GI: ಭೌಗೋಳಿಕ ಮಾನ್ಯತೆ- ಮರೆಯಾಗದಿರಲಿ ನಮ್ಮ ಸಂಜೀವಿನಿ
Team Udayavani, Jan 3, 2024, 5:47 AM IST
ಅರಿಸಿನ ಪುಡಿಗೆ ಗಾಯಗಳನ್ನು ಗುಣಪಡಿಸಬಲ್ಲ ಶಕ್ತಿಯಿದೆ ಎಂಬ ಕಾರಣವನ್ನೊಡ್ಡಿ 1993ರ ಡಿಸೆಂಬರ್ನಲ್ಲಿ ಭಾರತದ ಸಾಂಪ್ರ ದಾಯಿಕ ಉತ್ಪನ್ನವೆನಿಸಿದ ಅರಿಸಿನ ಪುಡಿಗೆ ಅಮೆರಿಕದ ಪ್ರತಿಷ್ಠಿತ ಮಿಸಿ ಸಿಪ್ಪಿ ವೈದ್ಯಕೀಯ ಕೇಂದ್ರ, ಮಿಸಿ ಸಿಪ್ಪಿ ವಿಶ್ವವಿದ್ಯಾನಿಲಯವು ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿತ್ತು. ಆ ಸಂದರ್ಭದಲ್ಲಿ ಭಾರತೀಯ ವೈಜ್ಞಾ ನಿಕ ಹಾಗೂ ಕೈಗಾರಿಕ ಸಂಶೋಧನ ನಿಗಮದ (ಐಸಿಎಸ್ಐಆರ್) ಅಧ್ಯಕ್ಷರಾಗಿದ್ದ ಆರ್.ಎ. ಮಾಶೇಲ್ಕರ್ ಪೇಟೆಂಟ್ ನೀಡಿದ್ದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತಕ್ಕ ಮಟ್ಟಿನ ಸಮಾಧಾನಕರ ಜಯವೂ ನಮ್ಮ ಪಾಲಾಯಿತು. ಆದರೆ ಇವತ್ತಿಗೂ ಸಹ ಅರಿಸಿನ ಪುಡಿಯಿಂದ ನಿರ್ಮಿತ ವಾಗುವ ಅನೇಕ ಔಷಧಗಳ ಪೇಟೆಂಟ್ ಅಮೆರಿಕ ಬಳಿಯಿವೆ.
ಇನ್ನು ಬೇವಿನ ಕುರಿತಾಗಿ ಪಾಶ್ಚಾತ್ಯ ರಾಷ್ಟ್ರಗಳಿಂದ ಇಂಥದ್ದೇ ಪ್ರಯತ್ನಗಳಾದವು. ಭಾರತೀಯರ ಸಮಯ ಪ್ರಜ್ಞೆಯಿಂದ ಅದರ ಕುರಿತಾದ ಅನೇಕ ಪೇಟೆಂಟ್ ನಮ್ಮದೇ ಉಳಿದವು. ನಮಗೆ ಅತೀ ದೊಡ್ಡ ಆಘಾತವಾದುದು ಭಾಸ್ಮತಿ ಅಕ್ಕಿಯ ವಿಚಾರದಲ್ಲಿ. ರೈಸ್ಟೆಕ್ ಎನ್ನುವ ಕಂಪೆನಿಯೊಂದು ಕಳೆದ ಹಲವು ದಶಕಗಳಿಂದ ಟೆಕ್ಸ್ಮತಿ ಹೆಸರಿನಿಂದ ಅಮೆರಿಕ ಶೈಲಿಯ ಭಾಸ್ಮತಿ ಅಕ್ಕಿಯೆಂಬುದಾಗಿಯೂ ಕಾಸ್ಮತಿ ಹೆಸರಿನಿಂದ ಭಾರತೀಯ ಶೈಲಿಯ ಭಾಸ್ಮತಿ ಅಕ್ಕಿಯೆಂಬುದಾಗಿಯೂ ಮಾರಾಟ ಮಾಡುತ್ತಿತ್ತು. 1995ರಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದ ಪಿ. ಚಿದಂಬರಂ ನೇತೃತ್ವದಲ್ಲಿ ಭಾಸ್ಮತಿಯ ಟ್ರೇಡ್ಮಾರ್ಕ್ ರಕ್ಷಿಸುವ ನಿಟ್ಟಿನಿಂದ ಭಾಸ್ಮತಿ ಅಭಿವೃದ್ಧಿ ನಿಧಿ ಸ್ಥಾಪಿಸಲಾಗಿತ್ತು. ಆ ನಿಯೋಗದ ಪ್ರಯತ್ನ ದಿಂದಾಗಿ 2000 ಸೆಪ್ಟಂಬರ್ನಲ್ಲಿ 20 ಟ್ರೇಡ್ಮಾರ್ಕ್ಗಳ ಪೈಕಿ 4 ರನ್ನು ರೈಸ್ಟೆಕ್ ಕಂಪೆನಿ ಹಿಂಪಡೆಯಿತು. ಇವತ್ತಿಗೂ ಅತೀ ಹೆಚ್ಚು ಬೆಲೆ ಯಲ್ಲಿ ಭಾಸ್ಮತಿ ಅಕ್ಕಿಯನ್ನು ಅಮೆರಿಕದಲ್ಲಿ ಮಾರಲಾಗುತ್ತಿದೆ.
ಏನಿದು ಜಿಐ ಟ್ಯಾಗ್?
ಸಹಜವಾಗಿಯೇ ಅವರ ಸಂಶೋಧನೆಗಳನ್ನು ನಮಗೆ ತಡೆಯಲಾಗುವುದಿಲ್ಲ. ಆದರೂ ಒಂದು ಪ್ರಮುಖ ವ್ಯತ್ಯಾಸವನ್ನು ನಾವು ಗಮನಿಸಬೇಕು. ಭಾರತ ಒಂದೊಂದು ಉತ್ಪನ್ನಕ್ಕೆ ಪೇಟೆಂಟ್ ಪಡೆಯಲು ಯತ್ನಿಸಿದರೆ, ಅಮೆರಿಕ ಅದೇ ಉತ್ಪನ್ನಕ್ಕೆ ಮೂಲವಾದ ವಿವಿಧ ತಳಿಗಳ ಮೇಲೂ ತಮ್ಮ ಹಕ್ಕನ್ನು ಮಂಡಿಸುತ್ತದೆ. ಇದು ಬದಲಾಗಬೇಕಿದೆ. ಆ ನಿಟ್ಟಿನಲ್ಲಿಯೇ 2003ರಲ್ಲಿ ಭೌಗೋಳಿಕ ಮಾನ್ಯತೆ (ಜಿಐ) ವಿಶ್ವ ವ್ಯಾಪಾರ ಸಂಸ್ಥೆಯ ಮಾನ್ಯತೆಯೊಂದಿಗೆ ಜಾರಿಗೊಳಿಸಲಾಗಿದೆ. ಇದರ ಪ್ರಕಾರ ಯಾವುದೇ ಉತ್ಪನ್ನ ಆಯಾ ಭೌಗೋಳಿಕ ಪ್ರದೇಶದಲ್ಲಿ ಉತ್ಪತ್ತಿಯಾಗುವ/ ಬೆಳೆಯುವುದಿ ದ್ದರೆ ಅದರ ವಿಶೇಷ ಮಾನ್ಯತೆಗಾಗಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಅರ್ಜಿ ಪುರಸ್ಕೃತವಾದರೆ ಮಾರುಕಟ್ಟೆಯಲ್ಲಿ ಅದರ ವಿಶೇಷತೆಯಿಂದ ಜನಮನ್ನಣೆಗಳಿಸಿ ಬೆಳೆ/ಉತ್ಪನ್ನ ಗಳನ್ನು ವಿಶೇಷ
ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ ಮಟ್ಟುಗುಳ್ಳ ಬದನೆ: ಒಂದು ಮಾದರಿ
ನಮ್ಮ ಪ್ರಯತ್ನಗಳಿಗೆ ತಕ್ಕುದಾದ ಫಲ ಸಿಕ್ಕಿದ್ದು ಮಟ್ಟುಗುಳ್ಳ ಬದನೆಗೆ ಎನ್ನಬಹುದು. ನಬಾರ್ಡ್ ಸಂಸ್ಥೆ ಜತೆಗೂಡಿ ನಾವು ಮಟ್ಟುವಿನಲ್ಲಿ ಬೆಳೆಯುವ ಬದನೆಯ ವಿಶೇಷತೆಗಳ ಕುರಿತಾಗಿ ರೈತರಲ್ಲಿ ಜಾಗೃತಿ ಮೂಡಿಸಿ, ಅವರಿಗೆ ಜಿಐ ಟ್ಯಾಗ್ಗೆ ಅಗತ್ಯವಿರುವ ಅರ್ಜಿಗಳನ್ನು ಭರ್ತಿ ಮಾಡಿಸಿದ್ದೆವು. ಮೊಟ್ಟ ಮೊದಲ ಬಾರಿಗೆ ಜಿಐ ಟ್ಯಾಗ್ ನೊಂದಿಗೆ ಮಟ್ಟು ಗುಳ್ಳ ಬದನೆಗೆ ಸ್ಟಿಕ್ಕರ್ ಹಾಕಲ್ಪಟ್ಟವು. ಈಗ ಉಳಿದ ಬದನೆಗಳಿಗಿಂತ ವಿಶೇಷ ಮಾನ್ಯತೆ ಹೊಂದಿ, ಅಧಿಕ ಬೆಲೆಗೆ ಮಾರಾಟಗೊಳ್ಳು ತ್ತಿದೆ. ಉಳಿದ ಪ್ರದೇಶಗಳಲ್ಲಿನ ಇನ್ನುಳಿದ ಉತ್ಪನ್ನಗಳಿಗೂ ಇದೇ ರೀತಿ ಮಾಡಿಸಿಕೊಡಬೇಕೆಂಬ ಬೇಡಿಕೆಗಳು ಹೆಚ್ಚಾ ಗುತ್ತಿವೆ. ಒಂದು ಸರಕಾರ ರೈತರ ಆದಾಯಗಳನ್ನು ದ್ವಿಗುಣ ಮಾಡಬೇಕೆಂಬ ಕಾರ್ಯಯೋಜನೆ ರೂಪಿಸಿಕೊಳ್ಳುತ್ತವೆ. ಆದರೆ ವಾಸ್ತವವಾಗಿ ನಮ್ಮಲ್ಲಿ ಅದೆಷ್ಟು ಜನ ಅದಕ್ಕೆ ಪೂರಕ ವಾಗಿ ಸಕಾರಾತ್ಮಕವಾಗಿ ಸ್ಪಂದಿಸಲು ತಯಾರಿದ್ದೇವೆ? ನನ್ನ ಅನುಭವದಲ್ಲಿ ಹೇಳುವುದಿದ್ದರೆ ಅತ್ಯಲ್ಪ.
ಒಂದು ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಉಡುಪಿ ಸೀರೆಗೆ ಜಿಐ ಟ್ಯಾಗ್ ಮಾನ್ಯತೆ ದೊರೆತ ಹಾಗೆ, ಶಂಕರಪುರ ಮಲ್ಲಿಗೆಗೂ ದೊರೆಯಬೇಕೆಂಬ ಹಂಬಲ ನಮಗೆ. ಆದರೆ ವಾಸ್ತವವಾಗಿ ನಮಗೆ ಚಿರಪರಿಚಿತವಾಗಿರುವ ಶಂಕರಪುರ ಮಲ್ಲಿಗೆಗೆ ಉಡುಪಿ ಮಲ್ಲಿಗೆ ಎಂಬ ಬಿರುದು. ಒಂದು ವೇಳೆ ನಮ್ಮ ಮನೆಗೆ ಬಂದಾತ, ಈ ಮಲ್ಲಿಗೆ ತುಂಬಾ ಸುಗಂಧಪೂರಿತವಾಗಿದೆ ಎಂದು 2-3 ಸಸಿಗಳನ್ನು ತೆಗೆದುಕೊಂಡು ತನ್ನ ಮನೆಯಲ್ಲಿ ನೆಟ್ಟು, ಅಲ್ಲಿಯೇ ಮಲ್ಲಿಗೆ ಕೃಷಿ ಆರಂಭಿಸಿದ ಎಂದಿಟ್ಟು ಕೊಳ್ಳೋಣ. ಅನಂತರ ತನ್ನ ಊರಿನಲ್ಲಿ ಉಡುಪಿ ಮಲ್ಲಿಗೆ ಹೆಸರಿನಲ್ಲಿ ಮಾರಲು ಪ್ರಾರಂಭಿಸಿದ. ಈ ಸಂದರ್ಭದಲ್ಲಿ ನಷ್ಟ ಯಾರಿಗೆ ಎನ್ನುವ ಪ್ರಜ್ಞೆ ನಮ್ಮಲ್ಲಿ ಮೂಡಿದರೆ ನಮ್ಮ ಪ್ರಯತ್ನ ಸಾರ್ಥಕ್ಯವೆನಿಸುತ್ತದೆ. ಮೇಲೆ ಉಲ್ಲೇಖ ಮಾಡಿದ ರೀತಿಯ ಸಂದರ್ಭ ಬರಬಾರದೆಂಬ ಕಾರಣಕ್ಕೆ ಭೌಗೋಳಿಕವಾಗಿ ಉತ್ಪನ್ನಕ್ಕೆ ಮಾನ್ಯತೆ ನೀಡುವ ಪ್ರಕ್ರಿಯೆ ಪ್ರಾರಂಭವಾದುದು ಎಂಬುದನ್ನು ರೈತರಾಗಿ ಅರಿಯಬೇಕಾಗಿದೆ.
ಜಿಐ ಟ್ಯಾಗ್ ಮಾನ್ಯತೆಗೆ ನಾವೇನು ಮಾಡಬೇಕು?
ಯಾವುದೇ ಬೆಳೆ/ ಉತ್ಪನ್ನಕ್ಕೆ ಭೌಗೋಳಿಕ ಸೂಚನೆಯ ಟ್ಯಾಗ್ ಸಿಗಬೇಕಾದರೆ 2 ಅರ್ಜಿಗಳನ್ನು ಭರ್ತಿ ಮಾಡಬೇಕು. ಫಾರ್ಮ್ ಎ ಮತ್ತು ಫಾರ್ಮ್ ಬಿ. ಈ ಟ್ಯಾಗ್ನ ಸಿಂಧುತ್ವ 10 ವರ್ಷಗಳು. ತದನಂತರ ಪುನಃ ಜಿಯೋಗ್ರಾಫಿಕಲ್ ಇಂಡಿಕೇಟರ್ ರಿಜಿಸ್ಟ್ರಿಗೆ ಅರ್ಜಿ ಸಲ್ಲಿಸಬೇಕು. ನೀವು ಆಯಾ ಬೆಳೆ/ಉತ್ಪನ್ನದ ಅಧಿಕೃತ ಮಾರಾಟಗಾರ/ಬೆಳೆಗಾರ ಅಂದರೆ “ಆಥರೈಸ್ಡ್ ಯೂಸರ್ ಸರ್ಟಿಫಿಕೆಟ್’ ಪಡೆಯಬೇಕಾದರೆ ಫಾರ್ಮ್ ಬಿ ಕೂಡ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.
ಕೊನೆಯ ಮಾತು
ಅರಿಶಿನ ಪುಡಿಯೂ ನಮ್ಮದೇ. ಆದರೆ ಎಲ್ಲ ಹಕ್ಕು ನಮ್ಮ ಲ್ಲಿಲ್ಲ. ಭಾಸ್ಮತಿ ಅಕ್ಕಿಯೂ ನಮ್ಮದೇ. ಆದರೆ ಹಕ್ಕು? ಇನ್ನಾರದ್ದೋ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ನಮ್ಮ ಊರಿನ ವಿಶೇಷ ಬೆಳೆ/ ಉತ್ಪನ್ನ ಆಗಬೇಕೇ ಬೇಡವೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದವರು ಕಂಡು ಕೊಂಡರೆ ಭಾರತೀಯ ಕೃಷಿ, ತನ್ಮೂಲಕ ಕೃಷಿಕರು ಇನ್ನಷ್ಟು ಸಮೃದ್ಧಿ ಯಾಗಬಲ್ಲರೆಂಬುದರಲ್ಲಿ ಸಂದೇಹವಿಲ್ಲ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ನಿಜ. ಆದರೆ, ಚಿಂತಿಸದೇ ಫಲ ಬೇಕೆಂದರೆ ಹೇಗೆ?
ಡಾ| ಹರೀಶ್ ಜಿ ಜೋಶಿ, ಮಣಿಪಾಲ