ರೇಷನ್ ಕಾರ್ಡ್ ಇಲ್ಲದವರಿಗೆ ಫುಡ್ ಕಿಟ್
ಹೈಕೋರ್ಟ್ಗೆ ಸರಕಾರ ಹೇಳಿಕೆ
Team Udayavani, Apr 14, 2020, 5:59 AM IST
ಬೆಂಗಳೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ “ನಿರ್ದಿಷ್ಟ ಸಾರ್ವಜನಿಕ ವಿತರಣಾ ವ್ಯವಸ್ಥೆ’ಯ ಪ್ರಕಾರ ಅರ್ಹ ಕುಟುಂಬಗಳು ಎಂದು ಪರಿಗಣಿಸಲಾಗುವ ಬಿಪಿಎಲ್, ಎಪಿಎಲ್ ಮತ್ತು ಎಎವೈ ಕಾರ್ಡ್ದಾರರಿಗೆ ಮಾತ್ರ ಆಹಾರ ಧಾನ್ಯ ವಿತರಿಸಲು ಅವಕಾಶವಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ.
ಈ ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ| ಎ.ಎಸ್. ಓಕ್ ಹಾಗೂ ನ್ಯಾ| ಬಿ.ವಿ. ನಾಗರತ್ನಾ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರ ಈ ಸ್ಪಷ್ಟನೆ ನೀಡಿದೆ.
ಆದರೆ ಬಿಪಿಎಲ್, ಎಪಿಎಲ್ ಹಾಗೂ ಎಎವೈ ಕಾರ್ಡ್ ಇಲ್ಲದ ಕುಟುಂಬಗಳಿಗೆ ಅವರ ಮನೆಗಳಿಗೆ ಸರಕಾರದಿಂದ “ಫುಡ್ ಕಿಟ್’ಗಳನ್ನು ವಿತರಿ
ಸುವ ವ್ಯವಸ್ಥೆ ಮಾಡಲಾಗುವುದು. ಲಾಕ್ಡೌನ್ ಅವಧಿಗೆ ಬೇಕಾಗು ವಷ್ಟು ಆಹಾರ ಪದಾರ್ಥಗಳ ಕಿಟ್ಗಳನ್ನು ಕೊಡಲಾಗುವುದು ಎಂದು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ಭರವಸೆ ನೀಡಿದರು.
ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ, ಹಾಗಿದ್ದರೆ, ಬಿಪಿಎಲ್, ಎಪಿಎಲ್ ಹಾಗೂ ಎಎವೈ ಕಾರ್ಡ್ ಇಲ್ಲದವರಿಗೆ ಪಡಿತರ ಪೂರೈಸಲು ಸರಕಾರ ಮಾಡಲು ಉದ್ದೇಶಿಸಿರುವ ವ್ಯವಸ್ಥೆ ಬಗ್ಗೆ ಲಿಖೀತವಾಗಿ ಮಾಹಿತಿ ನೀಡಿ ಎಂದು ವಿಚಾರಣೆಯನ್ನು ಎ.16ಕ್ಕೆ ಮುಂದೂಡಿತು.
ರೇಷನ್ ಕಾರ್ಡ್ ಇಲ್ಲದ ಮತ್ತು ಆಹಾರ ಧಾನ್ಯ ಖರೀದಿಸಲು ಆರ್ಥಿಕ ಸಾಮರ್ಥ್ಯ ಹೊಂದಿಲ್ಲದ ಬಡವರು, ನಿರ್ಗತಿಕರು, ನಿರಾಶ್ರಿ ತರು, ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರಿಗೆ ಉಚಿತವಾಗಿ ಪಡಿತರ ನೀಡುವಂತೆ ಸೂಚಿಸಿದ್ದ ಹೈಕೋರ್ಟ್ ಈ ಬಗ್ಗೆ ವಿವರಣೆ ನೀಡುವಂತೆ ಎ. 9ರಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.
ಲಾಕ್ಡೌನ್ ಆದೇಶ ಜಾರಿಗೆ ಸುತ್ತೋಲೆ
ಬೆಂಗಳೂರು: ಲಾಕ್ಡೌನ್ ಅವಧಿ ಯಲ್ಲಿ ಎಲ್ಲ ಧರ್ಮಗಳ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಸಭೆ ಹಾಗೂ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುವ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾವೇಶಗಳನ್ನು ನಿಷೇಧಿಸಿರುವ ಕೇಂದ್ರ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸ ಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್ಗೆ ತಿಳಿಸಿದೆ.
ಈ ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ| ಎ.ಎಸ್. ಓಕ್ ಹಾಗೂ ನ್ಯಾ| ಬಿ.ವಿ. ನಾಗರತ್ನಾ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರ ಸೋಮವಾರ ಈ ಮಾಹಿತಿ ನೀಡಿದೆ.ವಿಚಾರಣೆ ವೇಳೆ ಲಿಖೀತ ವಾದ ಮಂಡಿಸಿದ ಸರಕಾರದ ಪರ ವಕೀಲರು, ಹೈಕೋರ್ಟ್ ನಿರ್ದೇಶನದಂತೆ ಎಡಿಜಿಪಿ (ಕಾನೂನು ಸುವ್ಯವಸ್ಥೆ) ಅಮರ್ಕುಮಾರ್ ಪಾಂಡೆ ಎ. 10ರಂದು ಹೊರಡಿಸಿರುವ ಸುತ್ತೋಲೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.