ಬಾಣಸಿಗ ಸಾವು, ಹಾಕಿ ಆಟಗಾರರ ವರ್ಗಾವಣೆ ಇಲ್ಲ: ಸಾಯ್ ಸ್ಪಷ್ಟನೆ
Team Udayavani, May 21, 2020, 6:40 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಬಾಣಸಿಗನೊಬ್ಬ ಕೋವಿಡ್-19 ವೈರಸ್ ಸೋಂಕು ತಗುಲಿ ಸಾವಿಗೀಡಾಗಿರುವುದು ದೃಢಪಟ್ಟಿದ್ದರೂ ಭಾರತೀಯ ಪುರುಷ ಮತ್ತು ವನಿತಾ ಹಾಕಿ ಆಟಗಾರರನ್ನು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದಿಂದ ಬೇರೆಡೆಗೆ ವರ್ಗಾವಣೆ ಮಾಡುವ ಆಲೋಚನೆ ಇಲ್ಲ ಎಂದು ಹಾಕಿ ಇಂಡಿಯಾ ಸ್ಪಷ್ಟಪಡಿಸಿದೆ.
ಆಟಗಾರರು ಹಾಗೂ ಅಡುಗೆ ಸಿಬಂದಿ ಇದ್ದ ಸ್ಥಳಕ್ಕೆ ಸಾಕಷ್ಟು ದೂರವಿತ್ತು, ಇದರಿಂದ ರೋಗ ಹರಡುವ ಸಾಧ್ಯತೆ ಕಡಿಮೆ, ಈಗ ದೇಶವ್ಯಾಪಿ ಲಾಕ್ಡೌನ್ ಇದೆ, ಇಂತಹ ಸಂದರ್ಭದಲ್ಲಿ ಆಟಗಾರರನ್ನು ಬೇರೆಡೆಗೆ ಸ್ಥಳಾಂತರಿಸುವುದು ಸರಿಯಲ್ಲ’ ಎಂದು ಹಾಕಿ ಇಂಡಿಯಾ ಸಿಇಒ ಎಲೆನಾ ನಾರ್ಮನ್ ತಿಳಿಸಿದ್ದಾರೆ.
“ಕೋವಿಡ್-19 ಹಿನ್ನೆಲೆಯಲ್ಲಿ ಮಾ.10ರಿಂದ ಸಾಯ್ನ ಬಾಣಸಿಗ ಸೇರಿದಂತೆ 60 ಮಂದಿ ಸಿಬಂದಿಗೆ ರಜೆ ನೀಡಿ ಕಳುಹಿಸಲಾಗಿತ್ತು, ಅಲ್ಲಿಂದ ನಂತರ ಸಾಯ್ ಗೇಟ್ ಸಮೀಪಕ್ಕೂ ಯಾರೂ ಬಂದಿಲ್ಲ, ಇತ್ತೀಚೆಗೆ ಸಂಬಂಧಿಕರ ಮಗುವನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ವೇಳೆ ಬಾಣಸಿಗನಿಗೆ ಹೃದಯಾಘಾತವಾಗಿದೆ, ಆತನನ್ನು ಬದುಕಿಸಲು ಪ್ರಯತ್ನ ನಡೆಸಲಾಗಿತ್ತಾದರೂ ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ, ಸಾವಿನ ಅನಂತರ ನಿಯಮದಂತೆ ಕೋವಿಡ್-19 ಟೆಸ್ಟ್ ಮಾಡಲಾಗಿದೆ, ಈ ವೇಳೆ ಬಾಣಸಿಗನಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು, ಬೆನ್ನಲ್ಲೇ ಬಾಣಸಿಗನೊಂದಿಗೆ ಸಂಪರ್ಕ ಹೊಂದಿದ್ದ 60 ಸಿಬಂದಿಗೆ ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ’ ಎಂದು ಸಾಯ್ ಮೂಲಗಳು ತಿಳಿಸಿವೆ.