ವ್ಯಾಪಾರ ಚಟುವಟಿಕೆಗೆ ಮತ್ತಷ್ಟು ವೇಗ
ಲಾಕ್ಡೌನ್ ನಿಯಮಾವಳಿ ಸಡಿಲದಿಂದ ಹೆಚ್ಚಿದ ಜನರ ಓಡಾಟ
Team Udayavani, May 6, 2020, 5:45 AM IST
ಉಡುಪಿ: ತಿಂಗಳಿಗೂ ಅಧಿಕ ದಿನಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಭಾಗಶಃ ಸ್ಥಗಿತವಾಗಿದ್ದ ಉದ್ದಿಮೆ, ವ್ಯಾಪಾರಗಳು ಮಂಗಳವಾರದಿಂದ ಬಹುತೇಕ ಆರಂಭಗೊಂಡಿವೆ.
ಬೆಳಗ್ಗೆ 7ರಿಂದ ಸಂಜೆ 7ರವರೆಗೆ ನಿಗದಿಪಡಿಸಿದ ಕಾಲಾವಕಾಶದಲ್ಲಿ ಎಲ್ಲ ಅಂಗಡಿಗಳು ತೆರೆದಿದ್ದವು. ವ್ಯಾಪಾರ ಚಟುವಟಿಕೆಗಳು ಕಳೆದ ಕೆಲವು ದಿನಗಳಿಗಿಂತ ಹೆಚ್ಚಾಗಿದ್ದವು.
ಯಾವೆಲ್ಲ ಸೇವೆ?
ಸದ್ಯಕ್ಕೆ ಜಿಲ್ಲೆಯಲ್ಲಿ ಲಾಕ್ಡೌನ್ ನಿಯಮಾವಳಿಗಳನ್ನು ತುಸು ಸಡಿಲ ಗೊಳಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿ ಯಲ್ಲಿಯೂ ಹಿಂದಿನ ದಿನಗಳಂತೆ ಜನದಟ್ಟಣೆ ಇರಲಿಲ್ಲ. ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್, ಪಶು ಆಸ್ಪತ್ರೆ, ಆ್ಯಂಬು ಲೆನ್ಸ್, ಕೃಷಿ ಚಟುವಟಿಕೆಗಳು, ಎಪಿಎಂಸಿಗಳು, ಕೃಷಿ ಉಪಕರಣಗಳ ಮಾರಾಟ, ಬೀಜ, ಗೊಬ್ಬರ, ಕ್ರಿಮಿನಾಶಕ ಉತ್ಪಾದನ ಘಟಕ, ಕಾಫಿ, ಟೀ, ಹೈನುಗಾರಿಕೆ, ಹಾಲು-ಹಾಲಿನ ಉತ್ಪನ್ನ ಸಾಗಾಣಿಕೆ ಮತ್ತು ಮಾರಾಟ, ಮೀನುಗಾರಿಕೆ, ಬ್ಯಾಂಕ್ಗಳು, ಎಟಿಎಂ, ಸೆಕ್ಯುರಿಟಿ ಏಜೆನ್ಸಿ, ಸೆಬಿ, ವಿಮಾ ಕಂಪೆನಿ, ಅಂಗನವಾಡಿ ಕೇಂದ್ರಗಳು, ಆನ್ಲೈನ್ ಶಿಕ್ಷಣ, ನರೇಗಾ, ಡಿಟಿಎಚ್, ಕೇಬಲ್ ಸೇವೆ, ಗ್ರಾ.ಪಂ. ಮಟ್ಟದಲ್ಲಿ ಸರಕಾರ ಅನುಮತಿ ನೀಡಿರುವ ಸೇವಾ ವಲಯ, ಶೈತ್ಯ ದಾಸ್ತಾನು, ಕಿರಾಣಿ, ಮಾಂಸದ ಅಂಗಡಿ, ಕೊರಿಯರ್, ಅಂಚೆ, ಇ ಕಾಮರ್ಸ್, ರಸ್ತೆ, ಕಟ್ಟಡ ನಿರ್ಮಾಣ, ಜುವೆಲರಿ ಅಂಗಡಿಗಳು ಹಾಗೂ ಹೊಟೇಲ್ಗಳಲ್ಲಿ ಪಾರ್ಸೆಲ್ ಸೇವೆಗಳೆಲ್ಲ ಆರಂಭಗೊಂಡವು.
ವ್ಯಾಪಾರ
ಅಗತ್ಯ ವಸ್ತುಗಳಿಗೆ ನೀಡಲಾಗಿದ್ದ ಸಮಯಾವಕಾಶದ ಮಿತಿಯನ್ನು ವಿಸ್ತರಿಸಿರುವುದರಿಂದಾಗಿ ಮಂಗಳ ವಾರ ವ್ಯಾಪಾರ- ವಹಿವಾಟುಗಳೂ ಉತ್ತಮವಾಗಿ ನಡೆದವು. ಒಂದೆಡೆ ಜನರು ಸೇರಿದ್ದರೆ ಮತ್ತೂಂದು ಕಡೆಗಳಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದರು. ಜನ ಸೇರಿರುವಲ್ಲಿ ಯಾರೂ ಹೋಗಲು ತಯಾರಿರುತ್ತಿರಲಿಲ್ಲ. ಒಟ್ಟಿನಲ್ಲಿ ಗ್ರಾಹಕರಿಗೆ ಸಮಯಾವಕಾಶ ವಿಸ್ತರಿಸಿರುವುದರಿಂದ ಮತ್ತಷ್ಟು ನೆಮ್ಮದಿಯಾಯಿತು.
ಮದ್ಯದಂಗಡಿಗೆ ಮತ್ತೆ ಜನಜಂಗುಳಿ
ಸುಮಾರು 40 ದಿನಗಳಿಂದ ಬಂದ್ ಆಗಿದ್ದ ಮದ್ಯದಂಗಡಿಗಳಲ್ಲಿ ಸೋಮವಾರ ಸಹಜವಾಗಿಯೇ ಜನದಟ್ಟಣೆ ಹೆಚ್ಚಾಗಿತ್ತು. ಈ ದಟ್ಟಣೆ ಮಂಗಳವಾರವೂ ಮುಂದುವರಿಯಿತು. ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ಅವಕಾಶ ಇದ್ದರೂ ಕೂಡ ಗ್ರಾಹಕರ ಸಂಖ್ಯೆಯೇನೂ ಕಡಿಮೆಯಿರಲಿಲ್ಲ.
ಸಮಯ ವಿಸ್ತರಣೆಯಿಂದ ವ್ಯಾಪಾರ ನಿರಾಳ
ಸಂಜೆ 7 ಗಂಟೆವರೆಗೆ ವ್ಯಾಪಾರ ವಹಿವಾಟು ಮಾಡಲು ಅನುಮತಿ ಕೊಟ್ಟ ಕಾರಣ ಸ್ವಲ್ಪ ವ್ಯಾಪಾರ ಮಾಡಬಹುದು. ಹಿಂದೆ 11 ಗಂಟೆವರೆಗೆ ವಹಿವಾಟು ನಡೆಸಬೇಕೆನ್ನುವಾಗ ಅಂಗಡಿ ತೆರೆಯಲು, ಮುಚ್ಚಲಿಕ್ಕೇ ಸಮಯ ಹೋಗುತ್ತಿತ್ತು. ಈಗ ಹಾಗಿಲ್ಲ. ನಿರಾಳವಾಗಿ ವ್ಯಾಪಾರ ಮಾಡಬಹುದು.
-ಐರೋಡಿ ಸಹನಶೀಲ ಪೈ, ಅಧ್ಯಕ್ಷರು, ಜಿಲ್ಲಾ ವರ್ತಕರ ಸಂಘ, ಉಡುಪಿ.
ಸಹಜ ಸ್ಥಿತಿಗೆ ಮರಳಿದ ನಗರ
ಕುಂದಾಪುರ: ಲಾಕ್ಡೌನ್ ನಿಯಮಾವಳಿ ಸಡಿಲ ಮಾಡಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಅಂಗಡಿ, ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿದ ಕಾರಣ ಮಂಗಳ ವಾರ ಕುಂದಾಪುರ ನಗರದಲ್ಲಿ ಸಹಜ ವಾತಾವರಣ ಇತ್ತು. ಬಹುತೇಕ ಎಲ್ಲ ಅಂಗಡಿಗಳೂ ತೆರೆದಿದ್ದವು. ಕೆಲವೇ ಹೊಟೇಲ್ಗಳು ತೆರೆದಿದ್ದು, ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ಇತ್ತು. ಕುಳಿತು ತಿನ್ನಲು ಹೊಟೇಲ್ಗಳು ತೆರೆದಿರಲೇ ಇಲ್ಲ. ಶೋರೂಂಗಳಲ್ಲಿ ಸಾಮಾಜಿಕ ದೈಹಿಕ ಅಂತರ ಕಾಪಾಡಿಯೇ, ಸ್ಯಾನಿ ಟೈಸರ್ ಬಳಸಿ, ಗ್ಲೌಸ್ ಧರಿಸಿದ 10 ಮಂದಿಯನ್ನಷ್ಟೇ ಒಳ ಬಿಡುತ್ತ ವ್ಯವಹಾರ ನಡೆಸಲಾಯಿತು.
ಜನರ ದಟ್ಟಣೆ
ಮಿನಿ ವಿಧಾನಸೌಧದಲ್ಲಿ ಈ ದಿನವೂ ಪಾಸ್ಗಾಗಿ ಜನರ ದಟ್ಟಣೆ ಕಂಡು ಬಂತು. ಮದ್ಯದಂಗಡಿಗಳು 9 ಗಂಟೆ ಅನಂತರ ತೆರೆಯುವುದಾದರೂ ಜನರ ಸಾಲು ಮಾತ್ರ ಬೆಳಗ್ಗೆಯಿಂದಲೇ ಇತ್ತು. ಕೆಲವು ಸಂಸ್ಥೆಗಳು ಮಧ್ಯಾಹ್ನದವರೆಗೆ ಮಾತ್ರ ಕಾರ್ಯಾಚರಿಸಿದವು. ತರಕಾರಿ ಅಂಗಡಿ, ಬೇಕರಿ, ದಿನಸಿ ಅಂಗಡಿಗಳಲ್ಲಿ ಈ ಹಿಂದೆ ಇದ್ದಂತೆ ಜನದಟ್ಟಣೆ ಇರಲಿಲ್ಲ. ದಿನವಿಡೀ ಖರೀದಿಗೆ ಅವಕಾಶ ಇದ್ದ ಕಾರಣ ಜನ ನಿಧಾನವಾಗಿ ಬಂದು ಲಾಕ್ಡೌನ್ಗೂ ಹಿಂದಿನ ದಿನಗಳಂತೆ ವ್ಯವಹರಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ