಂದಿಗೆ ಭಾರತೀಯ ನೌಕಾ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತಿದೆ. 2008ರ ಮುಂಬಯಿ ದಾಳಿ ಬಳಿಕ ಕೇಂದ್ರ ಸರಕಾರವು ಕೋಸ್ಟ್ಗಾರ್ಡ್ ಪಡೆ, ಆಸ್ತಿ, ಮೂಲ ಸೌಕರ್ಯಗಳನ್ನು ಮೂರು ಪಟ್ಟು ಹೆಚ್ಚಿಸಲು ಉದ್ದೇಶಿಸಿತ್ತು. ಆದರೆ ಕೋಸ್ಟ್ಗಾರ್ಡ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬಂದಿ ನೇಮಕ ಮಾಡಬೇಕಾದರೆ ನೌಕಾ ಅಕಾಡೆಮಿಯ ಮೂಲ ಸೌಲಭ್ಯಗಳನ್ನು ಹೆಚ್ಚಿಸುವ ಅನಿವಾರ್ಯ ಎದುರಾಗಿತ್ತು. ಹಾಗಾಗಿ ಕೇಂದ್ರ ಸಚಿವ ಸಂಪುಟವು 2009ರಲ್ಲಿ ಕೋಸ್ಟ್ಗಾರ್ಡ್ ಅಕಾಡೆಮಿ ಸ್ಥಾಪಿಸಲು ತೀರ್ಮಾನಿಸಿ ಅನುಮೋದನೆ ನೀಡಿತ್ತು. ಅದಾದ ಬಳಿಕ 11 ವರ್ಷಗಳ ಬಳಿಕ ಇದೀಗ ಈ ಯೋಜನೆ ಮಂಗಳೂರಿ ನಲ್ಲಿ ಸಾಕಾರಗೊಳ್ಳಲು ಸಜ್ಜಾಗಿದೆ.
ಕೋಸ್ಟ್ಗಾರ್ಡ್ ಕಾರ್ಯಗಳೇನು?
ಕೋಸ್ಟ್ಗಾರ್ಡ್ ವರ್ಷದ 365 ದಿನಗಳೂ ಸಮುದ್ರದಲ್ಲಿ ದೇಶದ ಗಡಿ ಕಾಯುವ ಕಾರ್ಯದಲ್ಲಿ ನಿರತವಾಗಿರುವ ವಿವಿಧೋದ್ದೇಶ ಸಂಸ್ಥೆಯಾಗಿದೆ. ಇತರ ಭದ್ರತಾ ಸಂಸ್ಥೆಗಳಿಗೆ ಹೋಲಿಸಿದಾಗ ಕೋಸ್ಟ್ಗಾರ್ಡ್ ಚಿಕ್ಕದಾಗಿದ್ದರೂ ಸಮುದ್ರದಲ್ಲಿ, ಭೂಮಿ ಮೇಲೆ ಮತ್ತು ಆಕಾಶದಲ್ಲಿ ಕಾರ್ಯಾಚರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಸಮುದ್ರದಲ್ಲಿ ಮಾನವ ಜೀವ ರಕ್ಷಣೆ ಸಹಿತ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರಿಗೆ ನೆರವಿನ ಹಸ್ತ, ಕಳ್ಳ ಸಾಗಾಟಗಾರರ ವಿರುದ್ಧ ಕಾರ್ಯಾಚರಣೆ, ಸಾಗರ ಜೀವ ವೈವಿಧ್ಯ ರಕ್ಷಣೆ ಮಾಡುತ್ತಿರುತ್ತದೆ.
ಮರವೂರಿನಲ್ಲೇ
ಅಕಾಡೆಮಿ
ಭಾರತೀಯ ಕೋಸ್ಟ್ ಗಾರ್ಡ್ನ ರಾಷ್ಟ್ರೀಯ ತರಬೇತಿ ಅಕಾಡೆಮಿಯನ್ನು ಮರವೂರಿನಲ್ಲಿಯೇ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೇರಳದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಈ ಅಕಾಡೆಮಿಯನ್ನು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಮೂಲಕ ಮಂಗಳೂರಿಗೆ ತರಲಾಗಿದೆ. ಅಕಾಡೆಮಿ ನಿರ್ಮಾಣವಾಗುವ ಮೂಲಕ ಸಾವಿರಾರು ಯುವಕರಿಗೆ ದಾರಿದೀಪವಾಗಲಿದೆ.
- ನಳಿನ್ ಕುಮಾರ್ ಕಟೀಲು, ಸಂಸದರು, ದ.ಕ.