ಶಿಕ್ಷಣ ರಂಗ ಬಲಪಡಿಸಲು ಆದ್ಯತೆ : ಗುಣಮಟ್ಟದ ಕಾಮಗಾರಿ ನಡೆಸಲು ಸೂಚನೆ
Team Udayavani, Sep 13, 2020, 3:31 PM IST
ಚಿಕ್ಕೋಡಿ: ರಾಯಬಾಗ ವಿಧಾನಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ರಂಗ ಬಲಪಡಿಸುವುದು ಮೊದಲ ಆದ್ಯತೆಯಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಲೋಕೋಪಯೋಗಿ ಇಲಾಖೆಯ ನಬಾರ್ಡ್ ಯೋಜನೆಯಡಿ ಅತಿವೃಷ್ಟಿಯಿಂದ ಹಾನಿಯಾದ 13 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಚಿಕ್ಕೋಡಿ ತಾಲೂಕಿನ ಮಜಲಟ್ಟಿ, ಮುಗಳಿ, ಕುಂಗಟೋಳ್ಳಿ, ಹತ್ತರವಾಟ, ತೋರಣಹಳ್ಳಿ, ಖಜಗೌಡನಹಟ್ಟಿ, ಮಾಂಗನೂರ, ವಡ್ರಾಳ ಹೀಗೆ 13 ಕಡೆಗಳಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ರಾಜ್ಯ ಸರಕಾರ 2.15 ಕೋಟಿ ರೂ. ಮಂಜೂರು ನೀಡಿದೆ. ಆಯಾ ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ಶಾಲಾ ಕೊಠಡಿ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ಮುಂಬರುವ ದಿನಗಳಲ್ಲಿ ಕರೋಶಿ ಹಾಗೂ ನಾಗರಮುನ್ನೋಳ್ಳಿ ಜಿಪಂ ವ್ಯಾಪ್ತಿಯಲ್ಲಿ 13 ಹೊಸ ಅಂಗನವಾಡಿ ಕೇಂದ್ರ ಮಂಜೂರು ಮಾಡಲಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಬೇಕಾದ ಎಲ್ಲ ಸೌಲಭ್ಯ ಒದಗಿಸುವ ಕೆಲಸ ಪ್ರಾಮಾಣಿಕ ಕೆಲಸ ಮಾಡಲಾಗುತ್ತದೆ ಎಂದರು ಮಹೇಶ ಭಾತೆ ಮಾತನಾಡಿ, ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬ ಸರಕಾರದ ನಿರ್ಧಾರದಿಂದ ಸರಕಾರ ಮೂಲ ಸೌಕರ್ಯ ಒದಗಿಸುತ್ತಿದೆ. ಬಿಸಿಯೂಟ, ವಿದ್ಯಾರ್ಥಿ ವೇತನ, ಬಟ್ಟೆ, ಸೈಕಲ್ ಮುಂತಾದ ಯೋಜನೆ ಮಕ್ಕಳಿಗೆ ಸಿಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಮಹೇಶ ಭಾತೆ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ನಿಂಗಪ್ಪ ಕುರುಬರ, ಬಿ.ಬಿ.ಬೇಡಕಿಹಾಳ, ಕಲ್ಮೇಶ ರಾಚನ್ನವರ, ರಾಜು ಹಿರೇಕೊಡಿ, ರಮೇಶ ಕಮತೆ, ಸಂತ್ರಾಮ ಕುಂಡ್ರುಕ, ವಿಜಯ ಕೊಟಿವಾಲೆ, ಈರಗೌಡ ಪಾಟೀಲ, ಎ.ಐ.ಕಾಕೊಳೆ ಮುಂತಾದವರು ಇದ್ದರು. ರಾಜು ಹರಗನ್ನವರ ಸ್ವಾಗತಿಸಿದರು.